ಬೆಂಗಳೂರು: ಗಾಯಗೊಂಡ ಮಗನ ಆರೋಗ್ಯದ ಕುರಿತು ಹಂಚಿಕೊಂಡಿದ್ದ ಬೆಂಗಳೂರು ಮೂಲದ ವ್ಯಕ್ತಿಯ ಪೋಸ್ಟ್ಗೆ ಗೂಗಲ್ ಸಿಇಒ ಸುಂದರ ಪಿಚೈ ಪ್ರತಿಕ್ರಿಯಿಸಿದ್ದಾರೆ. ಸದ್ಯ ಈ ವಿಚಾರ ಇಂಟರ್ನೆಟ್ನಲ್ಲಿ ಸಂಚಲನ ಮೂಡಿಸಿದ್ದು, ಪಿಚೈ ವಿನಮ್ರ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಅಶುತೋಷ್ ಶ್ರೀವಾಸ್ತವ ಎನ್ನುವವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ‘ನಮ್ಮ ಮಗ ಈಥನ್ ಸುಧಾರಿಸಿಕೊಳ್ಳುತ್ತಿದ್ದಾನೆ, ನಿಮ್ಮೆಲ್ಲರ ಹಾರೈಕೆಗೆ ಧನ್ಯವಾದ’ ಎಂದು ಬರೆದುಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಸುಂದರ ಪಿಚೈ, ‘ಆತ ಆರೋಗ್ಯವಾಗಿದ್ದು ಸಂತೋಷವಾಯಿತು’ ಎಂದಿದ್ದಾರೆ. ಇದಕ್ಕೆ ಉತ್ತರಿಸಿರುವ ಅಶುತೋಷ್ ‘ಧನ್ಯವಾದ, ಆತ ಧೈರ್ಯವಂತ’ ಎಂದಿದ್ದಾರೆ.
ಗೂಗಲ್ ಸಿಇಒ ಜನಸಾಮಾನ್ಯರೊಂದಿಗೆ ಸಂವಹನ ನಡೆಸಿರುವುದಕ್ಕೆ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಸುಂದರ್ ಅವರು ಜನಪರ ವ್ಯಕ್ತಿ’ ಎಂದು ನೆಟ್ಟಿಗರೊಬ್ಬರು ಹೇಳಿದ್ದರೆ, ಇನ್ನೊಬ್ಬರು ಬಾಲಕನ ಕುರಿತು ‘ಅದೃಷ್ಟವಂತ’ ಎಂದಿದ್ದಾರೆ.
ಮಗ ಈಥನ್ ಗಾಯಗೊಂಡಿರುವ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದ ಅಶುತೋಷ್, ‘ಮಗನಿಗೆ ನೆಲದ ಮೇಲೆ ಬಿದ್ದು ತಲೆಗೆ ಪೆಟ್ಟಾಗಿತ್ತು. ತಕ್ಷಣ ಚಿಕಿತ್ಸೆಗೆ ಕರೆದೊಯ್ದಾಗ ಶಸ್ತ್ರ ಚಿಕಿತ್ಸೆ ಮಾಡಬೇಕೆಂದರು. ಎಲ್ಲ ಪ್ರಕ್ರಿಯೆಗಳೂ ಮುಗಿದು, ಈಗ ಚೇತರಿಸಿಕೊಳ್ಳುತ್ತಿದ್ದಾನೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.