ಭೂಮಿಕಾ: ಕುಟುಂಬವೆಂದರೆ ಸತಿ-ಪತಿ ಮಾತ್ರವೇ?
ಎಲ್ & ಟಿ ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥ ಎಸ್.ಎನ್. ಸುಬ್ರಹ್ಮಣಿಯನ್ ಅವರು ಜಾಗತಿಕವಾಗಿ ಜಾಗೃತಗೊಂಡಿರುವ ಸ್ಪರ್ಧೆಯಲ್ಲಿ ಭಾರತವನ್ನು ಆರ್ಥಿಕವಾಗಿ ಮುನ್ನೆಲೆಗೆ ತರಬೇಕು ಎನ್ನುವ ಉದ್ದೇಶದಿಂದ ಕೆಲಸಗಾರರು ಭಾನುವಾರಗಳಂದೂ ರಜೆ ತೆಗೆದುಕೊಳ್ಳದೆ ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡಬೇಕು. ಅಷ್ಟೆ ಅಲ್ಲದೇ ‘ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು ದಿಟ್ಟಿಸುತ್ತಾ ಕೂರಬಾರದು’ ಎನ್ನುವ ಬೀಸು ಹೇಳಿಕೆಯನ್ನು ನೀಡಿರುವುದು ಈಗ ಕಾರ್ಮಿಕ ವಲಯದಲ್ಲಿ ಚರ್ಚೆ ಕಾವೇರುವಂತೆ ಮಾಡಿದೆ. ಅಸಮಾನ ಸಂಬಳದಿಂದ ಹಿಡಿದು, ಮಹಿಳೆಯರಿಗೆ ಮಾಡಿದ ಅವಮಾನ ಎನ್ನುವವರೆಗೂ ಚರ್ಚೆ ನಡೆಯುತ್ತಿದೆ. ಆದರೆ, ಕುಟುಂಬ ಎಂದರೆ, ಸಂಬಂಧಗಳು ಎಂದರೆ ಕೇವಲ ಗಂಡ ಹೆಂಡತಿಯ ನಡುವಿನದ್ದು ಎನ್ನುವ ಭಾವವನ್ನು ಮನಸ್ಸಿನಲ್ಲಿ ಬಿತ್ತಿದಾಗ ಆಗುವ ಅಪಾಯಗಳ ಬಗ್ಗೆ ಯಾರ ಗಮನವು ಹೋಗಿಲ್ಲವಲ್ಲ!
ಹಾಸ್ಯ ಎನ್ನುವಂತೆ ಕೆಲವು ವರ್ಷಗಳ ಹಿಂದೆ ಕಥೆಯೊಂದು ಚಾಲ್ತಿಯಲ್ಲಿತ್ತು. ಮಹಿಳೆಯೊಬ್ಬಳು ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸಕ್ಕಾಗಿ ಸಂದರ್ಶನಕ್ಕೆ ಹೋದಾಗ ಪ್ರಶ್ನೆಯೊಂದಕ್ಕೆ ಉತ್ತರವಾಗಿ ತನ್ನದು ಕೂಡು ಕುಟುಂಬ ಎನ್ನುತ್ತಾಳೆ. ಅದಕ್ಕೆ ಅಧಿಕಾರಿಯೊಬ್ಬರು ಹಾಗಾದರೆ ನಿಮ್ಮ ಕುಟುಂಬದಲ್ಲಿ ಯಾರೆಲ್ಲ ಇದ್ದೀರಾ? ಎಂದು ಕೇಳಿದಾಗ, ಆಕೆ , ‘ತಾನು ತನ್ನ ಗಂಡ ಕೂಡಿಕೊಂಡು ಇದ್ದೀವಿ’ ಎನ್ನುತ್ತಾಳೆ. ಈ ಕಥೆಗೂ ಸುಬ್ರಹ್ಮಣಿಯನ್ ಅವರ ಹೇಳಿಕೆಗೂ ಎಷ್ಟೊಂದು ಸಾಮ್ಯತೆ!
