
ನವದೆಹಲಿ: ಅಪ್ರಾಪ್ತ ವಯಸ್ಸಿನ ಸ್ಪರ್ಧಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಭಾರತ ಶೂಟಿಂಗ್ ತರಬೇತುದಾರರಲ್ಲಿ ಒಬ್ಬರಾದ ಅಂಕುಶ್ ಭಾರದ್ವಾಜ್ ಅವರನ್ನು ಭಾರತ ರಾಷ್ಟ್ರೀಯ ರೈಫಲ್ಸ್ ಸಂಸ್ಥೆ (ಎನ್ಆರ್ಎಐ) ಅಮಾನತು ಮಾಡಿದೆ.
ಡಿಸೆಂಬರ್ನಲ್ಲಿ ನವದೆಹಲಿಯ ಕರ್ಣಿಸಿಂಗ್ ರೇಂಜ್ನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್ಷಿಪ್ ವೇಳೆ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಸಂತ್ರಸ್ತೆ ದೂರು ನೀಡಿದ್ದಳು. ಪ್ರಕರಣ ಫರೀದಾಬಾದ್ ಹೋಟೆಲ್ ಒಂದರಲ್ಲಿ ನಡೆದಿರುವ ಕಾರಣ ಅಂಕುಶ್ ವಿರುದ್ಧ ಅಲ್ಲಿನ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿರುವುದನ್ನು ಎನ್ಆರ್ಎಐ ದೃಢಪಡಿಸಿದೆ.
ಕೋಚ್ ವಿರುದ್ಧ ಪೋಕ್ಸೊ ಕಾಯಿದೆಯ ಆರನೇ ಸೆಕ್ಷನ್ (ಲೈಂಗಿಕ ದೌರ್ಜನ್ಯ) ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 351 (2) (ಬೆದರಿಕೆ) ಅಡಿ ಪ್ರಕರಣ ದಾಖಲಾಗಿದೆ.
‘ಅಂಕುಶ್ ಅವರನ್ನು ಎನ್ಆರ್ಎಐ ಅಮಾನತು ಮಾಡಿದೆ. ಅವರಿಗೆ ಷೋಕಾಸ್ ನೋಟಿಸ್ ನೀಡಲಾಗಿದೆ’ ಎಂದು ಸಂಸ್ಥೆಯ ಕಾರ್ಯದರ್ಶಿ ರಾಜೀವ್ ಭಾಟಿಯಾ ಪಿಟಿಐಗೆ ತಿಳಿಸಿದ್ದಾರೆ.
ಎನ್ಆರ್ಎಐ ಶಿಫಾರಸಿನ ಆಧಾರದಲ್ಲಿ, ಭಾರತ ಕ್ರೀಡಾ ಪ್ರಾಧಿಕಾರವು ಅಂಕುಶ್ಗೆ 2024ರ ಪ್ಯಾರಿಸ್ ಒಲಿಂಪಿಕ್ಸ್ಗೆ 27 ಸದಸ್ಯರ ಕೋಚಿಂಗ್ ತಂಡದಲ್ಲಿ ಸ್ಥಾನ ನೀಡಿತ್ತು.
2025ರ ಆಗಸ್ಟ್ನಿಂದ 17 ವರ್ಷ ವಯಸ್ಸಿನ ಸಂತ್ರಸ್ತೆ, ಅಂಕುಶ್ ಅವರಿಂದ ತರಬೇತಿ ಪಡೆಯುತ್ತಿದ್ದಳು. ಘಟನೆಯ ಆಘಾತದಲ್ಲಿದ್ದ ಈಕೆ ಜನವರಿ 1ರಂದು ತಾಯಿಯ ಸಮ್ಮುಖದಲ್ಲಿ ದೂರು ನೀಡಿದ್ದಾಳೆ.
‘ಮೊಹಾಲಿ, ಪಟಿಯಾಲಾ, ಡೆಹ್ರಾಡೂನ್ ಮತ್ತು ದೆಹಲಿಯಂಥ ಕಡೆ ತರಬೇತಿಗೆ ಬರುವಂತೆ ಕೋಚ್ ಕರೆ ಮಾಡುತ್ತಿದ್ದರು. ಆಗೆಲ್ಲಾ ಅದೇ ದಿನ ಮನೆಗೆ ಹಿಂತಿರುಗುತ್ತಿದ್ದುದಾಗಿ’ ಎಫ್ಐಆರ್ನಲ್ಲಿ ತಿಳಿಸಿದ್ದಾಳೆ.
