ADVERTISEMENT

ಚಿನ್ನದ ಪದಕದ ಮೇಲೆ ಭಾರತ ತಂಡದ ಕಣ್ಣು

ಇಂದಿನಿಂದ ಕಾಮನ್‌ವೆಲ್ತ್‌ ಟೇಬಲ್‌ ಟೆನಿಸ್‌

ಪಿಟಿಐ
Published 16 ಜುಲೈ 2019, 18:14 IST
Last Updated 16 ಜುಲೈ 2019, 18:14 IST
ಶರತ್‌ ಕಮಲ್‌ ಉತ್ತಮ ಆಟವಾಡುವ ನಿರೀಕ್ಷೆಯಿದೆ
ಶರತ್‌ ಕಮಲ್‌ ಉತ್ತಮ ಆಟವಾಡುವ ನಿರೀಕ್ಷೆಯಿದೆ   

ಕಟಕ್‌: ಇಲ್ಲಿನ ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಬುಧವಾರದಿಂದ21ನೇ ಕಾಮನ್‌ವೆಲ್ತ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್ ನಡೆಯಲಿದೆ. ಶರತ್‌ ಕಮಲ್‌ ನೇತೃತ್ವದ ಭಾರತ ಚಿನ್ನದ ಪದಕ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯುತ್ತಿದೆ.

ಭಾರತ ತಂಡವು ಸಿಂಗಪುರ ಹಾಗೂ ಸ್ಕಾಟ್ಲೆಂಡ್‌ ತಂಡಗಳೊಂದಿಗೆ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಇಲ್ಲಿ ಅಗ್ರ ರ‍್ಯಾಂಕ್‌ ಪಡೆದಿರುವ ಇಂಗ್ಲೆಂಡ್‌ ತಂಡ, ಶ್ರೀಲಂಕಾ ಹಾಗೂ ಸೈಪ್ರಸ್‌ ಒಳಗೊಂಡಿರುವ ‘ಎ’ ಗುಂಪಿನಲ್ಲಿದೆ.

ಪ್ರತಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ಎರಡು ತಂಡಗಳು ದ್ವಿತೀಯ ಹಂತಕ್ಕೆ ಅರ್ಹತೆ ಗಳಿಸಲಿವೆ.

ADVERTISEMENT

‘ನಾವು ಕಠಿಣ ಸ್ಪರ್ಧೆ ಇರುವ ಗುಂಪಿನಲ್ಲಿ ಸ್ಥಾನ ಪಡೆದಿದ್ದೇವೆ. ಆದರೆ ಇಂಗ್ಲೆಂಡ್‌, ನೈಜೀರಿಯಾ ಮತ್ತು ಸಿಂಗಪುರ ತಂಡಗಳು ಶ್ರೇಷ್ಠ ಆಟಗಾರರನ್ನು ಕಣಕ್ಕಿಳಿಸಿಲ್ಲ. ಭಾರತದ ಪುರುಷ ಆಟಗಾರರು ತಂಡ ಹಾಗೂ ಮುಕ್ತ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲಬೇಕು’ ಎಂದು 2004ರ ಟೂರ್ನಿಯ ಸಿಂಗಲ್ಸ್ ಹಾಗೂ ತಂಡ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಶರತ್‌ ಕಮಲ್‌ ಹೇಳಿದರು.

ಪುರುಷರ ತಂಡಕ್ಕೆ ಹೋಲಿಸಿದರೆ ಭಾರತದ ಮಹಿಳಾ ತಂಡ ನಿರೀಕ್ಷೆಗಿಂತ ಸರಳವಾಗಿರುವ ಗುಂಪಿನಲ್ಲಿ ಸ್ಥಾನ ಪಡೆದಿದೆ. ತಂಡಗಳ ರ‍್ಯಾಂಕಿಂಗ್ ಆಧಾರದಲ್ಲಿ, ಸಿಂಗಪುರ ತಂಡಕ್ಕೆ ಅಗ್ರ ಶ್ರೇಯಾಂಕವನ್ನು ನೀಡಲಾಗಿದೆ. ಎರಡನೇ ಸ್ಥಾನದಲ್ಲಿರುವ ಭಾರತ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ತಂಡಗಳಿರುವ ‘ಬಿ’ ಗುಂಪಿನಲ್ಲಿದೆ. ‘ಎ ’ ಗುಂಪಿನಲ್ಲಿ ಸ್ಕಾಟ್ಲೆಂಡ್‌, ಸಿಂಗಪುರ ಹಾಗೂ ವೇಲ್ಸ್ ತಂಡಗಳಿವೆ.

ಭಾರತದ ಯುವ ಆಟಗಾರ್ತಿ ಮಣಿಕಾ ಬಾತ್ರಾ ಮಹಿಳಾ ತಂಡದಲ್ಲಿದ್ದಾರೆ. 2018ರ ಕಾಮನ್‌ವೆಲ್ತ್‌ ಹಾಗೂ ಏಷ್ಯನ್‌ ಗೇಮ್ಸ್‌ನಲ್ಲಿ ಉತ್ತಮ ಸಾಧನೆ ತೋರಿದ್ದ ಅವರು ಸದ್ಯ ಆ ರೀತಿಯ ಲಯದಲ್ಲಿಲ್ಲ.

ಆದರೂ ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಮಿಂಚುವ ನಿರೀಕ್ಷೆಯಿದೆ. ಭಾರತ ಮಹಿಳಾ ತಂಡ ತನ್ನ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್‌ ತಂಡವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.