ಎರಡು ಹೆಸರು, ಒಂದೆ ಉಸಿರು
ನಾನು ಪತಿ, ನೀನು ಸತಿ
ಒಂದೇ ದಂಪತಿ
–ಕುವೆಂಪು
ಮದುವೆಯ ಸಂದರ್ಭವೋ, ಎಂದೋ ನಡೆದ ವಿಷಮ ಘಟನೆಗಳನ್ನೋ ಕೆಲವರು ಜೀವನಪೂರ್ತಿ ಮನಸ್ಸಿನಲ್ಲೇ ಇಟ್ಟುಕೊಂಡು ತಾವೂ ಕೊರಗಿ, ಜತೆಗಾರ/ಗಾರ್ತಿಯನ್ನೂ ಹೀಯಾಳಿಸಿ ಮಾತನಾಡುವುದುಂಟು. ವರ್ಷಗಟ್ಟಲೇ ಹೀಯಾಳಿಕೆ, ಮೂದಲಿಕೆ, ಅವಮಾನ, ಹಿಂಸೆಯನ್ನು ತಾಳಿಕೊಂಡವರೂ ವೃದ್ಧಾಪ್ಯದಲ್ಲಿ ದಾಂಪತ್ಯದಿಂದ ವಿಮುಖವಾಗುವುದುಂಟು.
ಮದುವೆಯಾದ ಹೊಸತರಲ್ಲಿ ಪ್ರತಿ ದಂಪತಿಗೂ ಈ ಮೇಲಿನ ಸಾಲುಗಳು ಅನ್ವಯ. ಆದರೆ, ದಾಂಪತ್ಯದ ಆರಂಭದಲ್ಲಿದ್ದ ಆ ಪ್ರೀತಿ, ಪ್ರಣಯ ವರುಷಗಳು ಉರುಳಿದಂತೆ ನಿಧಾನಕ್ಕೆ ನೇಪಥ್ಯಕ್ಕೆ ಸರಿಯತೊಡಗುತ್ತವೆ. ಅದುವರೆಗೆ ಕಾಣದ ಐಬು, ಸಬೂಬುಗಳು ಪರಸ್ಪರರಲ್ಲಿ ಕಾಣತೊಡಗುತ್ತವೆ. ಮಕ್ಕಳು, ಕುಟುಂಬದ ಜವಾಬ್ದಾರಿಗಳ ನಡುವೆ ಗಂಡ–ಹೆಂಡತಿ ಇಬ್ಬರೂ ಬದಲಾಗಿ, ತಮ್ಮೊಳಗಿನ ದಾಂಪತ್ಯ ಬಯಸಿದ್ದೇನು ಎಂದು ಪ್ರಶ್ನಿಸಿಕೊಂಡರೆ ಬಹುತೇಕರಿಗೆ ಉತ್ತರ ದೊರೆಯುವುದು ದುರ್ಲಭ.
ಗಂಡು–ಹೆಣ್ಣು ಪರಸ್ಪರರ ದೈಹಿಕ–ಮಾನಸಿಕ ಅಗತ್ಯಗಳನ್ನು ಪೂರೈಸಿಕೊಳ್ಳುವ ಸಲುವಾಗಿ ರೂಪುಗೊಂಡಿರುವಂಥದ್ದೇ ವಿವಾಹ. ‘ಮದುವೆಯಾಗಿ ತಿಂಗಳಿಲ್ಲ, ನೋಡಿರಣ್ಣ ಹೇಗಿದೆ/ ನಾನು ಕರೆದಾಗಲೆಲ್ಲಾ ಬರುವಳೆನ್ನ ಶಾರದೆ... ’ ಅನ್ನುವ ಭಾವದಲ್ಲಿರುವ ಗಂಡನಿಗೆ ಹೆಂಡತಿ ತಾಯಿಯಾಗಿ ಬಡ್ತಿ ಪಡೆದಾಗಲೇ ತಾನೂ ಅಪ್ಪನಾದೆ ಎನ್ನುವ ಅರಿವು ಮೂಡುತ್ತದೆ. ತಂದೆ–ತಾಯಿಯಾಗಿ ಬಡ್ತಿ ಪಡೆದ ದಂಪತಿಗೆ, ತಮ್ಮೊಳಗಿನ ಗಂಡ–ಹೆಂಡತಿಯ ಸ್ಥಾನ ಸದ್ದಿಲ್ಲದೆ ನೇಪಥ್ಯಕ್ಕೆ ಸರಿಯುವುದೂ ಅರಿವಿಗೆ ಬಾರದು.