‘ಘಟನೆ ನಡೆದ ದಿನ ನಾನೊಬ್ಬಳೇ ಕರ್ಣಿ ಸಿಂಗ್ ರೇಂಜ್ಗೆ ಟ್ಯಾಕ್ಸಿಯಲ್ಲಿ ತೆರಳಿದ್ದೆ’ ಎಂದು ತಿಳಿಸಿದ್ದಾರೆ. ಸ್ಪರ್ಧೆ ಮುಗಿಸಿ ಮನೆಗೆ ಹೋಗುವ ತಯಾರಿಯಲ್ಲಿದ್ದಾಗ, ಸ್ಪರ್ಧೆಗಳಲ್ಲಿ ನೀಡಿದ ಪ್ರದರ್ಶನದ ಮೌಲ್ಯಮಾಪನ ನಡೆಸಲು ಫರೀದಾಬಾದ್ ಬಳಿಯ ಸೂರಜ್ ಕುಂಡ್ ಹೋಟೆಲ್ ಲಾಬಿಯಲ್ಲಿ ಸಿಗುವಂತೆ ಕೋಚ್ ಮೊದಲು ತಿಳಿಸಿದ್ದರು. ಸಂತ್ರಸ್ತೆ ಅಲ್ಲಿಗೆ ಬಂದ ಬಳಿಕ ಇನ್ನಷ್ಟು ಚರ್ಚೆಯ ಅಗತ್ಯವಿದೆ ಎಂದು ಮನವೊಲಿಸಿ, ಫರೀದಾಬಾದಿನಲ್ಲಿ ಅವರು ಉಳಿದುಕೊಂಡಿದ್ದ ಕೊಠಡಿಗೆ ಕರೆದೊಯ್ದಿದ್ದಾರೆ’ ಎಂದು ದೂರಿನಲ್ಲಿ ವಿವರಿಸಿದ್ದಾಳೆ.
‘ಮೊದಲು ಸ್ಪರ್ಧೆಗಳ ಬಗ್ಗೆ ಚರ್ಚಿಸಿದರು. ನಂತರ ನಾನು ಮನೆಗೆ ಹೋಗುವುದಾಗಿ ತಿಳಿಸಿದಾಗ, ಸ್ಪರ್ಧೆಗಳ ನಂತರ ಫಿಸಿಯೊಥೆರಪಿ ರೀತಿಯಲ್ಲಿ ಬೆನ್ನು ಉಜ್ಜುವುದಾಗಿ ಕೋಚ್ ಸರ್ ತಿಳಿಸಿದರು. ನಾನು ತಕ್ಷಣವೇ ನಿರಾಕರಿಸಿದೆ. ನಾನು ನಿರಾಕರಿದಾಗ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ನಾನು ಪ್ರತಿಭಟಿಸಿದಾಗ ಬೆದರಿಕೆ ಹಾಕಿದ್ದಾರೆ. ಈ ಘಟನೆಯನ್ನು ಎಲ್ಲೂ ಬಹಿರಂಗಪಡಿಸಬಾರದು. ಇದರಿಂದ ನಿನ್ನ ವೃತ್ತಿಜೀವನಕ್ಕೆ ತೊಂದರೆಯಾಗಲಿದೆ ಎಂದು ಬೆದರಿಕೆ ಹಾಕಿದರು. ಇದರಿಂದ ನಾನು ಭಯಗೊಂಡಿದ್ದು ಯಾರ ಬಳಿಯೂ ಮಾತನಾಡಿರಲಿಲ್ಲ’ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
‘ನನ್ನ ವರ್ತನೆಯಲ್ಲಾದ ಬದಲಾವಣೆ ಗಮನಿಸಿ ತಾಯಿ ಪದೇಪದೇ ಕೇಳಿದ ಮೇಲೆ ನಾನು ವಿಚಾರ ತಿಳಿಸಿದೆ’ ಎಂದು ತಿಳಿಸಿದ್ದಾರೆ.
ತನಿಖೆ ಪ್ರಗತಿಯಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾಜಿ ಪಿಸ್ತೂಲ್ ಶೂಟಿಂಗ್ ಸ್ಪರ್ಧಿಯಾದ ಭಾರದ್ವಾಜ್ 2010ರಲ್ಲಿ ‘ಬೀಟಾ ಬ್ಲಾಕರ್‘ ಮದ್ದು ಸೇವನೆ ಮಾಡಿದ್ದಕ್ಕೆ ನಿಷೇಧ ಶಿಕ್ಷೆ ಅನುಭವಿಸಿದ್ದರು. ಎದೆಬಡಿತ ಹೆಚ್ಚಾಗದಿರುವಂತೆ, ಸ್ನಾಯ ಕಂಪನ ಮತ್ತು ಉದ್ವೇಗ ತಡೆಯಲು ನೆರವಾಗುವ ಈ ಔಷಧಿಯನ್ನು ಶೂಟಿಂಗ್, ಆರ್ಚರಿ ಮತ್ತು ಬಿಲಿಯರ್ಡ್ಸ್ ಕ್ರೀಡೆಗಳಲ್ಲಿ ನಿಷೇಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.