ADVERTISEMENT

ತ್ಯಾಜ್ಯ ನೀರಲ್ಲಿ ಉತ್ತಮ ಮೆಕ್ಕೆಜೋಳ: ರೈತನ ಮುಖದಲ್ಲಿ ಸಂತಸ

ಬಳೂಟಗಿ: ಫಸಲು ನೀಡಿದ ಸಜ್ಜೆ

ಕೆ.ಶರಣಬಸವ ನವಲಹಳ್ಳಿ
Published 21 ಸೆಪ್ಟೆಂಬರ್ 2019, 12:34 IST
Last Updated 21 ಸೆಪ್ಟೆಂಬರ್ 2019, 12:34 IST
ತಾವರಗೇರಾ ಸಮೀಪದ ಬಳೂಟಗಿ ಗ್ರಾಮದಲ್ಲಿ ಚರಂಡಿ ನೀರನ್ನು ಬಾವಿಯಲ್ಲಿ ಸಂಗ್ರಹಿಸಿರುವುದು
ತಾವರಗೇರಾ ಸಮೀಪದ ಬಳೂಟಗಿ ಗ್ರಾಮದಲ್ಲಿ ಚರಂಡಿ ನೀರನ್ನು ಬಾವಿಯಲ್ಲಿ ಸಂಗ್ರಹಿಸಿರುವುದು   

ತಾವರಗೇರಾ: ಸತತ ಬರಗಾಲದಿಂದ ಅಂತರ್ಜಲಮಟ್ಟ ಕುಸಿಯುತ್ತಿದೆ. ರೈತರು ಸಕಾಲಕ್ಕೆ ಬೆಳೆ ಇಲ್ಲದೇ ಆರ್ಥಿಕ ನಷ್ಟ ಅನುಭವಿಸುತ್ತಿದ್ಧಾರೆ. ಆದರೆ, ಇಲ್ಲಿನ ರೈತರೊಬ್ಬರು ಗ್ರಾಮದ ತ್ಯಾಜ್ಯ ನೀರನ್ನು ಹೊಂಡದಲ್ಲಿ ಸಂಗ್ರಹಿಸಿ ಅದನ್ನೇ ಬಳಸಿಕೊಂಡು ಉತ್ತಮ ಮೆಕ್ಕೆಜೋಳ ಬೆಳೆದಿದ್ದಾರೆ.

ಸಮೀಪದ ಬಳೂಟಗಿ ಗ್ರಾಮದ ಮಕ್ಬುಲ್‍ಸಾಬ್‌ ಓಲೇಕಾರ ಅವರ ತಮ್ಮ 4 ಎಕರೆ ತೋಟದ ಜಮೀನಿನ ಬೆಳೆಗಳಿಗೆ ಕೊಳಚೆ ನೀರನ್ನು ಬೆಳೆಗೆ ಬಳಸಿಕೊಂಡಿದ್ದಾರೆ. ಗ್ರಾಮದಲ್ಲಿ ಮನೆಗಳಲ್ಲಿ ಮತ್ತು ಜನರು ಬಳಸಿದ ವ್ಯರ್ಥವಾದ ನೀರನ್ನು ಹೊಂಡಕ್ಕೆ ಹರಿಯುವಂತೆ ವ್ಯವಸ್ಥೆ ಮಾಡಿದ್ದಾರೆ. ತೋಟದಲ್ಲಿ ಮೆಕ್ಕೆಜೋಳ, ಸಜ್ಜಿ, ಬಿಟಿ ಹತ್ತಿ ಮತ್ತು ಖಾಲಿ ಪ್ರದೇಶದಲ್ಲಿ ಟೊಮೆಟೊ, ಮೂಲಂಗಿ, ಮೆಂತೆ ಪಲ್ಲೆ, ಉಂಚಿಕ್ ಪಲ್ಲೆ, ಸೌತೆಕಾಯಿ ಸೇರಿ ತರಹೇವಾರಿ ತರಕಾರಿ ಬೆಳೆದು ಉತ್ತಮ ಆದಾಯ ಪಡೆಯುತ್ತಿದ್ದಾರೆ.

ಚರಂಡಿ ನೀರು ಆಸರೆ: ಸುಮಾರು ವರ್ಷಗಳಿಂದ ಗ್ರಾಮದ ಚರಂಡಿ ನೀರು ಹಳ್ಳಕ್ಕೆ ಹರಿಯುತ್ತಿತ್ತು. ಇದನ್ನೇ ಬಳಸಿಕೊಂಡು ತೋಟದಲ್ಲಿ ಹೊಂಡು ನಿರ್ಮಿಸಿ ಆ ನೀರು ಸಂಗ್ರಹಿಸಿದೆ. ಇದಕ್ಕೆ ಮೋಟರ್‌ ಅಳವಡಿಸಿ ಆ ನೀರನ್ನು ಮೆಕ್ಕೆಜೋಳ ಬೆಳೆಗೆ ಹರಿಸಿದೆ. ಇದರಿಂದ ಉತ್ತಮ ಫಸಲು ಬಂದಿದೆ ಎಂದು ಮಕ್ಬೂಲ್‌ ಸಾಬ್‌ ಹೇಳಿದರು.

