ADVERTISEMENT

Zika Virus: ಗರ್ಭಿಣಿಯರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು

ಡಾ.ಗಾಯತ್ರಿ ಡಿ ಕಾಮತ್
Published 23 ಜುಲೈ 2021, 5:49 IST
Last Updated 23 ಜುಲೈ 2021, 5:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋವಿಡ್ ನಂತರ ಅತಿ ಹೆಚ್ಚು ಭಯ ಹುಟ್ಟಿಸುತ್ತಿರುವ ಮತ್ತೊಂದು ರೋಗವೆಂದರೆ ಝೀಕಾ ವೈರಸ್. ಈಗಾಗಲೇ ಕೇರಳ, ಮಹಾರಾಷ್ಟಗಳಲ್ಲಿ ಹೆಚ್ಚು ಝೀಕಾ ವೈರಸ್ ಪ್ರಕರಣ ದಾಖಲಾಗುತ್ತಿದ್ದು, ಅಲ್ಲಿನ ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿದೆ. ಈ ಸಾಂಕ್ರಮಿಕ ರೋಗಕ್ಕೆ ಮದ್ದಿಲ್ಲ. ಅದರಲ್ಲೂ ಈ ವೈರಸ್ ಗರ್ಭಿಣಿಯರಿಗೆ ಹೆಚ್ಚು ಅಪಾಯಕಾರಿ ಎಂದು ಅಧ್ಯಯನದ ಮೂಲಕ ತಿಳಿದು ಬಂದಿದೆ. ಝೀಕಾ ವೈರಸ್ ತಡೆಗಟ್ಟಲು ಹಾಗೂ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಇಲ್ಲಿವೆ.

ಭ್ರೂಣದ ಮೆದುಳಿನ ಮೇಲೆ ಪರಿಣಾಮ:
ಹೌದು, ಸೊಳ್ಳೆಗಳ ಮೂಲಕ ಹರಡುವ ಈ ವೈರಸ್ ಹೆಚ್ಚು, ಗರ್ಭಿಣಿಯರಿಗೆ ಅಪಾಯಕಾರಿಯಾಗಿದೆ. ಗರ್ಭಿಣಿಯರು ಈ ಝೀಕಾ ವೈರಸ್‌ಗೆ ತುತ್ತಾದರೆ ಮೊದಲು ಸಮಸ್ಯೆಯಾಗುವುದೇ ಹುಟ್ಟುವ ಮಗುವಿಗೆ. ಈ ವೈರಸ್‌ನಿಂದ ಭ್ರೂಣಗಳ ಮೆದುಳಿಗೆ ಕ್ರಮಿಸಿ ಮೈಕ್ರೋ ಸೆಫಾಲಿ ಎಂಬ ಗಂಭೀರ ಜನ್ಮ ದೋಷಕ್ಕೆ ಕಾರಣವಾಗಬಹುದು. ಅಂದರೆ ಮಗುವಿನ ಮೆದುಳಿನ ಬೆಳವಣಿಗೆ ಕ್ಷೀಣಿಸಿ, ಮಗು ಆಟಿಸಂನಂಥಹ ರೋಗದೊಂದಿಗೆ ಹುಟ್ಟುವ ಸಾಧ್ಯತೆ ಹೆಚ್ಚು. ಜೊತೆಗೆ, ಶ್ರವಣ ಹಾಗೂ ದೃಷ್ಟಿ ದೋಷ, ಕೀಲುಗಳಲ್ಲಿ ಚಲನೆ ಇಲ್ಲದಿರುವುದು, ನರ ಬೆಳವಣಿಗೆಯಲ್ಲಿ ವೈಪರಿತ್ಯ ಸೇರಿದಂತೆ ಹಲವು ರೀತಿಯ ರೋಗಗಳಿಗೆ ಈ ವೈರಸ್ ಕಾರಣವಾಗಬಹುದು. ಗರ್ಭಿಣಿಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರಂತೂ ಶಿಶುವಿನ ಪ್ರಾಣಕ್ಕೂ ಎರವಾಗಬಹುದು.

