ADVERTISEMENT

ಕೋವಿಡ್‌ನಿಂದ ಆರೋಗ್ಯ ಕ್ಷೇತ್ರದಲ್ಲಿ ಆವಿಷ್ಕಾರ: ಡಾ. ಇಂದು ಭೂಷಣ್

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಡಾ. ಇಂದು ಭೂಷಣ್ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 20:56 IST
Last Updated 19 ನವೆಂಬರ್ 2020, 20:56 IST

ಬೆಂಗಳೂರು: ‘ಸಾಂಕ್ರಾಮಿಕ ಕಾಯಿಲೆಯಾದ ಕೋವಿಡ್‌ ಕಾಣಿಸಿಕೊಂಡ ಬಳಿಕ ಆರೋಗ್ಯ ಕ್ಷೇತ್ರದಲ್ಲಿ ಆವಿಷ್ಕಾರಗಳು ಹೆಚ್ಚುವ ಜತೆಗೆ ತಂತ್ರಜ್ಞಾನದ ಸದ್ಭಳಕೆ ಸಾಕಾರವಾಗುತ್ತಿದೆ’ ಎಂದು ಆಯುಷ್ಮಾನ್ ಭಾರತ್ ಹಾಗೂ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಇಂದು ಭೂಷಣ್ ತಿಳಿಸಿದರು.

ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ‘ಡಿಜಿಟಲ್ ಹೆಲ್ತ್‌ಕೇರ್’ ವಿಷಯದ ಬಗ್ಗೆ ಮಾತನಾಡಿದ ಅವರು, ‘ಕೋವಿಡ್‌ ನಮ್ಮ ಸಂತೋಷವನ್ನು ಕಿತ್ತುಕೊಂಡಿದೆ. ಈ ಅವಧಿಯಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಗಿದೆ. ಇದೇ ವೇಳೆ ಕೆಲವೊಂದು ಪಾಠಗಳನ್ನು ಕೂಡ ಈ ಕಾಯಿಲೆ ಹೇಳಿಕೊಟ್ಟಿದೆ. ಎಲ್ಲ ಕ್ಷೇತ್ರಗಳನ್ನು ತಂತ್ರಜ್ಞಾನವು ಆವರಿಸಿಕೊಳ್ಳುತ್ತಿದೆ. ಇದಕ್ಕೆ ಆರೋಗ್ಯ ಕ್ಷೇತ್ರವೂ ಹೊರತಾಗಿಲ್ಲ. ‘ಆಯುಷ್ಮಾನ್ ಭಾರತ್’ ಯೋಜನೆಯಡಿ ಈ ಸಂದರ್ಭದಲ್ಲಿ ಕೂಡ 10 ಕೋಟಿ ಕುಟುಂಬಗಳಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸಲು ತಂತ್ರಜ್ಞಾನಗಳು ಸಹಕಾರಿಯಾದವು’ ಎಂದರು.

‘24 ಸಾವಿರಕ್ಕೂ ಅಧಿಕ ಆಸ್ಪತ್ರೆಗಳು ‘ಆಯುಷ್ಮಾನ್ ಭಾರತ್’ ಯೋಜನೆಯಡಿ ನೋಂದಾಯಿಸಿಕೊಂಡು ಸೇವೆ ಒದಗಿಸುತ್ತಿವೆ. 12.66 ಲಕ್ಷಕ್ಕೂ ಅಧಿಕ ಇ–ಕಾರ್ಡ್ ವಿತರಿಸಲಾಗಿದೆ. ಡಿಜಿಟಲ್ ವ್ಯವಸ್ಥೆಯಡಿ ಆರೋಗ್ಯ ಗುರುತಿನ ಚೀಟಿ, ಆರೋಗ್ಯ ಸೌಲಭ್ಯಗಳ ನೋಂದಣಿ, ಡಿಜಿ ಡಾಕ್ಟರ್ ಸೇರಿದಂತೆ ವಿವಿದ ವ್ಯವಸ್ಥೆಗಳನ್ನು ರೂಪಿಸಲಾಗಿದೆ. ದ್ವಿತೀಯ ಹಂತದ ಹಾಗೂ ತೃತೀಯ ಹಂತದ ಸೇವೆಗಳು ಸುಲಭವಾಗಿ ಎಲ್ಲೆಡೆ ದೊರೆಯುವಂತಾಗಬೇಕು. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದೇವೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ತಂತ್ರಜ್ಞಾನದ ನೆರವಿನಿಂದ ವಿಶ್ವದರ್ಜೆಯ ಸೇವೆ ಒದಗಿಸಲು ಸಾಧ್ಯವಾಗುತ್ತಿದೆ. ಆರೋಗ್ಯ ಕ್ಷೇತ್ರವು ಆದಾಯ ತಂದುಕೊಡುವ ಜತೆಗೆ ಉದ್ಯೋಗ ಸೃಷ್ಟಿಯನ್ನೂ ಮಾಡುತ್ತಿದೆ. ವೈದ್ಯಕೀಯ ಪ್ರವಾಸೋದ್ಯಮ ಕೂಡ ಅಭಿವೃದ್ಧಿಯಾಗುತ್ತಿದೆ. ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಅಭಿಯಾನವು ನೀತಿ ನಿರೂಪಕರು, ಸೇವೆಗಳ ವಿತರಕರು, ಖಾಸಗಿ ಘಟಕ
ಗಳು, ಆಡಳಿತ ಮಂಡಳಿಗಳು, ಆರೋಗ್ಯ ಕ್ಷೇತ್ರದ ತಜ್ಞರನ್ನು ಒಳಗೊಂಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಗುಣಮಟ್ಟದ ಸೇವೆಗಳು ಸುಲಭವಾಗಿ ಜನರಿಗೆ ದೊರೆಯಲಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.