
ಕಡೂರು: ಜನರಿಗೆ ವಾಯುವಿಹಾರಕ್ಕೆ ಅನುಕೂಲವಾಗುವ ಹೈಟೆಕ್ ಪಾರ್ಕ್ ಪಟ್ಟಣದಲ್ಲಿ ತಲೆಯೆತ್ತಲಿದೆ.
ಕಡೂರು ಪಟ್ಟಣಕ್ಕೆ ಹತ್ತಿರದಲ್ಲಿರುವ ವೇದಾ ಪಂಪ್ಹೌಸ್ ಬಳಿ ಜಿ.ಟಿ.ಟಿ.ಸಿ. ಕಾಲೇಜಿನ ಪಕ್ಕವಿರುವ ಪುರಸಭೆಯ ಸುಮಾರು ಐದು ಎಕರೆ ಜಾಗ ಬಹುವರ್ಷಗಳಿಂದ ನಿರುಪಯೋಗಿಯಾಗಿತ್ತು. ಹಿರಿಯ ನಾಗರಿಕರಿಗೆ ಬೆಳಗಿನ ವಾಕಿಂಗ್ ಹೋಗಲು ಸೂಕ್ತ ಜಾಗವಿರಲಿಲ್ಲ. ಕೆಲವರು ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣಕ್ಕೆ, ಕೆಲವರು ಎಪಿಎಂಸಿ ಪ್ರಾಂಗಣಕ್ಕೆ ಹೋಗುತ್ತಾರೆ. ಉದ್ಯಾನದ ಕೊರತೆ ನೀಗಿಸುವ ನಿಟ್ಟಿನಲ್ಲಿ ಪುರಸಭೆ ಇದರ ನಿರ್ಮಾಣಕ್ಕೆ ಮುಂದಾಗಿದೆ.
ಪಟ್ಟಣಕ್ಕೆ ಹತ್ತಿರದ ಜಾಗದಲ್ಲಿ ಉದ್ಯಾನವಿರಬೇಕು. ವಾರಾಂತ್ಯದಲ್ಲಿ ಕುಟುಂಬ ಸಮೇತ ಹೋಗಿ ಒಂದಿಷ್ಟು ಹೊತ್ತು ಕಳೆದು ಬರಲು ಪಟ್ಟಣದ ಜನರಿಗೆ ಒಂದು ಜಾಗವಿರಬೇಕು ಎಂಬ ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಅವರ ಕನಸಾಗಿತ್ತು.
ಈ ಚಿಂತನೆಗೆ ಪೂರಕವಾಗಿ ಯೋಜನೆ ತಯಾರಿಸಲಾಗಿದೆ. ಪುರಸಭೆಯ ಈ ವರ್ಷದ ಬಜೆಟ್ನಲ್ಲಿ ₹ 48 ಲಕ್ಷ ಮೀಸಲಿಟ್ಟು ಯೋಜನೆಗೆ ಅನುಮೋದನೆ ಪಡೆಯಲಾಗಿದೆ. ಉದ್ಯಾನ ನಿರ್ಮಾಣಕ್ಕೆ ಜಾಗ ಸಮತಟ್ಟು ಮಾಡುವ ಕಾರ್ಯ ಮುಗಿದಿದೆ. ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದೆ.
‘ಪಟ್ಟಣದ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹೈಟೆಕ್ ಪಾರ್ಕ್ ನಿರ್ಮಾಣ ಆರಂಭಗೊಂಡಿದೆ. ಶಾಸಕ ಬೆಳ್ಳಿಪ್ರಕಾಶ್ ಸಹಕಾರದೊಂದಿಗೆ ಪಾರ್ಕ್ ಅಭಿವೃದ್ಧಿಗೆ ವಿವಿಧ ಇಲಾಖೆಗಳಿಂದ ಲಭ್ಯ ಅನುದಾನ ಪಡೆಯಲು ಪ್ರಯತ್ನಿಸಲಾಗುತ್ತದೆ’ ಎಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ ಪ್ರತಿಕ್ರಿಯಿಸಿದರು.
‘ಸುಸಜ್ಜಿತ ಹೈಟೆಕ್ ಪಾರ್ಕ್ ನಿರ್ಮಾಣವಾದರೆ ಕಡೂರು ಜನರಿಗೆ ಇದು ಅಮೂಲ್ಯ ಕೊಡುಗೆಯಾಗಲಿದೆ’ ಎಂದು ಮುಖ್ಯಾಧಿಕಾರಿ ಎಚ್.ಎನ್.ಮಂಜುನಾಥ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.