ಮುಂಬೈ: ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಟೂರ್ನಿಯಲ್ಲಿ ಆಡುವ ಬೆಂಗಳೂರು ಬುಲ್ಸ್ ತಂಡವು ರೈಡರ್ ಪವನ್ ಕುಮಾರ್ ಶೆರಾವತ್ ಅವರನ್ನು ತನ್ನಲ್ಲೇ ಉಳಿಸಿಕೊಂಡಿದೆ. ಡಿಸೆಂಬರ್ನಲ್ಲಿ ನಡೆಯಲಿರುವ ಎಂಟನೇ ಆವೃತ್ತಿಗೆ ಒಟ್ಟು 59 ಆಟಗಾರರರು ತಮ್ಮ ತಂಡಗಳಲ್ಲೇ ಉಳಿದುಕೊಂಡಿದ್ದಾರೆ ಎಂದು ಲೀಗ್ನ ಆಯೋಜನಾ ಸಂಸ್ಥೆ ಮಶಾಲ್ ಸ್ಪೋರ್ಟ್ಸ್ ಶುಕ್ರವಾರ ಪ್ರಕಟಿಸಿದೆ.
‘ಎಲೀಟ್ ರಿಟೇನ್ಡ್ ಪ್ಲೇಯರ್ಸ್ (ಇಆರ್ಪಿ) ವಿಭಾಗದಲ್ಲಿ 22, ರಿಟೇನ್ಡ್ ಯಂಗ್ ಪ್ಲೇಯರ್ಸ್ (ಆರ್ವೈಪಿ) ವಿಭಾಗದಲ್ಲಿ ಆರು ಮತ್ತು ನ್ಯೂ ಯಂಗ್ ಪ್ಲೇಯರ್ಸ್ (ಎನ್ವೈಪಿ) ವಿಭಾಗದಿಂದ 31 ಆಟಗಾರರು ತಂಡಗಳಲ್ಲಿ ಉಳಿದುಕೊಂಡಿದ್ದಾರೆ. ತಂಡಗಳಿಂದ ಬಿಡುಗಡೆಗೊಂಡ ಆಟಗಾರರು ಇದೇ 29ರಿಂದ 31ರವರೆಗೆ ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ‘ ಎಂದು ಪಿಕೆಎಲ್ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೆಂಗಾಲ್ ವಾರಿಯರ್ಸ್ ತಂಡವು ನಾಯಕ ಮಣಿಂದರ್ ಸಿಂಗ್ ಅವರನ್ನು, ದಬಾಂಗ್ ದೆಹಲಿ ತಂಡವು ರೈಡರ್ ನವೀನ್ ಕುಮಾರ್ ಅವರನ್ನು ಉಳಿಸಿಕೊಂಡಿದೆ.
ಫಜಲ್ ಅತ್ರಾಚಲಿ (ಯು ಮುಂಬಾ), ಪರ್ವೇಶ್ ಭೇನ್ಸವಾಲ್ ಮತ್ತು ಸುನಿಲ್ ಕುಮಾರ್ (ಗುಜರಾತ್ ಜೈಂಟ್ಸ್), ವಿಕಾಸ್ ಖಂಡೋಲ (ಹರಿಯಾಣ ಸ್ಟೀಲರ್ಸ್) ಮತ್ತು ನಿತೇಶ್ ಕುಮಾರ್ (ಯು.ಪಿ. ಯೋಧಾ) ಆಯಾ ತಂಡಗಳಲ್ಲಿ ಉಳಿದುಕೊಂಡ ಪ್ರಮುಖ ಆಟಗಾರರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.