ADVERTISEMENT

ICC World Cup 2023: ಬೆಂಗಳೂರಿನಲ್ಲಿ ಭಾರತ ತಂಡದ ಆಟಗಾರರ ತಾಲೀಮು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2023, 23:30 IST
Last Updated 8 ನವೆಂಬರ್ 2023, 23:30 IST
<div class="paragraphs"><p>ಭಾರತ ತಂಡದ ಕೆ.ಎಲ್. ರಾಹುಲ್ ಅಭ್ಯಾಸ ನಡೆಸಿದರು.</p></div>

ಭಾರತ ತಂಡದ ಕೆ.ಎಲ್. ರಾಹುಲ್ ಅಭ್ಯಾಸ ನಡೆಸಿದರು.

   

– ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ಬೆಂಗಳೂರು: ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವ ಭಾರತ ತಂಡದ ಆಟಗಾರರು ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು.

ADVERTISEMENT

ಕರ್ನಾಟಕದ ಕೆ.ಎಲ್. ರಾಹುಲ್ ಮತ್ತು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಇಲ್ಲಿ ಪ್ರಮುಖ ಆಕರ್ಷಣೆಯಾಗಿದ್ದರು. ನಾಯಕ ರೋಹಿತ್ ಶರ್ಮಾ ಮತ್ತು ತರಬೇತಿ ಸಿಬ್ಬಂದಿಯೂ ಪಾಲ್ಗೊಂಡಿದ್ದರು.

ವಿಶ್ವಕಪ್ ಟೂರ್ನಿಯ ಕಳೆದ ಎಂಟೂ ಪಂದ್ಯಗಳಲ್ಲಿ ವಿಕೆಟ್‌ಕೀಪಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲಿಯೂ ಚೆನ್ನಾಗಿ ಆಡಿರುವ ರಾಹುಲ್ ಪ್ರಮುಖ ಆಕರ್ಷಣೆಯಾಗಿದ್ದರು. ಅವರು ಕೆಲಹೊತ್ತು ವ್ಯಾಯಾಮ ಮಾಡಿದರು. ನಂತರ ಕ್ಯಾಚಿಂಗ್ ಮತ್ತು ಬ್ಯಾಟಿಂಗ್ ಅಭ್ಯಾಸವನ್ನೂ ಮಾಡಿದರು.

ಇದೇ 12ರಂದು ರೌಂಡ್ ರಾಬಿನ್ ಲೀಗ್ ಪಂದ್ಯವು ಇಲ್ಲಿ ನಡೆಯಲಿದ್ದು ಆತಿಥೇಯ ತಂಡವು ನೆದರ್ಲೆಂಡ್ಸ್ ಎದುರು ಆಡಲಿದೆ. ಮೂರು ದಿನಗಳ ಹಿಂದೆ ದಕ್ಷಿಣ ಆಫ್ರಿಕಾ ಎದುರು ಜಯಿಸಿದ್ದ ತಂಡವು ಬೆಂಗಳೂರಿಗೆ ಬಂದಿಳಿದಿದೆ.

ತಂಡದ ವೇಗದ ಬೌಲರ್ ಜಸ್‌ಪ್ರೀತ್ ಬೌಲರ್ ಅವರು ನೆಟ್ಸ್‌ನಲ್ಲಿಯೂ ತಮ್ಮ ಸ್ವಿಂಗ್ ಮತ್ತು ಶರವೇಗದ ಎಸೆತಗಳನ್ನು ಪ್ರಯೋಗಿಸಿದರು. ಈ ಸಂದರ್ಭದಲ್ಲಿ ಬ್ಯಾಟಿಂಗ್ ಮಾಡಿದ   ಇಶಾನ್ ಕಿಶನ್ ಅವರ ಹೊಟ್ಟೆಗೆ ಬೂಮ್ರಾ ಹಾಕಿದ ಎಸೆತವೊಂದು ಅಪ್ಪಳಿಸಿತು. ಕೆಲ ನಿಮಿಷಗಳವರೆಗೆ ನೋವು ಅನುಭವಿಸಿ, ಸುಧಾರಿಸಿಕೊಂಡ ಇಶಾನ್ ಅಭ್ಯಾಸ ಮುಂದುವರಿಸಿದರು.

ಸುಮಾರು 20 ನಿಮಿಷಗಳ ಕಾಲ ಬೂಮ್ರಾ ಬೌಲಿಂಗ್ ಮಾಡಿದರು. ಬೂಮ್ರಾ ಈ ಟೂರ್ನಿಯಲ್ಲಿ ಎಂಟು ಪಂದ್ಯಗಳಲ್ಲಿ ಆಡಿದ್ದಾರೆ. 3.65ರ ಸರಾಸರಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ತಮ್ಮ ವಿಭಿನ್ನ ಶೈಲಿಯ ಎಸೆತಗಳಿಂದ ಬ್ಯಾಟರ್‌ಗಳನ್ನು ಬೀಟ್ ಮಾಡುತ್ತ ಒತ್ತಡ ಹಾಕುವ ಕಲೆ ಕರಗತಗೊಳಿಸಿಕೊಂಡಿರುವ ಅವರದ್ದು ಇದು ಶ್ರೇಷ್ಠ ಬೌಲಿಂಗ್. ಅದರಲ್ಲೂ ಪವರ್‌ಪ್ಲೇ ಅವಧಿಯಲ್ಲಿ ಅವರು 2.9ರ ಸರಾಸರಿ ಹೊಂದಿದ್ದಾರೆ.

ಶಾರ್ದೂಲ್ ಠಾಕೂರ್ ಮತ್ತು ಪ್ರಸಿದ್ಧ ಕೃಷ್ಣ ಕೂಡ ಇಲ್ಲಿದ್ದರು. ಶುಭಮನ್ ಗಿಲ್ ಬ್ಯಾಟಿಂಗ್ ಅಭ್ಯಾಸ ನಡೆಸಿದಿರು. 

ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಮತ್ತು ಕುಲದೀಪ್ ಯಾದವ್ ಅವರು  ಹೋಟೆಲ್‌ನ ತಮ್ಮ ಕೋಣೆಯಲ್ಲಿ ಉಳಿದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.