ADVERTISEMENT

Bengaluru Open: ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ನಗಾಲ್

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2024, 0:30 IST
Last Updated 18 ಫೆಬ್ರುವರಿ 2024, 0:30 IST
<div class="paragraphs"><p>ಇಟಲಿಯ ಸ್ಟಿಫಾನೊ ನೆಪೊಲಿಟಾನೊ ಆಟದ ವೈಖರಿ </p></div>

ಇಟಲಿಯ ಸ್ಟಿಫಾನೊ ನೆಪೊಲಿಟಾನೊ ಆಟದ ವೈಖರಿ

   

–ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.

ಬೆಂಗಳೂರು: ಭಾರತದ ಅಗ್ರಗಣ್ಯ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಇಲ್ಲಿ ನಡೆಯುತ್ತಿರುವ ಬೆಂಗಳೂರು ಓಪನ್  ಟೆನಿಸ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದರು.

ADVERTISEMENT

ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ ಅಂಗಣದಲ್ಲಿ ಶನಿವಾರ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ನಗಾಲ್ 7–6 (2), 6–4ರ ಸೆಟ್‌ಗಳಲ್ಲಿ ಇಟಲಿಯ ಸ್ಟಿಫಾನೊ ನೆಪೋಲಿಟಾನೊ ವಿರುದ್ಧ ಸೋತರು. ಏಳನೇ ಶ್ರೇಯಾಂಕದ ಸ್ಟಿಫಾನೊ ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಒಂಬತ್ತನೇ ಶ್ರೇಯಾಂಕದ ದಕ್ಷಿಣ ಕೊರಿಯಾ ಆಟಗಾರ ಸಿಯಾಂಗ್‌ಚಾನ್ ಹಾಂಗ್ ವಿರುದ್ಧ ಆಡುವರು. ಇನ್ನೊಂದು ಸೆಮಿಫೈನಲ್‌ನಲ್ಲಿ ಹಾಂಗ್ ಅವರು 6–2, 3–6, 6–3ರಿಂದ ಸ್ಪೇನ್ ಒರಿಯಾಲ್ ಬಟಾಲಾ ವಿರುದ್ಧ ಜಯಿಸಿದರು.

ಹೋದ ವಾರವಷ್ಟೇ ಚೆನ್ನೈ ಓಪನ್ ಎಟಿಪಿ ಚಾಲೆಂಜರ್ಸ್ ಟೂರ್ನಿಯಲ್ಲಿ ನಗಾಲ್ ಚಾಂಪಿಯನ್ ಆಗಿದ್ದರು. ಆದರೆ ಇಲ್ಲಿ ಅವರ ಪ್ರಶಸ್ತಿ ಜಯಿಸುವ ಕನಸು ಕಮರಿತು. 26 ವರ್ಷದ ನಗಾಲ್ ಅವರು ಪಂದ್ಯದಲ್ಲಿ ಉತ್ತಮ ಆರಂಭ ಮಾಡಿದರು. ಮೊದಲ ಸೆಟ್‌ನಲ್ಲಿ 4–1ರ  ಆರಂಭಿಕ ಮುನ್ನಡೆ ಗಳಿಸಿದರು. ಈ ಹಂತದಲ್ಲಿ ಇಟಲಿ ಆಟಗಾರ ತಿರುಗೇಟು ನೀಡಲು ಆರಂಭಿಸಿದರು. ಅವರ ನಿಖರವಾದ ಸರ್ವ್‌ಗಳನ್ನು ಆಡಿದ ಅವರು ಒಂದೆರಡು ಬ್ರೇಕ್‌ ಪಾಯಿಂಟ್ ಕೂಡ ಉಳಿಸಿಕೊಂಡರು. ಇಬ್ಬರ ನಡುವೆಯೂ ತುರುಸಿನ ಪೈಪೋಟಿ ಕಂಡ ಈ ಸೆಟ್ ಟೈಬ್ರೇಕರ್‌ಗೆ ಹೋಯಿತು. ಅದರಲ್ಲಿ ಸ್ಟಿಫಾನೊ ಮೇಲುಗೈ ಸಾಧಿಸಿದರು.

ಎರಡನೇ ಸೆಟ್‌ನಲ್ಲಿಯೂ ಇಬ್ಬರೂ ಆರಂಭದಲ್ಲಿ ಸಮಬಲದ ಹೋರಾಟ ನಡೆಸಿದರು. 3–3 ಸಮಬಲವಾಗಿತ್ತು. ಕೆಲವು ತಪ್ಪುಗಳನ್ನು ಮಾಡಿದ ನಗಾಲ್ ಹಿನ್ನಡೆ ಅನುಭವಿಸಿರು. ತಮಗೆ ಸಿಕ್ಕ ಅವಕಾಶಗಳನ್ನು ಸ್ಟಿಫಾನೊ ಸಮರ್ಥವಾಗಿ ಬಳಸಿಕೊಂಡರು.

ಇದೇ ವೇಳೆ ನಗಾಲ್ ಅವರನ್ನು ಕೆಎಸ್‌ಎಲ್‌ಟಿಎ ಹಿರಿಯ ಉಪಾಧ್ಯಕ್ಷರೂ ಆಗಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ₹5 ಲಕ್ಷ ನಗದು ನೀಡಿ ಸನ್ಮಾನಿಸಿದರು. ಕಾರ್ಯದರ್ಶಿ ಮಹೇಶ್ವರ್ ರಾವ್, ಟೂರ್ನಿ ನಿರ್ದೇಶಕ ಸುನಿಲ್ ಯಜಮಾನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.