ADVERTISEMENT

ಕಿರಾಣಿ ವ್ಯಾಪಾರಿಗಳಿಗೆ ‘ಉಡಾನ್‌’ ನೆರವು

​ಕೇಶವ ಜಿ.ಝಿಂಗಾಡೆ
Published 12 ನವೆಂಬರ್ 2019, 19:45 IST
Last Updated 12 ನವೆಂಬರ್ 2019, 19:45 IST
‘ಉಡಾನ್‌’ ಸಹಸ್ಥಾಪಕರಾದ ಅಮೋದ್‌ ಮಾಳವಿಯಾ, ವೈಭವ್‌ ಗುಪ್ತಾ ಮತ್ತು ಸುಜೀತ್‌ ಕುಮಾರ್
‘ಉಡಾನ್‌’ ಸಹಸ್ಥಾಪಕರಾದ ಅಮೋದ್‌ ಮಾಳವಿಯಾ, ವೈಭವ್‌ ಗುಪ್ತಾ ಮತ್ತು ಸುಜೀತ್‌ ಕುಮಾರ್   

ಕಿರಾಣಿ ಅಂಗಡಿ ಮಾಲೀಕರು ಮತ್ತು ಚಿಲ್ಲರೆ ಮಾರಾಟಗಾರರು ಎದುರಿಸುತ್ತಿರುವ ಸರಕು ಖರೀದಿ, ಸಾಗಾಣಿಕೆ ಮತ್ತು ಹಣಕಾಸು ನೆರವಿನ ಸಮಸ್ಯೆಗಳನ್ನು ಪರಿಹರಿಸಲು ಬೆಂಗಳೂರಿನಲ್ಲಿ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ನವೋದ್ಯಮ ‘ಉಡಾನ್‌’ ನೆರವಾಗುತ್ತಿದೆ. ಸರಕುಗಳ ತಯಾರಿಕಾ ವಲಯದ ಸಣ್ಣ, ಮಧ್ಯಮ ಮತ್ತು ದೊಡ್ಡ ಉದ್ದಿಮೆದಾರರ (ಎಸ್‌ಎಂಇ) ವಹಿವಾಟಿಗೂ ನೆರವು ಕಲ್ಪಿಸುವ ದೇಶದ ಅತಿದೊಡ್ಡ ‘ಬಿಟುಬಿ’ ಇ–ಕಾಮರ್ಸ್‌ ಕಂಪನಿ ಇದಾಗಿದೆ.

ದೇಶದ ಯಾವುದೇ ಮೂಲೆಯಲ್ಲಿ ಇರುವ ಕಿರಾಣಿ ಅಂಗಡಿಗಳಿಗೆ ಸರಕುಗಳ ತಯಾರಕರು, ವಿತರಕರು ಮತ್ತು ಸಗಟು ವರ್ತಕರಿಂದ ಉತ್ಪನ್ನಗಳನ್ನು ‘ಉಡಾನ್‌’ ವೇದಿಕೆಯಡಿ ವ್ಯವಸ್ಥಿತವಾಗಿ ಪೂರೈಸುವ ದೇಶದ ಅತಿದೊಡ್ಡ ಸರಕು ವಿತರಣಾ ಜಾಲವೂ ಇದಾಗಿದೆ. ವಿವಿಧ ಬಗೆಯ ಉತ್ಪನ್ನಗಳು, ಜನಪ್ರಿಯ ಬ್ರ್ಯಾಂಡ್‌ನ ಸರಕುಗಳಿಗೆ ಮಾರುಕಟ್ಟೆ ವಿಸ್ತರಿಸಲೂ ಇದು ನೆರವಾಗುತ್ತಿದೆ.

ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ (ಎಫ್‌ಎಂಸಿಜಿ), ಸಿದ್ಧ ಉಡುಪು, ಮೊಬೈಲ್‌, ಫ್ಯಾಷನ್‌ ಪರಿಕರ, ಎಲೆಕ್ಟ್ರಾನಿಕ್ಸ್‌, ಗೃಹೋಪಯೋಗಿ ಸಲಕರಣೆ, ಅಡುಗೆ ಮನೆ ಪರಿಕರ, ಮಕ್ಕಳ ಆಟಿಕೆ, ಸ್ಟೇಷನರಿ, ಪಾದರಕ್ಷೆ, ಔಷಧಿ, ಶಿಶು ಕಾಳಜಿ ಮತ್ತಿತರ ಸಿದ್ಧ ಉತ್ಪನ್ನಗಳನ್ನು ನಗರದಿಂದ ನಗರಕ್ಕೆ ಮತ್ತು ಮಹಾನಗರಗಳ ಒಳಗೆ ಪೂರೈಸಲು ಇದು ಮಧ್ಯವರ್ತಿಯಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದೆ.

