ADVERTISEMENT

ಮಾನನಷ್ಟ ಮೊಕದ್ದಮೆ: ಉದ್ಧವ್‌, ಆದಿತ್ಯ, ರಾವುತ್‌ಗೆ ಸಮನ್ಸ್‌

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 11:46 IST
Last Updated 28 ಮಾರ್ಚ್ 2023, 11:46 IST
   

ನವದೆಹಲಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ಅವರ ಮಗ ಆದಿತ್ಯ ಠಾಕ್ರೆ ಮತ್ತು ರಾಜ್ಯಸಭೆ ಸಂಸದ ಸಂಜಯ್‌ ರಾವುತ್‌ ಅವರಿಗೆ ಮಾನನಷ್ಟ ಮೊಕದ್ದಮೆಯೊಂದರಲ್ಲಿ ದೆಹಲಿ ಹೈಕೋರ್ಟ್‌ ಮಂಗಳವಾರ ಸಮನ್ಸ್‌ ನೀಡಿದೆ.

ತಮ್ಮ ಮತ್ತು ಏಕನಾಥ ಶಿಂದೆ ಅವರ ನೇತೃತ್ವದ ಬಣದ ವಿರುದ್ಧ ಸುಳ್ಳು, ಭ್ರಷ್ಟಾಚಾರ ಆರೋಪಗಳನ್ನು ಈ ಮೂವರು ಮಾಡಿದ್ದಾರೆ ಎಂದು ಆರೋಪಿಸಿ ಶಿವಸೇನಾ ಸಂಸದ ರಾಹುಲ್‌ ರಮೇಶ್‌ ಶೇವಾಲೆ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ರಾಹುಲ್‌ ಅವರ ಅರ್ಜಿ ಸ್ವೀಕರಿಸಿದ ನ್ಯಾಯಮೂರ್ತಿ ಪ್ರತೀಕ್‌ ಜಲನ್‌ ಅವರು ಸಮನ್ಸ್‌ ನೀಡಿದ್ದಾರೆ. ಜೊತೆಗೆ, ಮಾನಹಾನಿಕರ ಎನ್ನಲಾದ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ 30 ದಿನಗಳಲ್ಲಿ ಲಿಖಿತ ಪ್ರತಿಕ್ರಿಯೆ ನೀಡುವಂತೆ ಅವರು ಗೂಗಲ್‌, ಟ್ವಿಟರ್‌, ಉದ್ಧವ್‌, ಆದಿತ್ಯ ಮತ್ತು ರಾವುತ್‌ ಅವರಿಗೆ ಹೇಳಿದ್ದಾರೆ.

ADVERTISEMENT

ಈ ಅರ್ಜಿಯ ಮುಂದಿನ ವಿಚಾರಣೆಯನ್ನು ಹೈಕೋರ್ಟ್ ಏಪ್ರಿಲ್‌ 17ಕ್ಕೆ ನಿಗದಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.