ADVERTISEMENT

ಹರ್ಮನ್‌ಪ್ರೀತ್ ಮೇಲಿನ ಒತ್ತಡ ವರ್ಗಾಯಿಸುವ ಯತ್ನ: ಮುಖ್ಯ ಕೋಚ್‌ ಗ್ರಹಾಂ ರೀಡ್‌

ಪಿಟಿಐ
Published 11 ಜನವರಿ 2023, 15:56 IST
Last Updated 11 ಜನವರಿ 2023, 15:56 IST
ಗ್ರಹಾಂ ರೀಡ್‌
ಗ್ರಹಾಂ ರೀಡ್‌   

ನವದೆಹಲಿ: ಪೆನಾಲ್ಟಿ ಕಾರ್ನರ್‌ ಪರಿಣತರಾಗಿರುವ ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರ ಮೇಲೆ ಈ ಬಾರಿಯ ವಿಶ್ವಕಪ್‌ ಹಾಕಿ ಟೂರ್ನಿಯಲ್ಲಿ ಸಹಜವಾಗಿಯೇ ಒತ್ತಡವಿದೆ. ಆದರೆ ಈ ಪ್ರಮುಖ ಆಟಗಾರನ ಮೇಲಿನ ಹೊರೆ ತಗ್ಗಿಸುವ ಯೋಜನೆಗಳನ್ನು ಹಾಕಿಕೊಳ್ಳಲಾಗುವುದು ಎಂದು ತಂಡದ ಮುಖ್ಯ ಕೋಚ್‌ ಗ್ರಹಾಂ ರೀಡ್‌ ಹೇಳಿದ್ದಾರೆ.

ಪೆನಾಲ್ಟಿ ಕಾರ್ನರ್‌ಗಳನ್ನು ಗೋಲುಗಳಲ್ಲಿ ಪರಿವರ್ತಿಸುವ ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಹರ್ಮನ್‌ಪ್ರೀತ್ ಕೂಡ ಒಬ್ಬರಾಗಿದ್ದಾರೆ. ತಂಡದ ಇನ್ನುಳಿದ ಪ್ರಮುಖ ಡ್ರ್ಯಾಗ್‌ಫ್ಲಿಕರ್‌ಗಳಾದ ಉಪನಾಯಕ ಅಮಿತ್‌ ರೋಹಿದಾಸ್‌, ವರುಣ್ ಕುಮಾರ್ ಮತ್ತು ನೀಲಂ ಸಂಜೀಪ್ ಕ್ಸೆಸ್ ಅವರು ಜವಾಬ್ದಾರಿಯನ್ನು ಹಂಚಿಕೊಳ್ಳಬೇಕೆಂಬುದು ರೀಡ್‌ ಬಯಕೆಯಾಗಿದೆ.

‘ಹರ್ಮನ್‌ಪ್ರೀತ್ ಅವರ ಮೇಲೆ ಒತ್ತಡವಿಲ್ಲ ಎಂದು ಹೇಳಲಾಗುವುದಿಲ್ಲ. ಆದರೆ ಆ ಒತ್ತಡವನ್ನು ವರ್ಗಾಯಿಸುವತ್ತ ನಾವು ಚಿಂತನೆ ನಡೆಸಿದ್ದೇವೆ‘ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ರೀಡ್‌ ಹೇಳಿದ್ದಾರೆ.

ADVERTISEMENT

ಆಸ್ಟ್ರೇಲಿಯಾದ ರೀಡ್‌ ಅವರ ಮಾರ್ಗದರ್ಶನದಲ್ಲಿ ಭಾರತ ತಂಡವು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿತ್ತು.

‘ಮೊದಲ ಪಂದ್ಯ ಮಹತ್ವದ್ದು ಎಂದು ಯಾವಾಗಲೂ ಹೇಳುತ್ತೇವೆ. ಹೀಗಾಗಿ ಅದರ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುತ್ತೇವೆ. ಒಲಿಂಪಿಕ್ಸ್ ಹಾಗೂ ಕಾಮನ್‌ವೆಲ್ತ್ ಕೂಟಗಳಲ್ಲಿ ಪದಕ ವಿಜೇತರಾಗಿರುವ ನಾವು ವಿಶ್ವಕಪ್ ಟೂರ್ನಿಯಲ್ಲೂ ಗೆಲ್ಲುವುದು ಮಹಾತ್ವದ ಸಾಧನೆ‘ ಎಂದು ರೀಡ್‌ ನುಡಿದರು.

ಶುಕ್ರವಾರ ನಡೆಯುವ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಸ್ಪೇನ್ ಸವಾಲು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.