ನವದೆಹಲಿ: ಫಿಡೆ ಆಯೋಜಿಸಿದ್ದ ಆನ್ಲೈನ್ ಚೆಸ್ ಒಲಿಂಪಿಯಾಡ್ನಲ್ಲಿ ಗಳಿಸಿದ ಚಿನ್ನದ ಪದಕಕ್ಕೆ ಶ್ರೀನಾಥ್ ನಾರಾಯಣನ್ ಸುಂಕ ತೆತ್ತಿದ್ದು ವಿಷಯ ತಿಳಿದ ಕೇಂದ್ರ ಕ್ರೀಡಾ ಸಚಿವರು ಸುಂಕದ ಮೊತ್ತವನ್ನು ವಾಪಸ್ ನೀಡಲು ಕ್ರಮ ಕೈಗೊಂಡಿದ್ದಾರೆ.
ಆಗಸ್ಟ್ನಲ್ಲಿ ನಡೆದ ಆನ್ಲೈನ್ ಚೆಸ್ ಒಲಿಂಪಿಯಾಡ್ನಲ್ಲಿ ಶ್ರೀನಾಥ್ ಪದಕ ಗೆದ್ದಿದ್ದರು. ಆದರೆ ಅದನ್ನು ಪಡೆದುಕೊಳ್ಳಬೇಕಾದರೆ ₹ 6,300 ಮೊತ್ತದ ಸುಂಕವನ್ನು ನೀಡಿದ್ದರು. ಈ ವಿಷಯವನ್ನು ಸಾಮಾಜಿಕ ತಾಣಗಳ ಮೂಲಕ ಶ್ರೀನಾಥ್ ಬಹಿರಂಗ ಮಾಡಿದ ಬೇಸರ ವ್ಯಕ್ತಪಡಿಸಿದ್ದರು. ಕ್ರೀಡಾ ಸಚಿವರ ಗಮನಕ್ಕೆ ಬಂದಿತ್ತು. ಈ ಕುರಿತು ಟ್ವೀಟ್ ಮಾಡಿರುವ ಕಿರಣ್ ರಿಜಿಜು ತಮ್ಮ ಕಚೇರಿಯ ಸಿಬ್ಬಂದಿ ಶ್ರೀನಾಥ್ ನಾರಾಯಣನ್ ಅವರೊಂದಿಗೆ ಮಾತನಾಡಿದ್ದು ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ತಿಳಿಸಿದ್ದಾರೆ.
‘ಸುಂಕ ವಸೂಲಿ ಮಾಡಿದ ವಿಷಯ ತಿಳಿದು ಬೇಸರವಾಯಿತು. ಹೀಗಾಗಿ ತಕ್ಷಣ ಕ್ರೀಡಾಪಟುವನ್ನು ಮಾತನಾಡಿಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಲಾಗಿದೆ. ಕಸ್ಟಮ್ಸ್ ಮತ್ತು ಕೊರಿಯರ್ ಕಂಪನಿಯ ನಡುವಿನ ಗೊಂದಲದಿಂದಾಗಿ ಹೀಗಾಗಿದೆ. ಕಂಪನಿಗೆ ತಪ್ಪಿನ ಅರಿವಾಗಿದ್ದು ಹಣ ವಾಪಸ್ ನೀಡಲು ಒಪ್ಪಿಕೊಂಡಿದೆ’ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
‘ಟೂರ್ನಿ ಆಯೋಜಿಸಿದ್ದಕ್ಕೆ ಫಿಡೆಗೆ ಧನ್ಯವಾದ ಸಲ್ಲಲೇಬೇಕು. ಪದಕ ಗೆದ್ದಿದ್ದು ಖುಷಿ ತಂದಿತ್ತು. ರಷ್ಯಾದಿಂದ ಮೂರೇ ದಿನಗಳಲ್ಲಿ ಪಕದ ಭಾರತಕ್ಕೆ ಬಂದು ತಲುಪಿದೆ. ಆದರೆ ನನ್ನ ಕೈಸೇರಲು ಒಂದು ವಾರಕ್ಕೂ ಹೆಚ್ಚು ಸಮಯವಾಗಿದೆ. ಕೊನೆಗೆ ಅದನ್ನು ಪಡೆದುಕೊಳ್ಳಲು ಸುಂಕ ತೆರಬೇಕಾಯಿತು’ ಎಂದು ಶ್ರೀನಾಥ್ ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.