ADVERTISEMENT

2022 ಹಿನ್ನೋಟ | ‘ಚಿನ್ನಸ್ವಾಮಿ’ಯಲ್ಲಿ ಪುಟಿದ ಪಿಂಕ್‌ಬಾಲ್

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2022, 4:59 IST
Last Updated 31 ಡಿಸೆಂಬರ್ 2022, 4:59 IST
ರೋಹಿತ್‌ ಶರ್ಮಾ
ರೋಹಿತ್‌ ಶರ್ಮಾ   

ರಾಜ್ಯದ ಪ್ರಮುಖ ವಿದ್ಯಮಾನಗಳು
ಬೆಂಗಳೂರಿನಲ್ಲಿ ಮೊದಲ ಬಾರಿ ನಡೆದ ಪಿಂಕ್ ಬಾಲ್ ಟೆಸ್ಟ್, ಖೇಲೊ ಇಂಡಿಯಾ ಕ್ರೀಡಾಕೂಟ, ಚೆಸ್‌ನಲ್ಲಿ ಚಾರ್ವಿ ಸಾಧನೆ, ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯದ ಅಥ್ಲೀಟ್‌ಗಳ ಉತ್ತಮ ಸಾಧನೆ ಈ ವರ್ಷ ಗಮನಸೆಳೆದವು.

* ಪಿಂಕ್‌ಬಾಲ್‌ ಟೆಸ್ಟ್‌ ಗೆದ್ದ ಭಾರತ: ಬೆಂಗಳೂರಿನಲ್ಲಿ ಮೊದಲ ಬಾರಿ ಪಿಂಕ್‌ಬಾಲ್ ಟೆಸ್ಟ್ ಮಾರ್ಚ್‌ನಲ್ಲಿ ಆಯೋಜನೆಗೊಂಡಿತ್ತು. ಈ ಪಂದ್ಯದಲ್ಲಿ ರೋಹಿತ್‌ ಶರ್ಮಾ ನಾಯಕತ್ವದ ಭಾರತ ತಂಡವು ಶ್ರೀಲಂಕಾ ಎದುರು 238 ರನ್‌ಗಳಿಂದ ಜಯಿಸಿತು. ತವರಿನಲ್ಲಿ ಸತತ 15ನೇ ಸರಣಿ ಜಯದ ಸಾಧನೆಯನ್ನೂ ಮಾಡಿತು.

* ಖೇಲೊ ಇಂಡಿಯಾ ವಿವಿ ಕ್ರೀಡಾಕೂಟ: ಏಪ್ರಿಲ್– ಮೇ ತಿಂಗಳಿನಲ್ಲಿ ಖೇಲೊಇಂಡಿಯಾವಿಶ್ವವಿದ್ಯಾಲಯಗಳ ಕ್ರೀಡಾಕೂಟವು ಬೆಂಗಳೂರಿನ ಜೈನ್‌ ವಿವಿ ಆವರಣದಲ್ಲಿ ನಡೆಯಿತು.ಆತಿಥೇಯ ಜೈನ್ವಿವಿ ಸಮಗ್ರ ಚಾಂಪಿಯನ್ ಪಟ್ಟ ಗಳಿಸಿತು. ಕೂಟದಲ್ಲಿ 20 ಚಿನ್ನ, 7 ಬೆಳ್ಳಿ ಹಾಗೂ 5 ಕಂಚಿನ ಪದಕಗಳೊಂದಿಗೆ ಜೈನ್‌ವಿವಿಒಟ್ಟು 32 ಪದಕ ಗಳಿಸಿತು. ಈ ಕ್ರೀಡಾಕೂಟದಲ್ಲಿ ಎರಡು ರಾಷ್ಟ್ರೀಯ ದಾಖಲೆ ಮತ್ತು 97 ಕೂಟದಾಖಲೆಗಳು ಮುರಿದು ಬಿದ್ದವು.