ADVERTISEMENT

ಗ್ರಾಮದ ಮನೆಗಳ ನಳಗಳು ಹಾಗೂ ಕೀರು ನೀರು ಸಂಗ್ರಹ ತೊಟ್ಟಿಗಳನ್ನು ಅಳವಡಿಸಿ ಹಳ್ಳದ ನೀರು ಪೈಪಲೈನ್‌ ಮೂಲಕ ಸರಬುರಾಜು ಮಾಡುತ್ತಿದ್ದು, ಮಳೆ ಬಂದಾಗ ನೀರು ಚರಂಡಿಗೆ ಹರಿದು ಹೋಗುತ್ತಿದೆ. ನಿತ್ಯ ಸಾರ್ವಜನಿಕರು ಬಳಸುವ ನೀರು ಸಹ ಕಳಚೆ ನೀರಾಗಿ ಹರಿಯುತ್ತಿದೆ. ಹೀಗೆ ನಿತ್ಯ ಸಾವಿರಾರು ಲೀಟರ್ ನೀರು ವ್ಯರ್ಥ ಆಗುವುದನ್ನು ಕಂಡ ರೈತ ಕೃಷಿ ಬಳಕೆಗೆ ಮುಂದಾಗಿದ್ದು, ಜಲ ಸಂರಕ್ಷಣೆ ಯೋಜನೆ ಬಳಕೆ ಮತ್ತು ರೈತನ ಕೃಷಿ ಬದುಕಿಗೆ ಅನುಕೂಲವಾಗಿದೆ ಎನ್ನುತ್ತಾರೆ ಕೃಷಿ ತಜ್ಞರು.

ತಾವರಗೇರಾ ಸಮೀಪದ ಬಳೂಟಗಿ ಗ್ರಾಮದ ರೈತ ಮಕ್ಬುಲ್ಸಾಬ ತೋಟದ ಚರಂಡಿ ನೀರನ್ನು ಬಳಸಿಕೊಂಡು ಬೆಳೆದ ಮಕ್ಕೆ ಜೋಳದ ಬೆಳೆ

ಇವರು ಒಂದು ಎಕರೆಯಲ್ಲಿ ಬಿಟಿ ಹತ್ತಿ ನಾಟಿ ಮಾಡಿದ್ದು, ಸಾಕಷ್ಟು ಪ್ರಮಾಣದ ಕಾಯಿ ಕಟ್ಟಿದೆ. ಒಂದು ಎಕರೆಯಲ್ಲಿ ಮೆಕ್ಕೆಜೋಳ ನಾಟಿ ಬೆಳೆದಿದ್ದಾರೆ. ಸಜ್ಜೆ ಬಿತ್ತಿದ್ದು, ಅದು ಕಟಾವಿಗೆ ಬಂದಿದೆ. ಚರಂಡಿ ನೀರು ಬಳಸಿ ಬೆಳೆಗಳಿಗೆ ಈಗಾಗಲೇ 3 ಸಲ ನೀರು ಹರಿಸಲಾಗಿದೆ. ಕೀಟನಾಶಕ ಬಳಕೆ ಮಾಡಿಲ್ಲ. ಬೆಳೆಗಳಿಗೆ ಯಾವುದೇ ರೋಗ ಕಾಣಿಸಿಲ್ಲ. ಎಲ್ಲಾ ಬೆಳೆಗಳ ಕಸ ತೆಗೆಯಲು, ಸುರಕ್ಷತೆ ಕ್ರಮಗಳಿಗೆ ₹ 34 ಸಾವಿರ ಹಣ ಖರ್ಚು ಮಾಡಿದ್ದಾರೆ.

ಚರಂಡಿ ನೀರು ಹರಿಸಿ ಬೆಳೆದ ಬೆಳೆ ಚೆನ್ನಾಗಿದೆ. ತರಕಾರಿಯಿಂದ ಬಂದ ಲಾಭ ಕುಟುಂಬದ ಖರ್ಚಿಗೆ ಅನುಕೂಲವಾಗಿದೆ. ಮಳೆಯನ್ನೆ ನೆಚ್ಚಿ ಕುಳಿತರೇ ಏನೂ ಬೆಳೆಯಲು ಸಾಧ್ಯವಿಲ್ಲ. ಕೃಷಿಯಲ್ಲಿ ಲಾಭ ಪಡೆಯಲು ನನಗೆ ಗ್ರಾಮದ ಕೊಳಚೆ ನೀರೇ ಆಸರೆಯಾಗಿದೆ ಎಂದರು ಮಕ್ಬುಲ್‍ಸಾಬ್‌.

* ಚರಂಡಿ ನೀರನ್ನು ಬೆಳೆಗೆ ಹರಿಸುವುದರಿಂದ ರೋಗ ಬಂದಿಲ್ಲ. ಬರಗಾಲದಲ್ಲೂ ಚರಂಡಿ ನೀರಿನ ಮೂಲಕ ಬೆಳೆ ಬೆಳೆಯಲು ಸಾಧ್ಯವಾಗಿದೆ. ನನ್ನ ಕೃಷಿ ಬದುಕಿಗೆ ಚರಂಡಿ ನೀರು ಆಸರೆಯಾಗಿದೆ.

-ಮಕ್ಬುಬುಲ್‍ಸಾಬ ಓಲೇಕಾರ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.