ನಿಯಂತ್ರಣ ಕಳೆದುಕೊಂಡು ಅಡ್ಡಾದಿಡ್ಡಿ ಚಲಿಸುತ್ತಿದ್ದ ಜೆಸಿಬಿಗೆ ವೇಗವಾಗಿ ಬರುವ ಮಹೀಂದ್ರಾ ಬೊಲೆರೊ ಎಸ್ಯುವಿಯೊಂದು ಜೋರಾಗಿ ಅಪ್ಪಳಿಸಿ ವ್ಯಕ್ತಿಯೊಬ್ಬನ ಪ್ರಾಣ ಉಳಿಸಿದ ವಿಡಿಯೊವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಸಿನಿಮೀಯ ಘಟನೆಯ ವಿಡಿಯೋ ಸದ್ಯ ಟ್ವಿಟರ್ನಲ್ಲಿ "ಬೊಲೆರೊ" ಎಂಬ ಹ್ಯಾಶ್ಟ್ಯಾಂಗ್ ಟ್ರೆಂಡಿಂಗ್ ಆಗುವಂತೆ ಮಾಡಿದೆ.
ಈ ಘಟನೆ ಕೇರಳದಲ್ಲಿ ನಡೆದಿದ್ದು ಎಂದು ಹೇಳಲಾಗಿದೆ. ಕೋಯಿಕ್ಕೋಡು–ಪಾಲಕ್ಕಾಡ್ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಯುವಕನೊಬ್ಬ ತನ್ನ ಬೈಕ್ ಮೇಲೆ ಕುಳಿತಿರುತ್ತಾನೆ. ಆತನ ಹಿಂಬದಿಯಲ್ಲಿ ಅಡ್ಡಾದಿಡ್ಡಿಯಾಗಿ ಚಲಿಸುತ್ತಾ ಬರುವ ಜೆಸಿಬಿ, ಇನ್ನೇನು ಯುವಕನನ್ನು ಡಿಕ್ಕಿ ಹೊಡೆದುಕೊಂಡು ಹೋಗುವ ಸಾಧ್ಯತೆಗಳಿರುತ್ತವೆ. ಆದರೆ, ಅದೇ ಹೊತ್ತಿಗೆ ಯುವಕನ ಮುಂಬದಿಯಿಂದ ವೇಗವಾಗಿ ಬರುವ ಬೊಲೆರೋ ಎಸ್ಯುವಿ ಇನ್ನೇನು ಯುವಕನಿಗೆ ಡಿಕ್ಕಿ ಹೊಡೆಯಲಿದ್ದ ಜೆಸಿಬಿಗೆ ರಭಸವಾಗಿ ಗುದ್ದುತ್ತದೆ. ಡಿಕ್ಕಿಯ ರಭಸಕ್ಕೆ ಪಥ ಬದಲಿಸುವ ಜೆಸಿಬಿ ಯುವಕನಿಂದ ಕೂದಲೆಳೆ ಅಂತರದಲ್ಲಿ ಪಕ್ಕಕ್ಕೆ ತಿರುಗುತ್ತದೆ. ಯುವಕ ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗುತ್ತಾನೆ.
ಜೆಸಿಬಿಗೆ ಡಿಕ್ಕಿ ಹೊಡೆದ ಮಹೀಂದ್ರ ಬೊಲೆರೊ ಎಸ್ಯುವಿ ಅಲ್ಲೆ ಪಕ್ಕದಲ್ಲೇ ನಿಲ್ಲುತ್ತದೆ. ಅದರ ಮುಂಬಾಕ್ಕೆ ಸ್ವಲ್ಪ ಹಾನಿಯಾಗಿರುತ್ತದೆ. ಆದರೆ, ಯುವಕನ ಜೀವ ಉಳಿಸಿರುತ್ತದೆ.
ಈ ವಿಡಿಯೊ ಸದ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುವ ಮೂಲಕ ಬೊಲೊರೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ‘ಯುವಕನ ಜೀವ ಉಳಿಸಿದ ಬೊಲೊರೆ,’ ಎಂದೆಲ್ಲ ನೆಟ್ಟಿಗರು ಮಾತಾಡುತ್ತಿದ್ದಾರೆ.
ತಮ್ಮ ಕಂಪನಿಯ ವಾಹನದ ಬಗ್ಗೆ ಸಾಮಾಜಿಕ ತಾಣಗಳಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಆನಂದ್ ಮಹೀಂದ್ರ ಅವರೂ ಸೇರಿದೆ ಇರಲಿಲ್ಲ. ಪತ್ರಕರ್ತ ಅಲೋಕ್ ಶ್ರೀವಾತ್ಸವ ಅವರು ಹಂಚಿಕೊಂಡಿದ್ದ ವಿಡಿಯೊವನ್ನು ರೀಟ್ವೀಟ್ ಮಾಡಿರುವ ಆನಂದ್ ಮಹೀಂದ್ರ, ‘ಬೊಲೆರೊ ಇಲ್ಲಿ ಜೀವಂತವಾಗಿದೆ ಮತ್ತು ಬೈಕ್ ಚಾಲಕನನ್ನು ಉಳಿಸುವುದು ಇದರ ಏಕೈಕ ಉದ್ದೇಶವಾಗಿತ್ತೆಂದು ತೋರುತ್ತದೆ,’ ಎಂದು ಟ್ವೀಟ್ ಮಾಡಿದ್ದಾರೆ.
ಈ ವಿಡಿಯೊವನ್ನು ಹಲವರು ಹಲವು ಅಭಿಪ್ರಾಯಗಳೊಂದಿಗೆ ಹಂಚಿಕೊಂಡಿದ್ದು, ಘಟನೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.