ADVERTISEMENT

ಸರ್ದಾರ್‌ಗೆ ಸಚಿನ್‌ ಪ್ರೇರಣೆ

ಪಿಟಿಐ
Published 15 ಸೆಪ್ಟೆಂಬರ್ 2018, 15:52 IST
Last Updated 15 ಸೆಪ್ಟೆಂಬರ್ 2018, 15:52 IST

ನವದೆಹಲಿ: ‘ಕಾಮನ್‌ವೆಲ್ತ್‌ ಕ್ರೀಡಾಕೂಟದ ತಂಡದಿಂದ ನನ್ನನ್ನು ಕೈಬಿಟ್ಟಾಗ ಮಾನಸಿಕವಾಗಿ ಕುಸಿದುಹೋಗಿದ್ದೆ. ಈ ವೇಳೆ ನನಗೆ ಧೈರ್ಯ ತುಂಬಿ ಪ್ರೇರೆಪಿಸಿದ್ದು ಹಿರಿಯ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌’ ಎಂದು ಹಿರಿಯ ಹಾಕಿ ಆಟಗಾರ ಸರ್ದಾರ್‌ ಸಿಂಗ್‌ ಹೇಳಿದ್ದಾರೆ.

32 ವರ್ಷದ ಸರ್ದಾರ್‌, ಅಂತರರಾಷ್ಟ್ರೀಯ ಹಾಕಿಗೆ ಬುಧವಾರವಷ್ಟೇ ನಿವೃತ್ತಿ ಘೋಷಿಸಿದ್ದಾರೆ. ಇತ್ತೀಚೆಗೆ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ನಿರೀಕ್ಷಿತ ಸಾಮರ್ಥ್ಯ ತೋರುವಲ್ಲಿ ತಂಡ ವಿಫಲವಾಗಿದ್ದಕ್ಕೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದರು.

‘ಹಿಂದಿನ 3–4 ತಿಂಗಳಲ್ಲಿ ಸಚಿನ್‌ ಅನೇಕ ಸಲಹೆಗಳನ್ನು ನೀಡಿದ್ದಾರೆ. ತಂಡದಲ್ಲಿ ಸ್ಥಾನ ಗಳಿಸಲು ವಿಫಲನಾಗಿದ್ದೆ. ಅವು ನನ್ನ ಕಷ್ಟದ ದಿನಗಳು. ಆಗೆಲ್ಲ ಅವರಿಗೆ ಹಲವು ಬಾರಿ ಮೊಬೈಲ್‌ ಮೂಲಕ ಕರೆ ಮಾಡಿ ಮಾತನಾಡಿದ್ದೆ’ ಎಂದು ಸರ್ದಾರ್‌ ಸ್ಮರಿಸಿಕೊಂಡಿದ್ದಾರೆ.

ADVERTISEMENT

‘ವಿಮರ್ಶೆಗೆ ಕುಗ್ಗದೇ ಕೇವಲ ನನ್ನ ಆಟದ ಮೇಲೆ ಗಮನ ಕೇಂದ್ರಿಕರಿಸಲು ತೆಂಡೂಲ್ಕರ್‌ ಹೇಳಿದ್ದರು. ನನ್ನ ಆಟದ ಹಳೆಯ ವಿಡಿಯೊಗಳನ್ನು ನೋಡಿ ಸಿದ್ಧತೆ ಮಾಡಿಕೊಳ್ಳಲು ತಿಳಿಸಿದ್ದರು. ಈ ಎಲ್ಲ ಸಲಹೆಗಳು ನನಗೆ ನೆರವು ನೀಡಿದವು’ ಎಂದು ಅವರು ತಿಳಿಸಿದ್ದಾರೆ.

ಕಾಮನ್‌ವೆಲ್ತ್‌ ನಂತರ ನಡೆದ ಚಾಂಪಿಯನ್ಸ್‌ ಟ್ರೋಫಿ ಹಾಗೂ ಏಷ್ಯನ್‌ ಕ್ರೀಡಾಕೂಟಗಳಲ್ಲಿ ತಂಡಕ್ಕೆ ಮರಳಿದ್ದ ಸರ್ದಾರ್‌ ಉತ್ತಮ ಸಾಮರ್ಥ್ಯ ತೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.