ಗಂಡು–ಹೆಣ್ಣಿನ ನಡುವಿನ ದಾಂಪತ್ಯ ಬಯಸುವುದು ಪರಸ್ಪರರ ಸುರಕ್ಷತಾ ಭಾವ. ಪರಸ್ಪರರ ಅಗತ್ಯಗಳನ್ನು ಪೂರೈಸಿಕೊಳ್ಳುವುದಷ್ಟೇ ಅಲ್ಲದೆ, ಇಬ್ಬರ ವ್ಯಕ್ತಿತ್ವಗಳೂ ಬೆಳಗಬೇಕೆನ್ನುವುದೇ ದಾಂಪತ್ಯದ ಉದ್ದೇಶ. ಆದರೆ, ಪುರುಷ ಪ್ರಧಾನ ಸಮಾಜದಲ್ಲಿ ಹೆಂಡತಿಯಾದವಳು ಎಂದಿಗೂ ಗಂಡ, ಆತನ ಮನೆಯವರು, ಮಕ್ಕಳ ಸೇವೆಗಷ್ಟೇ ಸೀಮಿತ ಅನ್ನುವಂಥ ಭಾವ ಇನ್ನೂ ಇರುವುದರಿಂದ ಅಲ್ಲಿ ಹೆಣ್ಣಿನ ನಿರ್ಧಾರ, ಅಸ್ತಿತ್ವ, ಸ್ವಾಭಿಮಾನಕ್ಕೆ ಜಾಗವಿಲ್ಲದಾಗಿದೆ. ಉದ್ಯೋಗಸ್ಥೆಯಾದರೂ, ಮನೆಕೆಲಸ, ಕೌಟುಂಬಿಕ ಜವಾಬ್ದಾರಿಗಳಿಂದ ಆಕೆಗೆ ಗಂಡಿನಷ್ಟು ವಿರಾಮ ದೊರೆಯುವುದು ಕಡಿಮೆಯೇ. ಕೆಲವರು ಇದಕ್ಕೆ ವ್ಯತಿರಿಕ್ತರೂ ಇರುತ್ತಾರೆ. ಗಂಡ–ಹೆಂಡತಿ ಇಬ್ಬರೂ ಪರಸ್ಪರರ ಬದ್ಧತೆ ಅರಿತುಕೊಂಡು, ಸಮಾನವಾಗಿ ಜವಾಬ್ದಾರಿ ಹಂಚಿಕೊಂಡಷ್ಟು ದಾಂಪತ್ಯದ ಚೆಲುವು ಹೆಚ್ಚುತ್ತದೆ.
