ಕಿದಂಬಿ ಶ್ರೀಕಾಂತ್
ಪಿಟಿಐ
ಕ್ವಾಲಾಲಂಪುರ: ಅನುಭವಿ ಆಟಗಾರ ಕಿದಂಬಿ ಶ್ರೀಕಾಂತ್ ಅವರು ಐರ್ಲೆಂಡ್ನ ನಾಟ್ ನೂಯೆನ್ ಅವರನ್ನು ಸೋಲಿಸಿ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗುರುವಾರ ಸೆಮಿಫೈನಲ್ ತಲುಪಿದರು. ಆದರೆ ಭಾರತದ ಇನ್ನೊಬ್ಬ ಆಟಗಾರ ಎಚ್.ಎಸ್.ಪ್ರಣಯ್ ಎರಡನೇ ಸುತ್ತಿನಲ್ಲಿ ನೇರ ಗೇಮ್ಗಳ ಸೋಲಿನೊಡನೆ ನಿರ್ಗಮಿಸಿದರು.
ಉತ್ತಮ ಲಯದಲ್ಲಿಲ್ಲದ ಕಾರಣ ವಿಶ್ವ ಕ್ರಮಾಂಕದಲ್ಲಿ 65ನೇ ಸ್ಥಾನಕ್ಕೆ ಕುಸಿದಿದ್ದ ಶ್ರೀಕಾಂತ್ ಸುಮಾರು ಒಂದು ಗಂಟೆ ನಡೆದ ಸಿಂಗಲ್ಸ್ ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ 33ನೇ ಸ್ಥಾನದಲ್ಲಿರುವ ನೂಯೆನ್ ಅವರ ಸವಾಲನ್ನು ಬದಿಗೊತ್ತಿದರು.
ಆದರೆ ಪ್ರಣಯ್ ಇನ್ನೊಂದು ಮುಖಾಮುಖಿಯಲ್ಲಿ 9–21, 18–21 ರಿಂದ ಜಪಾನ್ನ ಯುಶಿ ತನಾಕ ಅವರಿಗೆ ಮಣಿದರು. ಪುರುಷರ ವಿಭಾಗದ ಇನ್ನೊಂದು ಪಂದ್ಯದಲ್ಲಿ ಆಯುಷ್ ಶೆಟ್ಟಿ 14–21, 16–21 ರಲ್ಲಿ ನೇರ ಗೇಮ್ಗಳಿಂದ ಫ್ರಾನ್ಸ್ನ ಕ್ರಿಸ್ಟೊ ಪೊಪೊವ್ ಅವರಿಗೆ ಸೋತರು. ಪೊಪೊವ್ ಎಂಟರ ಘಟ್ಟದ ಪಂದ್ಯದಲ್ಲಿ ಶ್ರೀಕಾಂತ್ ಅವರನ್ನು ಎದುರಿಸಲಿದ್ದಾರೆ.
ಸತೀಶ್ ಕರುಣಾಕರನ್ ಅವರ ಸವಾಲೂ ಬೇಗ ಅಂತ್ಯಗೊಂಡಿತು. ಟೋಮಾ ಅವರ ಸೋದರ ಹಾಗೂ ಡಬಲ್ಸ್ ಜೊತೆಗಾರ ಕ್ರಿಸ್ಟೊ ಪೊಪೊವ್ ಅವರು 21–14, 21–16 ರಿಂದ ಸತೀಶ್ ಅವರನ್ನು ಹಿಮ್ಮೆಟ್ಟಿಸಿದರು.
ಎಂಟರ ಘಟ್ಟಕ್ಕೆ ಧ್ರುವ್–ತನಿಶಾ:
ಮಿಶ್ರ ಡಬಲ್ಸ್ ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಧ್ರುವ್ ಕಪಿಲ– ತನಿಶಾ ಕ್ರಾಸ್ಟೊ ಜೋಡಿ 21–17, 18–21, 21–15 ರಿಂದ ಫ್ರಾನ್ಸ್ನ ಜೂಲಿಯೆನ್ ಮಯಿಯೊ– ಲಿಯಾ ಪಾಲೆರ್ಮೊ ಜೋಡಿಯನ್ನು ಮಣಿಸಿತು.
ಮಹಿಳೆಯರ ಡಬಲ್ಸ್ 16ರ ಸುತ್ತಿನ ಪಂದ್ಯದಲ್ಲಿ ಪ್ರೇರಣಾ ಅಳ್ವೇಕರ್– ಮೃಣ್ಮಯಿ ದೇಶಪಾಂಡೆ ಅವರು 9–21, 14–21 ರಲ್ಲಿ ಹ್ಸು ಯಿನ್ ಹುಯಿ –ಲಿನ್ ಝಿಹ ಯುನ್ ಎದುರು ಸೋಲನ್ನೊಪ್ಪಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.