ADVERTISEMENT

ಒಲಿಂಪಿಕ್ಸ್‌ ಮುಂದೂಡುವುದೇ ಸೂಕ್ತ: ಅಚಂತಾ ಶರತ್‌ ಕಮಲ್‌

ಪಿಟಿಐ
Published 21 ಮಾರ್ಚ್ 2020, 14:41 IST
Last Updated 21 ಮಾರ್ಚ್ 2020, 14:41 IST
ಅಚಂತಾ ಶರತ್‌ ಕಮಲ್‌
ಅಚಂತಾ ಶರತ್‌ ಕಮಲ್‌   

ನವದೆಹಲಿ: ಒಲಿಂಪಿಕ್‌ ಕ್ರೀಡಾಕೂಟವನ್ನು ಮುಂದೂಡಬೇಕೆಂಬ ಕೂಗು ಈಗ ಬಲವಾಗಿ ಕೇಳಿಬರುತ್ತಿದೆ. ಇದಕ್ಕೆ ಭಾರತದ ಟೇಬಲ್‌ ಟೆನಿಸ್‌ ಆಟಗಾರ ಅಚಂತಾ ಶರತ್‌ ಕಮಲ್‌ ಕೂಡ ಧ್ವನಿಗೂಡಿಸಿದ್ದಾರೆ.

ಹೋದ ವಾರ ನಡೆದಿದ್ದ ಐಟಿಟಿಎಫ್‌ ಒಮನ್‌ ಓಪನ್‌ ಟೂರ್ನಿಯಲ್ಲಿ ಶರತ್‌ ಪ್ರಶಸ್ತಿ ಗೆದ್ದಿದ್ದರು. ಮಸ್ಕತ್‌ನಿಂದ ಮರಳಿರುವ ಅವರು ಸ್ವಯಂ ‍‍ಪ್ರತ್ಯೇಕವಾಸದಲ್ಲಿದ್ದಾರೆ.

‘ನಿಗದಿಯಂತೆ ಒಲಿಂಪಿಕ್ಸ್‌ ನಡೆಯಬೇಕೆಂಬ ಆಸೆ ನನಗೂ ಇದೆ. ಆದರೆ ಈಗ ಪರಿಸ್ಥಿತಿ ಬಿಗಡಾಯಿಸಿದೆ. ಚೀನಾದಲ್ಲಿ ಕಾಣಿಸಿಕೊಂಡಿದ್ದ ಕೋವಿಡ್‌–19 ಪಿಡುಗು ಈಗ ವಿಶ್ವದೆಲ್ಲೆಡೆ ವ್ಯಾಪಿಸಿದೆ. ಇಂತಹ ಸಮಯದಲ್ಲಿ ಒಲಿಂಪಿಕ್ಸ್‌ ಆಯೋಜಿಸುವುದರಿಂದ ಅಪಾಯವೇ ಹೆಚ್ಚು’ ಎಂದು 37 ವರ್ಷ ವಯಸ್ಸಿನ ಆಟಗಾರ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಎಲ್ಲರೂ ಸಾಮಾಜಿಕವಾಗಿ ಅಂತರ ಕಾಯ್ದುಕೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಇದು ಸಾಧ್ಯವೇ ಇಲ್ಲ. ಸಾವಿರಾರು ಕ್ರೀಡಾಪಟುಗಳು ಒಲಿಂಪಿಕ್ಸ್‌ ಗ್ರಾಮದಲ್ಲೇ ವಾಸಿಸಬೇಕಾಗುತ್ತದೆ. ಇದರಿಂದ ಕೊರೊನಾ ವೈರಾಣು ಒಬ್ಬರಿಂದ ಮತ್ತೊಬ್ಬರಿಗೆ ವೇಗವಾಗಿ ಹರಡುವ ಅಪಾಯವಿದೆ’ ಎಂದೂ ಅವರು ಹೇಳಿದ್ದಾರೆ.

ಕೊರೊನಾ ಭೀತಿಯಿಂದಾಗಿ ಅಂತರರಾಷ್ಟ್ರೀಯ ಟೇಬಲ್‌ ಟೆನಿಸ್‌ ಫೆಡರೇಷನ್‌ (ಐಟಿಟಿಎಫ್‌) ಏಷ್ಯನ್‌ ಒಲಿಂಪಿಕ್‌ ಅರ್ಹತಾ ಟೂರ್ನಿ ಸೇರಿದಂತೆ ಇತರ ಕೆಲ ಮಹತ್ವದ ಟೂರ್ನಿಗಳನ್ನು ಮುಂದಕ್ಕೆ ಹಾಕಿದೆ. ಈ ಟೂರ್ನಿಗಳು ನಡೆಯದಿದ್ದರೂ ಶರತ್‌ ಮತ್ತು ಜಿ.ಸತ್ಯನ್‌ ಅವರು ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಸತ್ಯನ್‌ ಮತ್ತು ಶರತ್‌ ಅವರು ಕ್ರಮವಾಗಿ 31 ಹಾಗೂ 38ನೇ ಸ್ಥಾನಗಳಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.