ಚೆನ್ನೈ: ಅಖಿಲ ಭಾರತ ಚೆಸ್ ಫೆಡರೇಷನ್ (ಎಐಸಿಎಫ್) ಅಧ್ಯಕ್ಷರಾಗಿ ಉತ್ತರ ಪ್ರದೇಶ ಚೆಸ್ ಸಂಸ್ಥೆಯ ಸಂಜಯ್ ಕಪೂರ್ ಸೋಮವಾರ ಆಯ್ಕೆಯಾದರು. ಕಾರ್ಯದರ್ಶಿ ಹುದ್ದೆಯನ್ನು ಉಳಿಸಿಕೊಳ್ಳುವಲ್ಲಿ ಭರತ್ ಸಿಂಗ್ ಚೌಹಾಣ್ ಯಶಸ್ವಿಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ನಡೆದ ಜಿದ್ದಾಜಿದ್ದಿಯ ಪೈಪೋಟಿಯಲ್ಲಿ ಕಪೂರ್ 33 ಮತ ಗಳಿಸಿದ್ದರೆ ಪ್ರತಿಸ್ಪರ್ಧಿ ಪಿ.ಆರ್.ವೆಂಕಟರಾಮ ರಾಜ 31 ಮತ ಪಡೆದರು. ಕಾರ್ಯದರ್ಶಿ ಹುದ್ದೆಯ ಪ್ರತಿಸ್ಪರ್ಧಿ ರವೀಂದ್ರ ಡೊಂಗ್ರೆ ಅವರನ್ನು ಚೌಹಾಣ್ 35–29 ಮತಗಳಿಂದ ಸೋಲಿಸಿದರು. ಕಿಶೋರ್ ಬಂಡೇಕರ್ ವಿರುದ್ಧ 34–30 ಮತಗಳಿಂದ ಗೆದ್ದ ನರೇಶ್ ಶರ್ಮಾ ಅವರು ಖಜಾಂಚಿಯಾದರು.
15 ವರ್ಷಗಳಿಂದ ಚೆಸ್ ಫೆಡರೇಷನ್ಗೆ ಅವಿರೋಧ ಆಯ್ಕೆ ನಡೆಯುತ್ತಿತ್ತು. ಆದರೆ ಈ ಬಾರಿ ಎರಡು ಗುಂಪುಗಳು ಪೈಪೋಟಿಗೆ ಇಳಿದ ಕಾರಣ ಚುನಾವಣೆ ನಡೆಸಬೇಕಾಗಿ ಬಂದಿತ್ತು. ಕೋವಿಡ್–19ರಿಂದಾಗಿ ಚುನಾವಣೆಯನ್ನು ಆನ್ಲೈನ್ ಮೂಲಕ ನಡೆಸಲಾಗಿತ್ತು. ನ್ಯಾಯಾಲಯವು ವೀಕ್ಷಕರಾಗಿ ನೇಮಕ ಮಾಡಿದ್ದ ನಿವೃತ್ತ ನ್ಯಾಯಮೂರ್ತಿ ಕೆ.ಕಣ್ಣನ್ ಅವರು ಚುನಾವಣಾಧಿಕಾರಿಯಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.