
ಟೆನಿಸ್
ಬೆಂಗಳೂರು: ಅಗ್ರ ಶ್ರೇಯಾಂಕದ ಆಟಗಾರ್ತಿ ಜೆ.ಕೆ.ಕಲಾ ಅವರು ಸೋಮವಾರ ಆರಂಭಗೊಂಡ ಎಐಟಿಎ ಟಿಎಸ್–7 ರಾಷ್ಟ್ರೀಯ ಸರಣಿಯ ಟೆನಿಸ್ ಟೂರ್ನಿಯ (12 ವರ್ಷದೊಳಗಿನವರ) ಬಾಲಕಿಯರ ಸಿಂಗಲ್ಸ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಸುಂಕದಕಟ್ಟೆಯ ಫೋಕಸ್ ಟೆನಿಸ್ ಮತ್ತು ಪಿಕಲ್ಬಾಲ್ ಅಕಾಡೆಮಿಯಲ್ಲಿ ನಡೆದ ಪ್ರಿಕ್ವಾರ್ಟರ್ಫೈನಲ್ನಲ್ಲಿ ತೆಲಂಗಾಣದ ಕಲಾ ಅವರು 6–1, 6–2ರಿಂದ ಕರ್ನಾಟಕದ ಧನ್ವಿಶ್ರೀ ಬೋಯಾ ಅವರನ್ನು ಸುಲಭವಾಗಿ ಮಣಿಸಿದರು. ಎರಡನೇ ಶ್ರೇಯಾಂಕದ ಆಟಗಾರ್ತಿ ರಚೆಲ್ ರಾಯುಡು 6–0, 7–6(7–5)ರಿಂದ ಪಿಯಾ ಕೆ. ವಿರುದ್ಧ ಗೆಲುವು ಸಾಧಿಸಿದರು.
ಮೂರನೇ ಶ್ರೇಯಾಂಕದ ಆಟಗಾರ್ತಿ ಧಾತ್ರಿ ಎಸ್.ಬಿ. 6–0, 6–0ಯಿಂದ ಹೈಫಾ ಅಫ್ರೋಜ್ ವಿರುದ್ಧ ನಿರಾಯಾಸ ಗೆಲುವು ಸಾಧಿಸಿ ಕ್ವಾರ್ಟರ್ಫೈನಲ್ಗೆ ಮುನ್ನಡೆದರು. ಬಿ.ಹರಿಣಿ ಶ್ರೀ ಅವರೂ ಇದೇ ಅಂತರದಲ್ಲಿ ಅರೀನಾ ಸಾರಾ ಅವರನ್ನು ಸೋಲಿಸಿದರು.
ಬಾಲಕರ ವಿಭಾಗದ ಮೊದಲ ಸುತ್ತಿನಲ್ಲಿ ತಮಿಳುನಾಡಿನ ಅಗ್ರಶ್ರೇಯಾಂಕದ ಆಟಗಾರ ಶ್ರವಿನ್ ಆರ್. ಬೈ ಪಡೆದರು. ಅವರು ಪ್ರಿಕ್ವಾರ್ಟರ್ಫೈನಲ್ನಲ್ಲಿ ಕನ್ನಡಿಗ ವೇದಾಂತ್ ಗೌಡ ಅವರ ಸವಾಲನ್ನು ಎದುರಿಸಲಿದ್ದಾರೆ. ಎರಡನೇ ಶ್ರೇಯಾಂಕದ ಆಟಗಾರ ದಾರ್ಶ್ ಮಲ್ಹಾನ್ 6–0, 6–1ರಿಂದ ಜೀವನ್ ವಿರುದ್ಧ ಗೆಲುವು ಸಾಧಿಸಿದರು.
ಶ್ರೇಯಾಂಕ ರಹಿತ ಆಟಗಾರ ಮೋಹಿತ್ ಪಿ. ಅವರು 6–0, 6–3ರಿಂದ ಎಂಟನೇ ಶ್ರೇಯಾಂಕದ ಪಂಡಿತ್ ದೇವ್ ಅವರಿಗೆ ಆಘಾತ ನೀಡಿದರು. ಮೂರನೇ ಶ್ರೇಯಾಂಕದ ಆಟಗಾರ ಆಹನ್ ಶಾ ಬೈ ಪಡೆದು 16ರ ಘಟ್ಟಕ್ಕೆ ಮುನ್ನಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.