ADVERTISEMENT

ಬ್ಯಾಡ್ಮಿಂಟನ್‌: ಶ್ರೀಕಾಂತ್‌ ಮುನ್ನಡೆ, ಸಿಂಧು ಪ್ರಣಯ್‌ಗೆ ಹಿನ್ನಡೆ

ಹಾಂಗ್‌ಕಾಂಗ್ ಓಪನ್‌ ಬ್ಯಾಡ್ಮಿಂಟನ್‌

ಪಿಟಿಐ
Published 14 ನವೆಂಬರ್ 2019, 19:45 IST
Last Updated 14 ನವೆಂಬರ್ 2019, 19:45 IST
ಕಿಡಂಬಿ ಶ್ರೀಕಾಂತ್‌
ಕಿಡಂಬಿ ಶ್ರೀಕಾಂತ್‌   

ಹಾಂಗ್‌ಕಾಂಗ್: ಕಿಡಂಬಿ ಶ್ರೀಕಾಂತ್‌, ಏಳು ತಿಂಗಳಲ್ಲಿ ಮೊದಲ ಬಾರಿ ಪ್ರಮುಖ ಟೂರ್ನಿಯೊಂದರ ಕ್ವಾರ್ಟರ್‌ಫೈನಲ್‌ ತಲುಪಿದರು. ಉಳಿದಂತೆ ಹಾಂಗ್‌ಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿಗುರುವಾರ ಭಾರತದ ಪಿ.ವಿ.ಸಿಂಧು, ಪರುಪಳ್ಳಿ ಕಶ್ಯಪ್‌, ಎಚ್‌.ಎಸ್‌.ಪ್ರಣಯ್‌ ಸೋಲುಕಂಡರು.

ವಿಶ್ವ ಕ್ರಮಾಂಕದಲ್ಲಿ 13ನೇ ಸ್ಥಾನದಲ್ಲಿರುವ ಶ್ರೀಕಾಂತ್‌ ಪುರುಷರ ಸಿಂಗಲ್ಸ್‌ ಎರಡನೇ ಸುತ್ತಿನ ಪಂದ್ಯದಲ್ಲಿ ತೀವ್ರ ಹೋರಾಟದ ನಂತರ ಸ್ವದೇಶದ ಸೌರಭ್‌ ವರ್ಮಾ ಅವರನ್ನು 21–11, 15–21, 21–19 ರಿಂದ ಸೋಲಿಸಿದರು. ಈ ಪಂದ್ಯ 59 ನಿಮಿಷ ನಡೆಯಿತು.

ಗುಂಟೂರಿನ ಶ್ರೀಕಾಂತ್‌ ಕಳೆದ ಏಪ್ರಿಲ್‌ನಲ್ಲಿ ಸಿಂಗಪುರ ಓಪನ್‌ ಟೂರ್ನಿಯ ಎಂಟರ ಘಟ್ಟ ತಲುಪಿದ್ದರು. ಅವರಿಗೆ ಈ ಟೂರ್ನಿಯ ಮೊದಲ ಸುತ್ತಿನಲ್ಲಿ ಜಪಾನ್‌ನ ಕೆಂಟೊ ಮೊಮೊಟಾ ಅವರಿಂದ ‘ಬೈ’ ದೊರಕಿತ್ತು. ಆದರೆ ಈಗ ಎಂಟರ ಘಟ್ಟದಲ್ಲಿ ಅವರು ಒಲಿಂಪಿಕ್‌ ಚಾಂಪಿಯನ್‌ ಚೆನ್‌ ಲಾಂಗ್‌ ಅವರನ್ನು ಎದುರಿಸಬೇಕಾಗಿದೆ.

ADVERTISEMENT

ಇದಕ್ಕೆ ಮೊದಲು, ಎಚ್‌.ಎಸ್‌.ಪ್ರಣಯ್‌, ಎರಡನೇ ಸುತ್ತಿನ ಪಂದ್ಯದಲ್ಲಿ ಆರನೇ ಶ್ರೇಯಾಂಕದ ಜೊನಾಥನ್ ಕ್ರಿಸ್ಟಿ ಎದುರು 12–21, 19–21 ರಿಂದ ನೇರ ಗೇಮ್‌ಗಳಲ್ಲಿ ಹಿಮ್ಮೆಟ್ಟಿದ್ದರು.

ಎರಡನೇ ಶ್ರೇಯಾಂಕದ ಚೊವ್‌ ಟಿಯನ್‌ ಚೆನ್‌12–21, 23–21, 21–10ರಲ್ಲಿಪರುಪಳ್ಳಿ ಕಶ್ಯಪ್‌ ಅವರನ್ನು ಮಣಿಸಿದರು.

ಮಹಿಳೆಯರ ಸಿಂಗಲ್ಸ್‌ ಎರಡನೇ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್‌ನ ಬುಸಾನನ್ ಒಂಗ್ಬಾಮ್‌ರುಂಗ್‌ಫಾಮ್‌ 21–18, 11–21, 21–16 ರಿಂದ ಆರನೇ ಶ್ರೇಯಾಂಕದ ಸಿಂಧು ಅವರನ್ನು ಮಣಿಸಿದರು. ಇದರೊಡನೆ ವಿಶ್ವ ಚಾಂಪಿಯನ್‌ ಆದ ನಂತರ ಸಿಂಧು ಅವರ ಪರದಾಟ ಮುಂದುವರಿದಂತಾಗಿದೆ.

ಮಿಕ್ಸ್ಡ್‌ ಡಬಲ್ಸ್‌ನಲ್ಲಿ ಜಪಾನ್‌ನ ಯುಟಾ ವತಾನಬೆ– ಅರಿಸಾ ಹಿಗಾಶಿನೊ ಅವರು 21–19, 21–12 ರಿಂದ ಭಾರತದ ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ– ಆಶ್ವಿನಿ ಪೊನ್ನಪ್ಪ ಜೋಡಿಯನ್ನು ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.