ಒಂದಷ್ಟು ವರ್ಷಗಳ ಹಿಂದೆ ದೊಡ್ಡ ಕೆಲಸಗಳಿಗೆ ಅಭ್ಯರ್ಥಿಯನ್ನು ತೆಗೆದುಕೊಳ್ಳುವಾಗ ಕೌಟುಂಬಿಕ ಹಿನ್ನೆಲೆಯನ್ನು ಹೇಳುವುದು ಕಡ್ಡಾಯವಾಗಿತ್ತು. ಕಾರಣ, ಕುಟುಂಬದ ಚಿತ್ರಣ ವ್ಯಕ್ತಿಯ ಮಾನಸಿಕ ಆರೋಗ್ಯಕ್ಕೆ ಮಾಪಕ. ಗಂಡ–ಹೆಂಡತಿಯಿಂದ ಮೊದಲಿಟ್ಟು ಅಪ್ಪ, ಅಮ್ಮ, ಮಕ್ಕಳು, ಅಜ್ಜಿ, ತಾತ, ಚಿಕ್ಕಪ್ಪ, ಅತ್ತೆ, ಭಾವ, ಅಳಿಯ ಹೀಗೆ ಬಾಂಧವ್ಯಗಳ ಒಡನಾಟ ಮನುಷ್ಯನನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಯಾವುದೂ ಬೇಡ ಯಾರೂ ಬೇಡ ಎನ್ನುವವರು ದೇಶದ ಅರ್ಥಿಕತೆಗೂ ಪೆಟ್ಟು ನೀಡುತ್ತಾರೆ ಹೌದು. ಅವಿಭಕ್ತ ಕುಟುಂಬಗಳ ಕಣ್ಮರೆಯಿಂದ ಈಗಾಗಲೇ ಸಾಮಾಜಿಕ ಸಾಗುವಳಿಗೆ ಆಗಿರುವ ಹಾನಿಯನ್ನು ಸರಿಪಡಿಸುವ ನಿಟ್ಟಿನಲ್ಲಿ ನಡೆದಿರುವ ಸಂಶೋಧನೆಗಳು ಕುಟುಂಬದವರೊಡನೆ ಒಡನಾಡಿ, ಕುಟುಂಬಕ್ಕೆ ಸಮಯ ಮೀಸಲಿಡಿ, ಕುಟುಂಬದ ಜತೆ ಗುಣಮಟ್ಟದ ಸಮಯ ಕಳೆಯಿರಿ ಎಂದೆಲ್ಲಾ ಹೇಳುತ್ತಿವೆ.
ಮನುಷ್ಯನೊಬ್ಬನ ಮಾನಸಿಕ ಸಮತೋಲನ ಸುಸ್ಥಿರವಾಗಿರಬೇಕು. ಆ ಮೂಲಕ ದೇಹಾರೋಗ್ಯ ನಳನಳಿಸಬೇಕು ಎಂದರೆ ಆತ ಕುಟುಂಬ ಎನ್ನುವ ಜಾಲದೊಳಗಿರಬೇಕು. ಕೇವಲ ಗಂಡ ಮತ್ತು ಹೆಂಡತಿ ಇಬ್ಬರೇ ಎಂದಿಗೂ ಕುಟುಂಬ ಎನಿಸಿಕೊಳ್ಳುವುದಿಲ್ಲ. ಲಕ್ಷಾಂತರ ರೂಪಾಯಿಗಳ ಸಂಪಾದನೆ ಇದ್ದ ಸಾಫ್ಟ್ವೇರ್ ತಂತ್ರಜ್ಞರು ಅನಾಥಪ್ರಜ್ಞೆಯಿಂದ ನರಳಿ ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳೂ ನಮ್ಮ ಕಣ್ಮುಂದಿವೆ.
ಮನೆಯಿಂದ ಓಡಿಹೋಗುವ ಮಕ್ಕಳನ್ನೋ, ಕೌಟುಂಬಿಕ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಎದುರು ನಿಲ್ಲುವ ಮಕ್ಕಳನ್ನೋ ಒಮ್ಮೆ ಮಾತನಾಡಿಸಬೇಕು; ಕುಟುಂಬ ಎಂದರೆ ಏನು ಮತ್ತು ಅದರ ಮಹತ್ವ ಏನು ಎಂದು ತಿಳಿಯಲು. ತಂದೆಯೊಬ್ಬನಿಲ್ಲ ಎಂದು ಕೊರಗುವ ಮಗಳು, ಹೆಂಡತಿ, ಮಗಳನ್ನು ಕಳೆದುಕೊಂಡ ವೃದ್ಧ ವ್ಯಕ್ತಿಯೂ ಸಿಗುತ್ತಾನೆ ಇಲ್ಲಿ. ತುಂಬು ಜೀವನ ನಡೆಸಿ ಜೀವನಯಾತ್ರೆ ಮುಗಿಸಿದ ಅಜ್ಜಿಗೆ ದೇವಸ್ಥಾನ ಕಟ್ಟಿಸಿದ ಮೊಮ್ಮಕ್ಕಳು ಇರುವಂತೆಯೇ, ದೊಡ್ಡಪ್ಪನ ಸೇವೆಗಾಗಿ ಕೆಲಸ ಬಿಟ್ಟು ನಿಂತ ತಮ್ಮನ ಮಕ್ಕಳೂ ಇದ್ದಾರೆ. ಒಂಟಿಯಾದ ಸೋದರತ್ತೆಯನ್ನು ಸಾಕುವ ಅಣ್ಣನ ಮಕ್ಕಳು, ಚಿಕ್ಕಮ್ಮನ ಮನೆ ತೂಗಿಸುವ ಅಕ್ಕನ ಮಕ್ಕಳು ಎಲ್ಲರೂ ಸೇರಿಯೇ ಕುಟುಂಬ. ಇವರೆಲ್ಲರ ಇರುವಿಕೆಯೇ ಬದುಕು. ಈ ಸಂಬಂಧಗಳನ್ನು ದಿಟ್ಟಿಸಿ ನೋಡುತ್ತಾ ಕೂರಬೇಕಿಲ್ಲ, ಕರ್ತವ್ಯಪ್ರಜ್ಞೆಯಲ್ಲಿ ಗಟ್ಟಿಗೊಳಿಸಿಕೊಂಡರೆ ಸಾಕು.