ADVERTISEMENT

ಸಣ್ಣ ವ್ಯಾಪಾರಿಗಳಿಗೆ ಸುಲಭವಾಗಿ ಸಾಲ ಸೌಲಭ್ಯವನ್ನೂ ಒದಗಿಸಿಕೊಡುತ್ತದೆ. ವ್ಯಾಪಾರ ವಹಿವಾಟಿಗೆ ಸಾಂಪ್ರದಾಯಿಕ ವಿಧಾನವನ್ನೇ ನೆಚ್ಚಿಕೊಂಡಿರುವ ಕಿರಾಣಿ ವ್ಯಾಪಾರಿಗಳ ವಹಿವಾಟು ವಿಸ್ತರಣೆಗೆ ಅಗತ್ಯವಾದ ನೆರವು ಕಲ್ಪಿಸಿಕೊಟ್ಟು ವರಮಾನ ಮತ್ತು ಲಾಭ ಹೆಚ್ಚಿಸಿಕೊಳ್ಳಲು ನೆರವಾಗುತ್ತಿದೆ. ಸರಕುಗಳ ತಯಾರಕರ (ಎಸ್‌ಎಂಇ) ಪಾಲಿಗೆ ಸುಲಭ ಮತ್ತು ಪಾರದರ್ಶಕ ರೀತಿಯಲ್ಲಿ ವಹಿವಾಟು ವಿಸ್ತರಿಸುವ ಸದವಕಾಶವನ್ನೂ ಒದಗಿಸುತ್ತಿದೆ.

ವ್ಯಾಪಾರಿಗಳು ಸರಕುಗಳ ಆಯ್ಕೆ, ಖರೀದಿ, ಪೂರೈಕೆಗೆ ಬೇರೆ, ಬೇರೆ ಏಜೆನ್ಸಿಗಳನ್ನು ನೆಚ್ಚಿಕೊಳ್ಳುವ ಸಂಕೀರ್ಣ ಸ್ವರೂಪದ ವ್ಯವಸ್ಥೆಗೆ ಬದಲಿಗೆ, ಈ ಎಲ್ಲ ವಹಿವಾಟುಗಳನ್ನು ಒಂದೆಡೆಯೇ ಸುಲಭವಾಗಿ ನಿರ್ವಹಿಸುವುದನ್ನು ಈ ಸ್ಟಾರ್ಟ್‌ಅಪ್‌ ಕಲ್ಪಿಸಿಕೊಟ್ಟಿದೆ. ಚಿಕ್ಕಪುಟ್ಟ ವರ್ತಕರು, ಕಿರಾಣಿ ಅಂಗಡಿ ಮಾಲೀಕರು ತಾವು ಮಾರುವ ಸರಕು ಆಯ್ಕೆ ಮಾಡಿಕೊಂಡು ತಯಾರಕರು ಮತ್ತು ಸಗಟು ಪೂರೈಕೆದಾರರಿಂದ ಖರೀದಿಸಿ, ತಮ್ಮಲ್ಲಿಗೆ ತರಿಸಿಕೊಳ್ಳಲು ಉಡಾನ್‌ ನೆಚ್ಚಿಕೊಂಡರೆ ಸಾಕು. ‘ಉಡಾನ್‌’ (Udaan) ಹೆಸರಿನ ಮೊಬೈಲ್‌ ಆ್ಯಪ್‌ ಮೂಲಕ ಎಲ್ಲ ವಹಿವಾಟನ್ನು ಸುಲಭವಾಗಿ ನಿರ್ವಹಿಸಬಹುದು. ಸದ್ಯಕ್ಕೆ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯಲ್ಲಿ ಇರುವ ಆ್ಯಪ್‌ನಲ್ಲಿ ಪ್ರಾದೇಶಿಕ ಭಾಷೆಗಳನ್ನೂ ಅಳವಡಿಸುವ ಕಾರ್ಯಪ್ರಗತಿಯಲ್ಲಿ ಇದೆ.