ಭಾವನಾತ್ಮಕವಾಗಿ ಗಂಡಿನ ಆಸರೆ ಬಯಸುವ ಹೆಣ್ಣಿನ ಮಾನಸಿಕ ತುಮುಲಗಳನ್ನು ಗಂಡನಾದವನು ಅರ್ಥೈಸಿಕೊಳ್ಳುವಲ್ಲಿ ವಿಫಲನಾದಾಗಲೇ ದಾಂಪತ್ಯದಲ್ಲಿ ಏರುಪೇರಾಗುತ್ತದೆ. ಗೊತ್ತಿದ್ದೋ, ಗೊತ್ತಿಲ್ಲದೆಯೋ ಪಿತೃಪ್ರಧಾನ ಮೌಲ್ಯಗಳ ಅಚ್ಚಿನ ಪ್ರಭಾವದಲ್ಲಿರುವ ಗಂಡು, ಅದರಿಂದ ಹೊರಬರಲಾಗದೇ ಹೆಣ್ಣನ್ನು ನಿಯಂತ್ರಿಸುವ ಮೂಲಕ ದಾಂಪತ್ಯದಲ್ಲೂ ಮೇಲುಗೈ ಸಾಧಿಸಲು ಪ್ರಯತ್ನಿಸುತ್ತಾನೆ. ಲೈಂಗಿಕತೆ, ಮಕ್ಕಳ ಮೂಲಕ ಹೆಣ್ಣನ್ನು ನಿಯಂತ್ರಿಸಬಹುದೆಂಬುದೇ ಇಂದಿಗೂ ಬಹುತೇಕ ಪುರುಷರ ನಂಬಿಕೆಯಾಗಿದೆ. ತವರುಮನೆ ಬಿಟ್ಟು ತನಗಾಗಿ ಬಂದ ಹೆಣ್ಣನ್ನು ಇಂದಿಗೂ ಮನೆಗೆಲಸದವಳಂತೆಯೇ ನಡೆಸಿಕೊಳ್ಳುವುದುಂಟು. ತನ್ನ ವ್ಯಕ್ತಿತ್ವ, ಉದ್ಯೋಗ, ಸಮಾಜದಲ್ಲಿನ ಸ್ಥಾನಮಾನಕ್ಕೆ ಪರೋಕ್ಷವಾಗಿ ಹೆಂಡತಿಯೂ ಉತ್ಪಾದಕತೆಯ ಭಾಗವಾಗಿರುತ್ತಾಳೆ ಎಂಬುದನ್ನೇ ಮರೆತವನಿಗೆ ದಾಂಪತ್ಯದಲ್ಲಿ ಒಲುಮೆಯ ಕೊರತೆ ಕಾಡಿದಾಗಲೂ ತನ್ನ ಅಹಂಕಾರವೇ ಮುಖ್ಯವಾಗುತ್ತದೆ.
ಗಂಡ ಇರುವುದೇ ದುಡಿಯಲು, ಸ್ಟೇಟಸ್ ಕಾಪಾಡಿಕೊಳ್ಳಲು ಒಡವೆ, ವಸ್ತ್ರದಲ್ಲೇ ಮೈಮರೆಯುವ ಹೆಂಡತಿಗೆ ಆತನೊಳಗಿನ ಒತ್ತಡದ ಬದುಕು ಅರಿವಿಗೂ ಬಾರದು. ಹಾಗಿದ್ದರೆ ದಾಂಪತ್ಯ ಬಯಸುವುದೇನು ಎಂಬುದನ್ನು ಗಂಡ–ಹೆಂಡತಿ ಇಬ್ಬರೂ ಪ್ರಶ್ನಿಸಿಕೊಂಡರೆ, ಪ್ರೀತಿ, ಗೌರವ, ನಂಬಿಕೆ, ವಿಶ್ವಾಸ ಎಂಬ ಸರಳ ಉತ್ತರವೇನೋ ದೊರೆಯಬಲ್ಲದು. ಆದರೆ, ಅದನ್ನು ದಾಂಪತ್ಯದಲ್ಲಿ ಅಳವಡಿಸಿಕೊಳ್ಳಲು ಹೊರಟಾಗ ಕಾಡುವ ಸಮಸ್ಯೆಗಳು ನೂರಾರು. ಅಹಂ, ಅನುಮಾನ, ಒತ್ತಡ, ಕೋಪಗಳನ್ನು ನಿಯಂತ್ರಿಸಿಕೊಳ್ಳದ ಹೊರತು ದಾಂಪತ್ಯದಲ್ಲಿ ಅನುರಾಗ ಅರಳದು ಎನ್ನುವ ಸತ್ಯವನ್ನು ಅವರವರೇ ಕಂಡುಕೊಳ್ಳಬೇಕು ಎನ್ನುತ್ತಾರೆ ಆಪ್ತ ಸಮಾಲೋಚಕಿ ವೇದಾವತಿ ಹಿರೇಮಠ.
