ADVERTISEMENT

ಕೋವಿಡ್‌ ಎರಡನೇ ಅಲೆ: ಇಂದು, ನಾಳೆ ಅಘೋಷಿತ ಬಂದ್

ತಡೆಗಾಗಿ ವಾರಾಂತ್ಯದ ಕರ್ಫ್ಯೂ: ಮನೆ ಸೇರಿದ ಜನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2021, 4:45 IST
Last Updated 24 ಏಪ್ರಿಲ್ 2021, 4:45 IST
ವಾರಾಂತ್ಯದ ಕರ್ಫ್ಯೂ ನಿಮಿತ್ತ ದಾವಣಗೆರೆಯ ಕಾಳಿಕಾದೇವಿ ರಸ್ತೆಯಲ್ಲಿ ಜವಳಿ ಅಂಗಡಿಗಳನ್ನು ಬಂದ್ ಮಾಡಿರುವುದರಿಂದ ರಸ್ತೆ ಬಿಕೋ ಎನ್ನುತ್ತಿತ್ತು (ಎಡಚಿತ್ರ) ಕೃಷಿ ಸಂಬಂಧ ಉಪಕರಣಗಳಿಗೆ ವಿನಾಯಿತಿ ನೀಡಿದ್ದರಿಂದ ದಾವಣಗೆರೆಯ ಪಿ.ಬಿ.ರಸ್ತೆಯಲ್ಲಿ ಪೈಪ್‌ಗಳನ್ನು ಖರೀದಿಸಿ ಕೊಂಡೊಯ್ಯಲಾಯಿತು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ವಾರಾಂತ್ಯದ ಕರ್ಫ್ಯೂ ನಿಮಿತ್ತ ದಾವಣಗೆರೆಯ ಕಾಳಿಕಾದೇವಿ ರಸ್ತೆಯಲ್ಲಿ ಜವಳಿ ಅಂಗಡಿಗಳನ್ನು ಬಂದ್ ಮಾಡಿರುವುದರಿಂದ ರಸ್ತೆ ಬಿಕೋ ಎನ್ನುತ್ತಿತ್ತು (ಎಡಚಿತ್ರ) ಕೃಷಿ ಸಂಬಂಧ ಉಪಕರಣಗಳಿಗೆ ವಿನಾಯಿತಿ ನೀಡಿದ್ದರಿಂದ ದಾವಣಗೆರೆಯ ಪಿ.ಬಿ.ರಸ್ತೆಯಲ್ಲಿ ಪೈಪ್‌ಗಳನ್ನು ಖರೀದಿಸಿ ಕೊಂಡೊಯ್ಯಲಾಯಿತು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ:ಕೋವಿಡ್‌ ಎರಡನೇ ಅಲೆ ತಡೆಗಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ನಗರದಲ್ಲಿ ಶುಕ್ರವಾರ ಅಘೋಷಿತ ಬಂದ್‌ ವಾತಾವರಣ ಕಂಡು ಬಂತು.

ಅಗತ್ಯ ಸೇವೆಗಳನ್ನು ಒದಗಿಸುವ ಔಷಧ ಅಂಗಡಿಗಳು, ದಿನಸಿ ಅಂಗಡಿಗಳು, ಬೇಕರಿ, ತರಕಾರಿ, ಹಣ್ಣಿನ ಅಂಗಡಿ, ಹೋಟೆಲ್‌, ಹಾಲಿನ ಕೇಂದ್ರಗಳು, ಕಟ್ಟಡ ನಿರ್ಮಾಣ ಸಾಮಗ್ರಿಗಳ ಮಳಿಗೆ, ಕೃಷಿ ಪರಿಕರಗಳು, ಸೆಲೂನ್‌ ಸೇರಿದಂತೆ ಸರ್ಕಾರ ಪಟ್ಟಿ ಮಾಡಿರುವ ಮಳಿಗೆಗಳು ಮಾತ್ರ ತೆರೆದಿದ್ದವು. ಜವಳಿ, ಎಲೆಕ್ಟ್ರಾನಿಕ್ಸ್‌, ಪಾತ್ರೆ, ಮೊಬೈಲ್‌, ಚಿನ್ನಾಭರಣ, ಪಾದರಕ್ಷೆಗಳು, ಹಾರ್ಡ್‌ವೇರ್‌ ಅಂಗಡಿಗಳು ಮುಚ್ಚಿದ್ದವು. ಆದರೆ ಜನ ಸಂಚಾರ ಮಾತ್ರ ತುಸು ಜಾಸ್ತಿಯೇ ಇತ್ತು.