ಇ–ಕಾಮರ್ಸ್‌ನ ದೈತ್ಯ ಸಂಸ್ಥೆ ಫ್ಲಿಪ್‌ಕಾರ್ಟ್‌ನಲ್ಲಿ ಆರೇಳು ವರ್ಷಗಳ ಕಾಲ ಉನ್ನತ ಹುದ್ದೆಯಲ್ಲಿದ್ದು, ಅದರ ವಹಿವಾಟು ವಿಸ್ತರಿಸಿದ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮೂವರು ಸಮಾನ ಮನಸ್ಕರು ಅಲ್ಲಿಂದ ಹೊರಬಂದು
ಇ–ಕಾಮರ್ಸ್‌ ಕ್ಷೇತ್ರದ ‘ಬಿಟುಬಿ’ ವಹಿವಾಟಿನ ‘ಉಡಾನ್‌’ ಕಂಪನಿಯನ್ನು 2016ರಲ್ಲಿ ಸ್ಥಾಪಿಸಿದ್ದಾರೆ. ಫ್ಲಿಪ್‌ಕಾರ್ಟ್‌ನ ಮಾಜಿ ಸಿಟಿಒ ಅಮೋದ್‌ ಮಾಳವಿಯಾ, ಮಾಜಿ ಹಿರಿಯ ಉಪಾಧ್ಯಕ್ಷ ವೈಭವ್‌ ಗುಪ್ತಾ ಮತ್ತು ಕಾರ್ಯಾಚರಣೆಯ ಮಾಜಿ ಅಧ್ಯಕ್ಷ ಸುಜೀತ್ ಕುಮಾರ್‌ ಅವರು ಇದರ ಸಹ ಸ್ಥಾಪಕರಾಗಿದ್ದಾರೆ.

ಸರಕುಗಳ ತಯಾರಕರು ಮತ್ತು ಖರೀದಿದಾರರನ್ನು ಕೇಂದ್ರಿಕರಿಸಿಕೊಂಡು ಈ ನವೋದ್ಯಮ ಸ್ಥಾಪಿಸಲಾಗಿದೆ.
ಸರಕುಗಳ ದಕ್ಷ ಸ್ವರೂಪದ ವಿತರಣಾ ಸೌಲಭ್ಯವನ್ನು ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿನ ಸಣ್ಣ–ಪುಟ್ಟ ವರ್ತಕರು ಹಾಗೂ ಸಣ್ಣ ಪ್ರಮಾಣದ ತಯಾರಕರಿಗೂ ಒದಗಿಸುವುದು ಈ ಸ್ಟಾರ್ಟ್‌ಅಪ್‌ ಸ್ಥಾಪಕರ ಉದ್ದೇಶವಾಗಿದೆ. ದೇಶಿ ಆರ್ಥಿಕತೆಗೆ ಹೆಚ್ಚು ಪ್ರಸ್ತುತವಾದ ಸರಕುಗಳ ಪೂರೈಕೆಯ ಸರಣಿ ವಹಿವಾಟಿನ ಕೊರತೆಯನ್ನು ಇದು ತುಂಬಿಕೊಡುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಅಸಂಖ್ಯ ರಿಟೇಲ್‌ ವರ್ತಕರು, ಸರಕುಗಳ ತಯಾರಕರು, ವಿತರಕರು ಮತ್ತು ಹಣ್ಣು –ತರಕಾರಿ ಬೆಳೆಯುವ ರೈತರೂ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.

ವಹಿವಾಟಿಗೆ ಅಗತ್ಯವಾದ ಹಣಕಾಸು ನೆರವನ್ನೂ ತ್ವರಿತವಾಗಿ ಒದಗಿಸಿಕೊಡುತ್ತಿದೆ. ಬ್ಯಾಂಕ್‌ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಮೂಲಕ ಸುಲಭ ರೀತಿಯಲ್ಲಿ ಸಾಲ ಒದಗಿಸುತ್ತಿದೆ. ಸಾಲದ ಪ್ರಮಾಣ ಕನಿಷ್ಠ ₹ 5 ಸಾವಿರದಿಂದಲೂ ಆರಂಭಗೊಳ್ಳುತ್ತದೆ. ಆ್ಯಪ್‌ ಬಳಕೆ ಸದ್ಯಕ್ಕೆ ಇಂಗ್ಲಿಷ್‌ಗೆ ಸೀಮಿತವಾಗಿದೆ. ಸದ್ಯದಲ್ಲೇ ಪ್ರಾದೇಶಿಕ ಭಾಷೆಯಲ್ಲಿಯೂ ಪರಿಚಯಿಸಲಿದೆ.