ಮದುವೆಯ ಸಂದರ್ಭವೋ, ಎಂದೋ ನಡೆದ ವಿಷಮ ಘಟನೆಗಳನ್ನು ಕೆಲವು ದಂಪತಿ ಜೀವನಪೂರ್ತಿ ಮನಸ್ಸಿನಲ್ಲೇ ಇಟ್ಟುಕೊಂಡು ತಾವೂ ಕೊರಗಿ, ಜತೆಗಾರ/ಗಾರ್ತಿಯನ್ನೂ ಹೀಯಾಳಿಸಿ ಮಾತನಾಡುವುದುಂಟು. ವರ್ಷಗಟ್ಟಲೇ ಹೀಯಾಳಿಕೆ, ಮೂದಲಿಕೆ, ಅವಮಾನ, ಹಿಂಸೆಯನ್ನು ತಾಳಿಕೊಂಡವರೂ ವೃದ್ಧಾಪ್ಯದಲ್ಲಿ ದಾಂಪತ್ಯದಿಂದ ವಿಮುಖವಾಗುವುದುಂಟು. ತಪ್ಪುಗಳು ನಡೆದಾಗ ಪರಸ್ಪರರು ಕ್ಷಮಿಸಿ, ಮುಂದೆ ನಡೆಯಬೇಕಾದ ಹಾದಿಯ ಕುರಿತು ಯೋಚಿಸುವುದು ಇಬ್ಬರಿಗೂ ಕ್ಷೇಮ. ಆದರೆ, ಪದೇ ಪದೇ ಅಂಥವೇ ತಪ್ಪುಗಳು ನಡೆದಾಗ ವಿಮುಖರಾಗುವುದು ಉತ್ತಮ ಎಂಬುದು ವೇದಾ ಅವರ ಅಭಿಮತ.
ಗಂಡ–ಹೆಂಡತಿ ಇಬ್ಬರಲ್ಲೂ ಮುಕ್ತತೆ, ವಿಶ್ವಾಸ, ನಂಬಿಕೆಯ ಜತೆಗೆ ಯಾವುದೇ ಸಂದರ್ಭವನ್ನೂ ಒಟ್ಟಾಗಿ ಎದುರಿಸುವ ಮನೋಭಾವ ಇದ್ದಲ್ಲಿ ಮಾತ್ರ ದಾಂಪತ್ಯ ಯಶಸ್ವಿಯಾಗಲ್ಲದು. ಯಶಸ್ವಿ ಪುರುಷನ ಹಿಂದೆ ಹೆಣ್ಣು ಇರುತ್ತಾಳೆ ಎಂಬ ಮಾತಿನಂತೆ ಯಶಸ್ವಿ ಮಹಿಳೆಯ ಹಿಂದೆ ಪುರುಷನೂ ಇರುತ್ತಾನೆ ಎಂಬ ಭಾವ ಮೂಡದ ಹೊರತು ದಾಂಪತ್ಯ ಪರಿಪೂರ್ಣವಾಗದು. ಅರ್ಧನಾರೀಶ್ವರನ ಹಿಂದಿನ ಆಶಯವೂ ಅದೇ ಅಲ್ಲವೇ?
ಅರ್ಥ ಮಾಡಿಕೊಳ್ಳಬೇಕು...