ಅಂಗಡಿಗಳನ್ನು ಮುಚ್ಚುವಂತೆ ಗುರುವಾರ ಪೊಲೀಸರು ಎಚ್ಚರಿಕೆ ನೀಡಿದ್ದರಿಂದನಗರದ ಹಳೇ ದಾವಣಗೆರೆಯ ಭಾಗದಲ್ಲಿ ಶುಕ್ರವಾರ ಬೆಳಿಗ್ಗೆ ಜವಳಿ ಅಂಗಡಿ ಹಾಗೂ ಆಭರಣ ಮಳಿಗೆಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ದರು. ವಾರಾಂತ್ಯದಲ್ಲಿ ಹೆಚ್ಚಿನ ವ್ಯಾಪಾರವಾಗುವುದು ಸಹಜ. ಆದರೆ ಕೊರೊನಾ ಕಾರಣದಿಂದ ಮುಚ್ಚುವಂತೆ ಆದೇಶ ನೀಡಿದ್ದರಿಂದ ಅಂಗಡಿಗಳ ಮಾಲೀಕರು ಹಾಗೂ ಅಲ್ಲಿ ಕೆಲಸ ಮಾಡುವ ಕಾರ್ಮಿಕರು ಚಿಂತೆಗೀಡಾಗಿದ್ದರು.

ADVERTISEMENT

ಧಾರ್ಮಿಕ ಕೇಂದ್ರಗಳು ಬಂದ್: ಕರ್ಫ್ಯೂವಿನಿಂದ ದೇವಾಲಯಗಳು, ಚರ್ಚ್‌ಗಳು ಹಾಗೂ ಮಸೀದಿಗಳು ಬಂದ್ ಆಗಿದ್ದವು. ನಗರದೇವತೆ ದುರ್ಗಾಂಬಿಕಾ ದೇವಾಲಯದಲ್ಲಿ ಬೆಳಿಗ್ಗೆ 6ರಿಂದ 8ಗಂಟೆವರೆಗೆ ಮಾತ್ರ ಪೂಜೆ ನಡೆಯಿತು. ಆ ಬಳಿಕ ಬಾಗಿಲು ಮುಚ್ಚಲಾಯಿತು ಎಂದು ಧರ್ಮದರ್ಶಿ ಗೌಡ್ರು ಚನ್ನಬಸಪ್ಪ ಮಾಹಿತಿ ನೀಡಿದರು.

ವಾರಾಂತ್ಯ ಕರ್ಫ್ಯೂ ಬಿಸಿ: ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಿಗ್ಗೆ 6ರವರೆಗೆ ವಾರಾಂತ್ಯ ಕರ್ಫ್ಯೂ ನಿಮಿತ್ತ ನಗರದಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಸಲು ಮುಗಿ ಬಿದ್ದರು. ನಗರದ ಗಡಿಯಾರ ಕಂಬ, ಮಂಡಿಪೇಟೆ ಅಂಗಡಿಗಳಲ್ಲಿ ಜನಸಂದಣಿ ಕಂಡು ಬಂದಿತು. ಜನರು ಎರಡು ದಿನಗಳಿಗೆ ಆಗುವಷ್ಟು ದಿನಸಿಗಳನ್ನು ಖರೀಸಿದರು.ಕೆ.ಆರ್. ಮಾರುಕಟ್ಟೆ, ಚಾಮರಾಜಪೇಟೆಗಳಲ್ಲಿ ಹಣ್ಣು ತರಕಾರಿ ಕೊಂಡುಕೊಳ್ಳಲು ಮುಗಿಬಿದ್ದಿದ್ದರು.

‘ವಾರಾಂತ್ಯದ ಕರ್ಫ್ಯೂ ಇರುವುದರಿಂದ ಜನರು ತರಕಾರಿಗಳು, ಸೊಪ್ಪು ಹಾಗೂ ಹಣ್ಣುಗಳನ್ನು ಖರೀದಿಸಿದರು. ವ್ಯಾಪಾರವೂ ಚೆನ್ನಾಗಿತ್ತು’ ಎಂದುಬೀದಿ ಬದಿ ಚಿಲ್ಲರೆ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಇಸ್ಮಾಯಿಲ್ ಹೇಳುತ್ತಾರೆ.

ಮದ್ಯ ದುಪ್ಪಟ್ಟು ಸೇಲ್: ಶನಿವಾರ ಹಾಗೂ ಭಾನುವಾರ ಮದ್ಯದ ಮಾರಾಟಕ್ಕೆ ಅವಕಾಶವಿಲ್ಲದೇ ಇರುವುದರಿಂದ ಶುಕ್ರವಾರ ಮದ್ಯದ ವ್ಯಾಪಾರ ದುಪ್ಪಟ್ಟು ಆಗಿದೆ. ಮಾಮೂಲಿ ದಿನಗಳಲ್ಲಿ ಮದ್ಯದ ವ್ಯಾಪಾರ ₹1.25 ಕೋಟಿ ಇರುತ್ತಿತ್ತು. ಆದರೆ ಶುಕ್ರವಾರ ₹ 2.50 ಕೋಟಿಗೂ ಹೆಚ್ಚು ಮದ್ಯ ವ್ಯಾಪಾರವಾಗಿದೆ ಎಂದುಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಈಶ್ವರ್‌ಸಿಂಗ್ ಕವಿತಾಳ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.