ADVERTISEMENT

* ಅಖಿಲ ಭಾರತ ಅಂತರ ವಿವಿ ಮಹಿಳಾ ಕೊಕ್ಕೊ: ಮೈಸೂರಿನಲ್ಲಿ ಜುಲೈ ತಿಂಗಳಿನಲ್ಲಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಮಹಿಳಾ ಕೊಕ್ಕೊ ಟೂರ್ನಿ ನಡೆಯಿತು.ಆತಿಥೇಯ ಮೈಸೂರು ವಿಶ್ವವಿದ್ಯಾಲಯ ಫೈನಲ್‌ನಲ್ಲಿಲವ್ಲಿಪ್ರೊಫೆಷನಲ್ ವಿಶ್ವವಿದ್ಯಾಲಯ ತಂಡವನ್ನು 10-7ರಿಂದ ಮಣಿಸಿ ಮೊದಲ ಬಾರಿ ಪ್ರಶಸ್ತಿ ಜಯಿಸಿತು.

*ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್ ಲೀಗ್‌: ಕರ್ನಾಟಕದಲ್ಲಿ ಮೊದಲ ಬಾರಿ ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್ ಲೀಗ್‌ ಆಗಸ್ಟ್‌ 12ರಿಂದ 21ರವರೆಗೆ ನಡೆಯಿತು. ಕೆಜಿಎಫ್‌ ವೂಲ್ವ್ಸ್‌ ಚಾಂಪಿಯನ್ ಆಗಿ ಹೊಹೊಮ್ಮಿತು.

* ಚಾಂಪಿಯನ್‌ ಚಾರ್ವಿ:ಕರ್ನಾಟಕದ ಚಾರ್ವಿ ಅನಿಲ್‌ಕುಮಾರ್ ಅವರು ಜಾರ್ಜಿಯದ ಬಟುಮಿಯಲ್ಲಿ ಸೆಪ್ಟೆಂಬರ್‌ನಲ್ಲಿ ನಡೆದ ವಿಶ್ವ ಕೆಡೆಟ್ಸ್‌ ಚೆಸ್‌ ಚಾಂಪಿಯನ್‌ಷಿಪ್‌ನ ಬಾಲಕಿಯರ 8 ವರ್ಷದೊಳಗಿನವರ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು. ಚಾರ್ವಿ 11 ಸುತ್ತುಗಳಲ್ಲಿ 9.5 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನ ಪಡೆದರು

* ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮಿನುಗಿದ ಈಜುಪಟುಗಳು: ಗುಜರಾತ್‌ನಲ್ಲಿ ನಡೆದ 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿರಾಜ್ಯದ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದರು.ಕರ್ನಾಟಕದ ಈಜುಪಟುಗಳು 19 ಚಿನ್ನ, 8 ಬೆಳ್ಳಿ ಮತ್ತು 12 ಕಂಚು ಸೇರಿ 39 ಪದಕಗಳನ್ನು ಗೆದ್ದು ಸಂಭ್ರಮಿಸಿದರು. ಮಹಿಳೆಯರ ವಿಭಾಗದ 400 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಹಷಿಕಾ ರಾಮಚಂದ್ರ 4 ನಿಮಿಷ 32.17 ಸೆ.ಗಳಲ್ಲಿ ಗುರಿ ತಲುಪಿ ಕೂಟ ದಾಖಲೆ ನಿರ್ಮಿಸಿದರು. ಹಲವು ದಾಖಲೆಗಳು ನಿರ್ಮಾಣವಾದವು. ಗಾಲ್ಫರ್‌ ಅವನಿ ಪ್ರಶಾಂತ್‌ ಕ್ರೀಡಾಕೂಟದಲ್ಲಿ ಎರಡು ಚಿನ್ನ ಜಯಿಸಿದರು.ಟೆನಿಸ್‌ ತಂಡಕ್ಕೆ ಒಟ್ಟು ಎಂಟು ಪದಕ ಒಲಿದವು. ಕರ್ನಾಟಕ ಪುರುಷರ ತಂಡದವರು ಹಾಕಿ ಟೂರ್ನಿಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.