ಗಂಡ ಹೆಂಡತಿ ಇಬ್ಬರೂ ಪರಸ್ಪರ ಅರ್ಥ ಮಾಡಿಕೊಳ್ಳುವುದು ಮುಖ್ಯ. ನಮ್ಮಲ್ಲಿನ ಧನಾತ್ಮಕ ಗುಣಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಅದನ್ನು ನಿವಾರಿಸಿಕೊಳ್ಳುವುದು ಮುಖ್ಯ. ನಿರ್ಲಕ್ಷಿಸಿದಷ್ಟೂ ಅದು ಸಮಸ್ಯೆಯಾಗಿ ಬೆಳೆಯುತ್ತದೆ. ಹಿಂದೆ ಗಂಡ ಹೆಂಡತಿ ನಡುವೆ ವಯಸ್ಸಿನ ಅಂತರ ಜಾಸ್ತಿ ಇರುತ್ತಿತ್ತು. ಆಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿತ್ತು. ಆದರೆ ಈಗ ವಯಸ್ಸಿನ ಅಂತರ ಕಡಿಮೆಯಾಗಿರುವುದರಿಂದ ಇಬ್ಬರೂ ಅರ್ಥ ಮಾಡಿಕೊಳ್ಳಲು ಸುಲಭವಾಗಿದೆ. ಹಂ ಇಬ್ಬರ ನಡುವೆ ಸುಳಿಯದಂತೆ ಎಚ್ಚರಿಕೆ ವಹಿಸುವುದು ಒಳ್ಳೆಯದು. ಅಗತ್ಯಬಿದ್ದರೆ ಕೌನ್ಸೆಲಿಂಗ್ ಮಾಡಿಸಿಕೊಳ್ಳುವುದು ಒಳ್ಳೆಯದು. ಸಾಧ್ಯವಾದಷ್ಟೂ ಇಬ್ಬರೂ ತಾಳ್ಮೆ ವಹಿಸಿ ತಿದ್ದಿಕೊಳ್ಳಲು ಅವಕಾಶ ನೀಡಬೇಕು. ಇನ್ನು ಹೊಂದಾಣಿಕೆ ಸಾಧ್ಯವೇ ಇಲ್ಲ ಅನ್ನುವಂಥ ಸಂದರ್ಭದಲ್ಲಿ ದೂರವಾಗುವುದೇ ಲೇಸು.–ಸಮುದ್ಯತಾ ಕಂಜರ್ಪಣೆ ಲೇಖಕಿ
ಪ್ರೀತಿಯೇ ಮುಖ್ಯ
ಮದುವೆಯಾದ ಹೊಸತರಲ್ಲಿ ಚಂದ್ರು ದಿನಕ್ಕೆ ಮೂರು ಸಿನಿಮಾದಲ್ಲಿ ನಟಿಸುತ್ತಿದ್ದರು. ಆಗೆಲ್ಲ ಜೀವನವೇ ಇಷ್ಟೇ ಅಂದುಕೊಂಡಿದ್ದೆ. ಹಳ್ಳಿಯಲ್ಲಿ ಹುಟ್ಟಿ ಬೆಳೆದ ನನಗೆ ಸಿಟಿ ಜೀವನ ಹೊಸದಾಗಿತ್ತು. ಆದರೆ ಗಂಡನ ಪ್ರೀತಿ ಗೌರವ ನನ್ನನ್ನು ಬೆಳೆಸಿತು. ಮನೆಗೇ ಸೀಮಿತವಾಗಬೇಡ. ಹೊರಗೆ ಪ್ರಪಂಚ ನೋಡು ಅಂತ ಅವರು ಪ್ರೋತ್ಸಾಹಿಸಿದರು. ಹಾಗಾಗಿ ಇಂದು ರಂಗಭೂಮಿ ಸಿನಿಮಾ ರಾಜಕಾರಣದಲ್ಲಿ ನನಗೂ ಒಡನಾಟವಿದೆ. 42 ವರ್ಷಗಳ ನಮ್ಮ ದಾಂಪತ್ಯದಲ್ಲಿ ಇಬ್ಬರೂ ಅನುಸರಿಸಿಕೊಂಡು ಹೋಗಿದ್ದೇವೆ. ಏಳುಬೀಳು ಕಂಡಿದ್ದೇವೆ. ಆದರೆ ಯಾವುದಕ್ಕೂ ಧೈರ್ಯಗೆಟ್ಟಿಲ್ಲ. ಪರಸ್ಪರ ಗೌರವ ಪ್ರೀತಿಯೇ ನಮ್ಮನ್ನು ಕಾಪಾಡಿದೆ. ಮುಖ್ಯವಾಗಿ ಸಣ್ಣಪುಟ್ಟ ವಿಷಯಕ್ಕೆ ಮನಸ್ತಾಪ ಮಾಡಿಕೊಳ್ಳಬಾರದು. ಇರುವಷ್ಟು ದಿನ ಇದ್ದುದ್ದರಲ್ಲೇ ಸಂತಸದಿಂದ ಇರಬೇಕು ಎಂಬುದನ್ನು ಕಲಿತಿದ್ದೇವೆ.ಪದ್ಮಾ ಚಂದ್ರು ‘ಮುಖ್ಯಮಂತ್ರಿ’ ಚಂದ್ರು ಪತ್ನಿ
ಜಗಳವಿದ್ದರೆ ಪ್ರೀತಿ ಹೆಚ್ಚು!
