ಗಾಯಕಿ ಜಾಸ್ಮಿನ್ ಸ್ಯಾಂಡಲ್ಸ್
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಗಾಯಕಿ ಜಾಸ್ಮಿನ್ ಸಂಡ್ಲಾಸ್ ಅವರ ಸಂಗೀತ ಕಾರ್ಯಕ್ರಮದಲ್ಲಿ ಧುರಂಧರ್ ಸಿನಿಮಾ ಹಾಡಿಗೆ ಜನರು ಹುಚ್ಚೆದ್ದು ಕುಣಿದಿದ್ದಾರೆ.
ಆದರೆ ಅದಕ್ಕಿಂತ ಹೆಚ್ಚಾಗಿ ಕಾರ್ಯಕ್ರಮದಲ್ಲಿ ಜಾಸ್ಮಿನ್, ಮಹಿಳೆಯರ ಪರ ಧ್ವನಿ ಎತ್ತಿರುವುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜೋರಾಗಿದೆ.
ಜಾಸ್ಮಿನ್ ಹಾಡು ಹೇಳುತ್ತಿದ್ದ ವೇಳೆ ಇಬ್ಬರು ಯುವಕರು ಮಹಿಳೆಯರಿಗೆ ತೊಂದರೆ ಕೊಡುವುದನ್ನು ಗಮನಿಸಿ ತಕ್ಷಣವೇ ಹಾಡನ್ನು ನಿಲ್ಲಿಸಿದ್ದಾರೆ. ಜತೆಗೆ ಭದ್ರತಾ ಸಿಬ್ಬಂದಿಯನ್ನು ಕರೆದು ಇಬ್ಬರು ಯುವಕರನ್ನು ಹೊರ ಕರೆದೊಯ್ಯುವಂತೆ ಹೇಳಿದ್ದಾರೆ.
‘ಮಹಿಳೆಯರು ಸುರಕ್ಷಿತವಾಗಿದ್ದಾರೆ ಎನ್ನುವ ಭಾವ ಎಲ್ಲಿಯವರೆಗೆ ಬರುವುದಿಲ್ಲವೋ ಅಲ್ಲಿಯವರೆಗೆ ಕಾರ್ಯಕ್ರಮ ಮುಂದುವರಿಸುವುದಿಲ್ಲ, ಹಾಡನ್ನೂ ಹಾಡುವುದಿಲ್ಲ’ ಎಂದಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹರಿದಾಡಿದ್ದು, ಜಾಸ್ಮಿನ್ ಮಹಿಳೆಯರ ಪರ ಧ್ವನಿ ಎತ್ತಿದ್ದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಾಸ್ಮಿನ್ ಅವರು ಧುರಂಧರ್ ಸಿನಿಮಾದಲ್ಲಿ ‘ಶರಾರತ್’ ಹಾಡನ್ನು ಹಾಡಿದ್ದಾರೆ. ಈಗಾಗಲೇ ಈ ಹಾಡು ಸಖತ್ ಹಿಟ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.