ಬೆಂಗಳೂರು: ಯಶಸ್ವಿನಿ ಘೋರ್ಪಡೆ, ಮೊಹಸಿನ್ ನಂದಿ ನಾರಾ ಹಾಗೂ ಆಯುಷಿ ಬಾಲಕೃಷ್ಣ ಗೋಡ್ಸೆ ಅವರು ಇಲ್ಲಿ ನಡೆಯುತ್ತಿರುವ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದರು.
ಮಲ್ಲೇಶ್ವರಂ ಸಂಸ್ಥೆಯು ಆಯೋಜಿಸಿರುವ ಟೂರ್ನಿಯಲ್ಲಿ ಭಾನುವಾರ ಯಶಸ್ವಿನಿ ಅವರು 19 ವರ್ಷದೊಳಗಿನ ಜೂನಿಯರ್ ಬಾಲಕಿಯರ ವಿಭಾಗದಲ್ಲಿ, ಮೊಹಸಿನ್ ಹಾಗೂ ಆಯುಷಿ ಕ್ರಮವಾಗಿ ಕೆಡೆಟ್ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಜೂನಿಯರ್ ಬಾಲಕಿಯರ ವಿಭಾಗದ ಫೈನಲ್ ಹಣಾಹಣಿಯಲ್ಲಿ ಯಶಸ್ವಿನಿ 11-4, 11-8, 11- 6, 12-10ರಿಂದ ಸಹನಾ ಎಚ್. ಮೂರ್ತಿ ಅವರ ಸವಾಲು ಮೀರಿದರು. ಇದಕ್ಕೂ ಮೊದಲು ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಯಶಸ್ವಿನಿ 11–7, 11–7, 11–6, 11–8ರಿಂದ ಅನರ್ಘ್ಯಾ ಮಂಜುನಾಥ್ ಅವರನ್ನು, ಸಹನಾ 8–11, 11–9, 11–7, 11–9, 11–9ರಿಂದ ಕರುಣಾ ಗಜೇಂದ್ರನ್ ಅವರನ್ನು ಸೋಲಿಸಿದ್ದರು.
ಕೆಡೆಟ್ ಬಾಲಕರ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಮೊಹಸಿನ್ 10–12, 11–6, 15–13, 11–7ರಿಂದ ಅರ್ನವ್ ಎನ್. ಅವರನ್ನು ಸೋಲಿಸಿದರು. ಮೊದಲ ಸೆಟ್ ಸೋತರೂ ಛಲಬಿಡದ ಅವರು ಜಯ ಒಲಿಸಿಕೊಂಡರು.
ಕೆಡೆಟ್ ಬಾಲಕಿಯರ ಜಿದ್ದಾಜಿದ್ದಿನ ಫೈನಲ್ನಲ್ಲಿ ಆಯುಷಿ 3–11, 11–7, 11–9, 4–11, 11–4ರಿಂದ ನಿಶಿ ವಿ. ಶಾಸ್ತ್ರಿ ಎದುರು ಗೆದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.