ಹೆಂಡತಿ ಗಂಡನ ಗುಲಾಮಳಲ್ಲ ಎಂಬುದನ್ನು ಮೊದಲು ಅರಿಯಬೇಕು. ಜೀವನ ಸಂವಿಧಾನಕ್ಕೆ ಉನ್ನತ ಶಿಕ್ಷಣ ಬೇಕಿಲ್ಲ. ಸಾಮಾನ್ಯ ಜ್ಞಾನವಿದ್ದರೆ ಸಾಕು. ಗಂಡ–ಹೆಂಡತಿ ಜಗಳ ಆಡಲೇಬೇಕು. ಎಲ್ಲರೆದುರು ಜಗಳವಾಗಬೇಡಿ. ಜಗಳ ಆಡದಿದ್ದರೆ ಪ್ರೀತಿಗೆ ಅರ್ಥವಿರುವುದಿಲ್ಲ. ಆ ಜಗಳ ಉಲ್ಪಣವಾಗಬಾರದು ಅಹಂಗೆ ಕಾರಣವಾಗಬಾರದು. ಅತಿರೇಕಕ್ಕೆ ಹೋದಾಗ ಆ ವಿಷಯವನ್ನು ಬಿಟ್ಟು ಬೇರೆಯತ್ತ ಗಮನ ಹರಿಸಿ ಆಮೇಲೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಸಂಸಾರದಲ್ಲಿ ಏನೇ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ನಿಮ್ಮಾಕೆಗೆ ಒಂದು ಮಾತು ಕೇಳಿ. ದುಡ್ಡೇ ಮುಖ್ಯವಲ್ಲ ಸಾಮರಸ್ಯ ಪ್ರೀತಿ ಅವರ ಇಷ್ಟಾನಿಷ್ಟಗಳ ಕಡೆಗೆ ಗಮನವಿರಲಿ. ಕೆಲವೊಮ್ಮೆ ಅಂತಿಮ ನಿರ್ಧಾರ ಕೈಗೊಳ್ಳುವುದನ್ನು ಅವರಿಗೇ ಬಿಡುವೆ. ಹೆಣ್ಣುಮಕ್ಕಳಿಗೆ ಗೌರವ ಕೊಟ್ಟರೆ ದಾಂಪತ್ಯದಲ್ಲಿ ಪ್ರೀತಿ ತಾನಾಗಿಯೇ ಹೆಚ್ಚುತ್ತದೆ.‘ಮುಖ್ಯಮಂತ್ರಿ’ ಚಂದ್ರು
ಮೂರನೆಯವರನ್ನು ದೂರವಿಡಿ
ಗಂಡ–ಹೆಂಡತಿ ಇಬ್ಬರೂ ತಮ್ಮ ಜೀವನದಲ್ಲಿ ಮೂರನೆಯವರನ್ನು ಆದಷ್ಟು ದೂರವಿಡುವುದು ಕ್ಷೇಮಕರ. ಊಟದಲ್ಲಿ ಉಪ್ಪಿನಕಾಯಿ, ಪಲ್ಯದಂತೆ ನಿಮ್ಮ ಪೋಷಕರು, ಸ್ನೇಹಿತರು, ಸಂಬಂಧಿಕರು ಇರಬೇಕು. ಆದರೆ, ಅವರೇ ನಿಮ್ಮಿಬ್ಬರ ಮೇಲೆ ಮೇಲುಗೈ ಸಾಧಿಸುವಂತಿರಬಾರದು. ಆಪ್ತ ಸಮಾಲೋಚಕಿವೇದಾವತಿ ಹಿರೇಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.