ರಿಟೇಲ್‌ ಮತ್ತು ಮಾರಾಟಗಾರರ ಅನುಕೂಲಕ್ಕೆಂದು ಸರಕು ಸಾಗಣೆ ಉದ್ದೇಶಕ್ಕೆ ಪ್ರತ್ಯೇಕ ವಿಭಾಗ ‘ಉಡಾನ್‌ ಎಕ್ಸ್‌ಪ್ರೆಸ್‌’ ಆರಂಭಿಸಿದೆ. ರಿಟೇಲ್‌ ವರ್ತಕರಿಗೆ ತಂತ್ರಜ್ಞಾನ ನೆರವು ಒದಗಿಸಿ ಅವರಿಗೆ ಹೆಚ್ಚು ಪ್ರಯೋಜನ ಕಲ್ಪಿಸುವುದು. ಕಿರಾಣಿ ಅಂಗಡಿಯವರಿಗೂ ಇಂಟರ್‌ನೆಟ್‌ನ ಪ್ರಯೋಜನ ಕಲ್ಪಿಸಿ ವಹಿವಾಟು ವಿಸ್ತರಿಸಲು ನೆರವಾಗುವುದು ತಮ್ಮ ಉದ್ದೇಶವಾಗಿದೆ ಎಂದು ಸ್ಥಾಪಕರಲ್ಲಿ ಒಬ್ಬರಾಗಿರುವ ವೈಭವ್‌ ಗುಪ್ತಾ ಹೇಳುತ್ತಾರೆ.

‘ಎರಡು ವರ್ಷಗಳ ಹಿಂದೆ (2017) ಅಸ್ತಿತ್ವಕ್ಕೆ ಬಂದಿರುವ ಕಂಪನಿಯು, ಅಲ್ಪಾವಧಿಯಲ್ಲಿ ದೇಶದಾದ್ಯಂತ ತನ್ನ ವಹಿವಾಟನ್ನು ವಿಸ್ತರಿಸಿದೆ. ಚಿಕ್ಕ ವ್ಯಾಪಾರಿಗಳು ಸ್ವತಂತ್ರವಾಗಿ ವಹಿವಾಟು ವಿಸ್ತರಿಸಲು ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ. ದೇಶದಲ್ಲಿನ ವಿಶಾಲ ಮಾರುಕಟ್ಟೆಯಲ್ಲಿ ‘ಬಿಟುಬಿ’ ವಹಿವಾಟು ವಿಸ್ತರಿಸಲು ಸಾಕಷ್ಟು ಅವಕಾಶ ಇದೆ. ರೈತರಿಗೆ ನೆರವಾಗಲು ಹಣ್ಣು ಮತ್ತು ತರಕಾರಿ ವಹಿವಾಟನ್ನೂ ಆರಂಭಿಸಿದೆ. ಈ ಮೂಲಕ ಅವರಿಗೆ ನ್ಯಾಯೋಚಿತ ಬೆಲೆ ಒದಗಿಸಿಕೊಡುವುದು ತಮ್ಮ ಧ್ಯೇಯವಾಗಿದೆ’ ಎಂದು ಸುಜೀತ್‌ ಕುಮಾರ್‌ ಹೇಳುತ್ತಾರೆ

ಕಿರಾಣಿ ಅಂಗಡಿ, ಸಣ್ಣ ಪ್ರಮಾಣದ ರಿಟೇಲರ್‌ಗಳಿಗೆ ಸರಕುಗಳ ಪೂರೈಕೆ, ಹಣಕಾಸು ನೆರವು ಮತ್ತು ಸರಕುಗಳ ಸಾಗಾಣಿಕೆಯ ಕೆಲಸಗಳನ್ನೆಲ್ಲ ದಕ್ಷತೆಯಿಂದ ನಿರ್ವಹಿಸುತ್ತಿರುವ ಈ ನವೋದ್ಯಮವು ಯಶಸ್ಸಿನ ದಾಪುಗಾಲು ಹಾಕುತ್ತಿದೆ. ಎರಡು ವರ್ಷಗಳ ಅಲ್ಪಾವಧಿಯಲ್ಲಿಯೇ ₹ 7,000 ಕೋಟಿ ಮಾರುಕಟ್ಟೆ ಮೌಲ್ಯದ ಯಶಸ್ವಿ ನವೋದ್ಯಮ (Unicorn) ಆಗಿ ಬೆಳೆದು ನಿಂತಿದೆ.

ಮಾಹಿತಿಗೆ udaan.com ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.