ADVERTISEMENT

ತಲೆಕೆಡಿಸಿಕೊಳ್ಳಬೇಡಿ: ಹಾರ್ದಿಕ್‌ಗೆ ಸ್ಮಿತ್ ಕಿವಿಮಾತು

ಮೈದಾನದಲ್ಲಿ ಮೂದಲಿಕೆ, ನಿಂದೆ

ಪಿಟಿಐ
Published 29 ಮಾರ್ಚ್ 2024, 14:23 IST
Last Updated 29 ಮಾರ್ಚ್ 2024, 14:23 IST
<div class="paragraphs"><p>ಸ್ಟೀವ್‌ ಸ್ಮಿತ್</p></div>

ಸ್ಟೀವ್‌ ಸ್ಮಿತ್

   

ಪಿಟಿಐ ಚಿತ್ರ

ನವದೆಹಲಿ: ಇದುವರೆಗಿನ ಎರಡು ಪಂದ್ಯಗಳಲ್ಲಿ ಪ್ರೇಕ್ಷಕರಿಂದ ಎದುರಾದ ನಿಂದೆ ಮತ್ತು ದೂಷಣೆ ‘ಅಪ್ರಸ್ತುತವಾಗಿರುವ’ ಕಾರಣ  ಅವನ್ನೆಲ್ಲಾ ಮರೆತುಬಿಡುವಂತೆ ಮುಂಬೈ ಇಂಡಿಯನ್ಸ್‌ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಸ್ಟೀವ್‌ ಸ್ಮಿತ್ ಕಿವಿಮಾತು ಹೇಳಿದ್ದಾರೆ.

ADVERTISEMENT

ಮುಂಬೈ ಇಂಡಿಯನ್ಸ್ ತಂಡವು ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದು, ಆ ಹೊಣೆಯನ್ನು ಗುಜರಾತ್‌ ಟೈಟನ್ಸ್‌ನಿಂದ ಮರಳಿರುವ ಪಾಂಡ್ಯ ಅವರಿಗೆ ವಹಿಸಲಾಗಿದೆ. ಲೀಗ್‌ನಲ್ಲಿ ಮುಂಬೈ ಆರಂಭ ಕಳಪೆಯಾಗಿದ್ದು ಆಡಿದ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿದೆ.

ಸೋಲಿನ ಜೊತೆಗೆ ಪಂದ್ಯ ನಡೆದ ಸ್ಥಳಗಳಲ್ಲಿ (ಅಹಮದಾಬಾದ್ ಮತ್ತು ಹೈದರಾಬಾದ್‌) ಗುಜರಾತ್‌ ಮಾಜಿ ನಾಯಕನಿಗೆ ಪ್ರೇಕ್ಷಕರಿಂದ ಮೂದಲಿಕೆ ಎದುರಾಗಿದೆ. ರೋಹಿತ್ ಅವರನ್ನು ನಾಯಕತ್ವದಿಂದ ಕಿತ್ತುಹಾಕಿದ್ದು ಅಭಿಮಾನಿಗಳಿಗೆ ಪಥ್ಯವಾಗಿಲ್ಲ.

‘ಅವುಗಳನ್ನೆಲ್ಲಾ ತಲೆಯಿಂದ ತೆಗೆದುಹಾಕಬೇಕು. ಈಗ ಅವೆಲ್ಲಾ ಅಪ್ರಸ್ತುತ’ ಎಂದು ಸ್ಮಿತ್ ಇಎಸ್‌ಪಿಎನ್‌ ಕ್ರಿಕ್‌ಇನ್ಫೊಗೆ ಹೇಳಿದ್ದಾರೆ. ಕೇಪ್‌ಟೌನ್‌ನಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣದ ನಂತರ ಸ್ಟೀವ್ ಸ್ಮಿತ್ ಅವರೂ ಕೂಡ ಪ್ರೇಕ್ಷಕರ ಲೇವಡಿಗೆ ಗುರಿಯಾಗಿದ್ದರು. ಕ್ರಿಕೆಟ್‌ ಅಭಿಮಾನಿಗಳು ಅವರನ್ನು ‘ಚೀಟ್‌’ (ಮೋಸಗಾರ) ಎಂದು ಕರೆದಿದ್ದರು.

‘ವೈಯಕ್ತಿಕವಾಗಿ ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅದರ ಕಡೆ ಗಮನವನ್ನೇ ಕೊಡೋದಿಲ್ಲ’ ಎಂದು ಸ್ಮಿತ್ ಹೇಳಿದ್ದಾರೆ. ಚೆಂಡು ವಿರೂಪಗೊಳಿಸಿದ ಹಗರಣದ ತರುವಾಯ ಅವರು (2018ರಲ್ಲಿ) ರಾಜಸ್ಥಾನ ರಾಯಲ್ಸ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು.

ಮುಂಬೈ ತಂಡ ಅವರನ್ನು ‘ರಿಲೀಸ್‌’ ಮಾಡಿದ ನಂತರ 2022ರಲ್ಲಿ ಅವರು ಗುಜರಾತ್ ತಂಡದ ನಾಯಕತ್ವ ವಹಿಸಿದ್ದು ತಂಡ ಮೊದಲ ಯತ್ನದಲ್ಲೇ ಚಾಂಪಿಯನ್ ಆಗಿತ್ತು. ಎರಡು ಆವೃತ್ತಿಗಳ ನಂತರ ನವೆಂಬರ್‌ನಲ್ಲಿ ಅವರು ಮುಂಬೈ ತಂಡ ಅವರನ್ನು ಕರೆಸಿಕೊಂಡಿತ್ತು. ಮಾತ್ರವಲ್ಲ, ನಾಯಕತ್ವವನ್ನೂ ದಯಪಾಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.