ಚಿಕಿತ್ಸೆ ಏನು?:
ಪ್ರಸ್ತುತ ಝೀಕಾ ವೈರಸ್‌ಗೆ ಯಾವುದೇ ನಿಗದಿತ ಚಿಕಿತ್ಸೆಯಾಗಲಿ ಅಥವಾ ಲಸಿಕೆಯಾಗಲಿ ಇಲ್ಲ. ಕೋವಿಡ್ ಲಸಿಕೆ ಹಾಕಿಸಿಕೊಂಡವರಲ್ಲಿ ಝೀಕಾ ವೈರಸ್‌ನಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು ಕಡಿಮೆ ಇದೆ. ಆದರೆ, ಗರ್ಭಿಣಿಯರಿಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಇನ್ನೂ ಅವಕಾಶ ಇಲ್ಲವಾದ್ದರಿಂದ ಹೆಚ್ಚು ಎಚ್ಚರಿಕೆಯಿಂದ ಇರುವುದು ಒಳಿತು.

ADVERTISEMENT
ಡಾ. ಗಾಯತ್ರಿ ಡಿ. ಕಾಮತ್

ಮುನ್ನೆಚ್ಚರಿಕೆ:
ಝೀಕಾ ವೈರಸ್ ಹಗಲಿನಲ್ಲಿ ಬರುವ ಸೊಳ್ಳೆಗಳು ಕಚ್ಚುವುದರಿಂದ ಹರಡಲಿದೆ. ಈಗ ಮಳೆಗಾಲವಾದ್ದರಿಂದ ಸೊಳ್ಳೆ ಉತ್ಪತ್ತಿ ಸಹ ಹೆಚ್ಚು. ಹೀಗಾಗಿ ಈ ಸಮಯದಲ್ಲಿ ಅತಿ ಎಚ್ಚರಿಕೆ ವಹಿಸಬೇಕು. ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸೊಳ್ಳೆ ನಿವಾರಕ ಕ್ರೀಮ್‌ಗಳ ಬಳಕೆ, ಮೈ ತುಂಬಾ ಬಟ್ಟೆ ಧರಿಸುವುದು, ಸೊಳ್ಳೆ ಪರದೆ ಬಳಸುವುದರಿಂದ ಸಾಧ್ಯವಾದಷ್ಟು ತಡೆಗಟ್ಟಬಹುದು. ಮುಖ್ಯವಾಗಿ, ಈ ಕಾಯಿಲೆ ಇರುವ ಜಾಗಕ್ಕೆ ತೆರಳಿದಾಗ ಪತಿಯೊಂದಿಗೆ ಸಂಭೋಗ ನಡೆಸುವ ಕ್ರಿಯೆ ನಡೆಸಬಾರದು. ಮಳೆಗಾಲದಲ್ಲಿ ಗರ್ಭಧರಿಸುವುದು ಒಳ್ಳೆಯದಲ್ಲ.

ಸರ್ಕಾರ ಎಚ್ಚರಿಕೆ ವಹಿಸಲಿ:
ವಿಪರೀತ ಸೊಳ್ಳೆಗಳಿರುವ ಪ್ರದೇಶ, ಪಾರ್ಕ್ ನಂತಹ ಜಾಗದಲ್ಲಿ ಸರ್ಕಾರವು ಸೊಳ್ಳೆ ನಿವಾರಕ ಔಷಧಿ ಸಿಂಪಡಣೆ ಮಾಡುವತ್ತ ಹೆಚ್ಚು ಗಮನಹರಿಸಬೇಕು. ಎಲ್ಲಾ ಪ್ರದೇಶಗಳಿಗೆ ಆರೋಗ್ಯ ಕಾರ್ಯಕರ್ತರನ್ನು ಕಳುಹಿಸಿ ಗರ್ಭಿಣಿಯ ಆರೋಗ್ಯದ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಜೊತೆಗೆ, ಈ ಅವಧಿಯಲ್ಲಿ ಗರ್ಭಧಾರಣೆ ನಿಲ್ಲಿಸುವ ಬಗ್ಗೆ ಜಾಗೃತಿ ಮೂಡಿಸಬೇಕು.

-ಡಾ. ಗಾಯತ್ರಿ ಡಿ. ಕಾಮತ್, ಹಿರಿಯ ಸಲಹೆಗಾರ್ತಿ, ಪ್ರಸೂತಿ ಮತ್ತು ಸ್ತ್ರೀ ರೋಗ ಶಾಸ್ತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.