ಬೆಂಗಳೂರು: ‘ಟಿಸಿಎಸ್ ವಿಶ್ವ 10ಕೆ ಬೆಂಗಳೂರು-2024’ ಭಾಗವಾಗಿ ಮಾನವೀಯ ಮತ್ತು ಸಾಮಾಜಿಕ ಕಾರ್ಯಕ್ಕೆ ₹3 ಕೋಟಿ ನಿಧಿ ಸಂಗ್ರಹಿಸಲಾಗಿದೆ.
ಇದೇ 28ರಂದು ಉದ್ಯಾನನಗರಿಯಲ್ಲಿ 16ನೇ ಆವೃತ್ತಿಯ ವಿಶ್ವ 10ಕೆ ಓಟ ನಡೆಯಲಿದೆ. ಮೂರು ತಿಂಗಳ ಅವಧಿಯಲ್ಲಿ ನಿಧಿ ಸಂಗ್ರಹಕ್ಕೆ 70ಕ್ಕೂ ಅಧಿಕ ಸ್ವಯಂಸೇವಾ ಸಂಸ್ಥೆಗಳು, ಕಾರ್ಪೊರೇಟ್ ಕಂಪನಿಗಳು, ವೈಯಕ್ತಿಕ ನಿಧಿ ಸಂಗ್ರಹಕಾರರು ಕೈಜೋಡಿಸಿದ್ದಾರೆ. ಏಡ್ಬೀಸ್ ನೇತೃತ್ವದಲ್ಲಿ ನಿಧಿ ಸಂಗ್ರಹ ಅಭಿಯಾನವು ಮೇ 10 ರವರೆಗೆ ಮುಂದುವರಿಯಲಿದೆ ಎಂದು ಪ್ರಾಯೋಜಕರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರಿನಲ್ಲಿ ನಡೆಯುವ ವಿಶ್ವ 10ಕೆ ಓಟವು ದಕ್ಷಿಣ ಭಾರತದ ಏಕೈಕ ಅತಿ ದೊಡ್ಡ ನಿಧಿ ಸಂಗ್ರಹ ವೇದಿಕೆಯಾಗಿದೆ. ಈವರೆಗೆ 400ಕ್ಕೂ ಅಧಿಕ ಸಾಮಾಜಿಕ ಸೇವಾ ಸಂಸ್ಥೆಗಳಿಂದ ₹53 ಕೋಟಿಗೂ ಅಧಿಕ ಹಣ ಸಂಗ್ರಹಿಸಲಾಗಿದೆ. ಈ ಬಾರಿಯ ನಿಧಿ ಸಂಗ್ರಹ ಅಭಿಯಾನಕ್ಕೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
‘ಅಂಗವಿಕಲರಿಗಾಗಿ ಭಾರತದ ಮೊದಲ ಟೆನಿಸ್ ಗಾಲಿಕುರ್ಚಿ ಕೇಂದ್ರವನ್ನು ಚಿಕ್ಕಬಳ್ಳಾಪುರದಲ್ಲಿ ನಿರ್ಮಿಸಲು ನಿಧಿಯನ್ನು ಸಂಗ್ರಹಿಸುತ್ತಿದೆ’ ಎಂದು ಇಂಡಿಯನ್ ವೀಲ್ಚೇರ್ ಟೆನಿಸ್ ಟೂರ್ನ ಅಧ್ಯಕ್ಷ ಸುನಿಲ್ ಕುಮಾರ್ ಜೈನ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.