ಕುಟುಂಬ ಎಂದರೆ ಗಂಡ ಹೆಂಡತಿ ಮಾತ್ರ ಎಂದು ಬಿಂಬಿಸುವುದು, ಮದುವೆಯೆಂದರೆ ಸ್ವಾತಂತ್ರ್ಯ ಹರಣ ಎಂದುಕೊಳ್ಳುವುದು, ಮಕ್ಕಳನ್ನು ಹೆರುವುದೆಂದರೆ ಹೊರೆ ಎನ್ನುವುದು, ‘ಸೆಲ್ಫ್ ಲವ್’ ಎನ್ನುವ ಹೆಸರಿನಲ್ಲಿ ಸ್ವಾರ್ಥವನ್ನೇ ತಲೆಗೆ ತುಂಬಿಸುವುದು, ‘ವರ್ಕೋಹಾಲಿಕ್’ ಎನ್ನುವುದು ಹೊಗಳಬೇಕಾದ ವಿಶೇಷತೆ ಎಂದು ಕಾಣುವುದು, ನೆಂಟರೆಂದರೆ ಗಂಟುಕಳ್ಳರು, ಇಷ್ಟರು ಎಂದರೆ ಅನಿಷ್ಟರು ಎನ್ನುವ ಭಾವನೆಯನ್ನು ವಿಷದಂತೆ ಉಣಿಸಲಾಗುತ್ತಿದೆ.
ಕುಟುಂಬ ವ್ಯವಸ್ಥೆಯನ್ನು ಶಿಥಿಲಗೊಳಿಸುವ ಇಂತಹ ಬೋಧನೆಗಳನ್ನು ನಂಬಿಕೊಂಡು ಮುಂದಡಿಯಿಡುವ ತಲೆಮಾರುಗಳು ಭಾವನಾತ್ಮಕವಾಗಿ ದುರ್ಬಲರಾಗುತ್ತಾರೆ. ಸಬಲತೆ ಎಂದರೆ ಬರಿಯ ಹಣಕಾಸಿನ ಸ್ಥಿರತೆ ಅಲ್ಲ. ತನ್ನನ್ನು ತಾನು ನೋಡಿಕೊಳ್ಳಲಾಗದವ ದೇಶದ ಆರ್ಥಿಕ ಸ್ಥಿತಿಗೆ ಕೊಡುಗೆ ಕೊಡಲಾರ ಭಾರವಾಗುತ್ತಾನೆ. ವಿಶ್ವ ಆರೋಗ್ಯ ಸಂಸ್ಥೆಯೇ ನೀಡಿರುವ ವ್ಯಾಖ್ಯಾನದಂತೆ ‘ಆರೋಗ್ಯ’ ಎಂದರೆ ದೇಹಕ್ಕೆ ಅನಾರೋಗ್ಯ ಇಲ್ಲ ಎನ್ನುವುದಲ್ಲ. ಬದಲಿಗೆ, ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸುಸ್ಥಿರತೆ ಇರುವುದು’. ಇಂಥ ಭಾವಭದ್ರತೆ ನೀಡುವುದು ಕುಟುಂಬ ಮತ್ತು ಕುಟುಂಬದೊಡನೆ ವ್ಯಕ್ತಿಯೊಬ್ಬ ತೊಡಗಿಸಿಕೊಳ್ಳುವ ಪರಿಯೂ ಅಮೂಲ್ಯವಾದದ್ದು. ಅತಿಯಾದರೆ ಅಮೃತವೂ ವಿಷವೇ ಆಗುವಂತೆ ಕುಟುಂಬದಲ್ಲಿ ತನ್ನ ಪಾತ್ರಮಿತಿಯ ಅರಿವಿಲ್ಲದೆ ಇರುವುದೂ ಅಪಾಯ, ಅಂತೆಯೇ ಉದ್ಯೋಗದಲ್ಲಿನ ಅತಿ ಮಗ್ನತೆಯೂ ವಿನಾಶಕಾರಿ. ಎರಡರ ನಡುವಿನ ಸಮತೋಲನ ಕಾಪಾಡಿಕೊಳ್ಳಲು ಬೆಂಬಲವಾಗಿ ನಿಲ್ಲಬೇಕಾದ್ದು ಕುಟುಂಬದ ಸದಸ್ಯರ ಹೊಣೆಗಾರಿಕೆ ಮಾತ್ರವಲ್ಲ ಉದ್ಯೋಗದಾತರ ಕರ್ತವ್ಯವೂ ಹೌದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.