ADVERTISEMENT

ಟೀಮ್ ಇಂಡಿಯಾ ಕೋಚ್ ರೇಸ್‌ನಲ್ಲಿ ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್

ಪಿಟಿಐ
Published 18 ಸೆಪ್ಟೆಂಬರ್ 2021, 1:59 IST
Last Updated 18 ಸೆಪ್ಟೆಂಬರ್ 2021, 1:59 IST
ಅನಿಲ್ ಕುಂಬ್ಳೆ ಹಾಗೂ ವಿವಿಎಸ್ ಲಕ್ಷ್ಮಣ್
ಅನಿಲ್ ಕುಂಬ್ಳೆ ಹಾಗೂ ವಿವಿಎಸ್ ಲಕ್ಷ್ಮಣ್   

ನವದೆಹಲಿ: ಮುಂಬರುವ ಟ್ವೆಂಟಿ-20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾದ ಮುಖ್ಯ ತರಬೇತುದಾರ ರವಿಶಾಸ್ತ್ರಿ ಅವಧಿ ಮುಕ್ತಾಯವಾಗಲಿದೆ. ಇದರಂತೆ ಹೊಸ ಕೋಚ್ ಹುಡುಕಾಟದ ಪ್ರಕ್ರಿಯೆಯನ್ನು ಪ್ರಾರಂಭಿಸಲಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ), ಮಾಜಿ ಆಟಗಾರರಾದ ಅನಿಲ್ ಕುಂಬ್ಳೆ ಹಾಗೂ ವಿವಿಎಸ್ ಲಕ್ಷ್ಮಣ್ ಅವರಲ್ಲಿ ಅರ್ಜಿ ಸಲ್ಲಿಸುವಂತೆ ಮನವಿಸಾಧ್ಯತೆಯಿದೆ ಎಂದು ವರದಿಯಾಗಿದೆ.

2016-17ರ ನಡುವೆ ಒಂದು ವರ್ಷದ ಕಾಲ ಅನಿಲ್ ಕುಂಬ್ಳೆ ಭಾರತ ಕ್ರಿಕೆಟ್ ತಂಡದ ಕೋಚ್ ಹುದ್ದೆ ವಹಿಸಿದ್ದರು. ಆದರೆ ನಾಯಕ ವಿರಾಟ್ ಕೊಹ್ಲಿ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಕೋಚ್ ಸ್ಥಾನವನ್ನು ತೊರೆದಿದ್ದರು.

ಈಗ ಸೌರವ್ ಗಂಗೂಲಿ ಮುಂದಾಳತ್ವದ ಬಿಸಿಸಿಐ, ಮಗದೊಮ್ಮೆ ಅನಿಲ್ ಕುಂಬ್ಳೆ ಅವರತ್ತ ಮುಖ ಮಾಡುವ ಸಾಧ್ಯತೆಯಿದೆ. 2016ರಲ್ಲಿ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಹಾಗೂ ವಿವಿಎಸ್ ಲಕ್ಷ್ಮಣ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿಯು (ಸಿಎಸಿ), ಕುಂಬ್ಳೆ ಅವರನ್ನು ಕೋಚ್ಸ್ಥಾನಕ್ಕೆ ಶಿಫಾರಸು ಮಾಡಿರುವುದನ್ನು ನೆನಪಿಸಿಕೊಳ್ಳಬಹುದಾಗಿದೆ.

2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಎದುರಾದ ಸೋಲಿನ ಬಳಿಕ ಕುಂಬ್ಳೆ ರಾಜೀನಾಮೆ ನೀಡಿದ್ದರು. ಈಗ ಮಗದೊಮ್ಮೆ ಕೋಚ್ ಹುದ್ದೆಗೆ ಮುಂಚೂಣಿಯಲ್ಲಿ ಗುರುತಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಅನಿಲ್ ಕುಂಬ್ಳೆ ನಿರ್ಗಮಿಸಿರುವ ರೀತಿಯಲ್ಲಿ ತಿದುಪಡ್ಡಿಯಾಗಬೇಕಿದೆ. ವಿರಾಟ್ ಕೊಹ್ಲಿ ಒತ್ತಡಕ್ಕೆ ಸಿಒಎ ಮಣಿದಿರುವುದು ಮತ್ತು ಕೋಚ್ ಹುದ್ದೆ ತೊರೆಯುವಂತೆ ಒತ್ತಡ ಹೇರಿರುವುದು ಸರಿಯಾದ ಉದಾಹರಣೆಯಲ್ಲ. ಆದ್ಯಾಗೂ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಕುಂಬ್ಳೆ ಅಥವಾ ಲಕ್ಷ್ಮಣ್ ಸಿದ್ಧರಾಗಿದ್ದಾರೆಯೇ ಎಂಬುದನ್ನು ಅವಲಂಬಿಸಿರುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಏತನ್ಮಧ್ಯೆ ಮುಂಬರುವಟ್ವೆಂಟಿ-20 ವಿಶ್ವಕಪ್ ಬಳಿಕ ಟಿ20 ನಾಯಕತ್ವ ಸ್ಥಾನ ತೊರೆಯುವುದಾಗಿ ವಿರಾಟ್ ಕೊಹ್ಲಿ ಪ್ರಕಟಿಸಿದ್ದಾರೆ. ಇನ್ನೊಂದೆಡೆ ಮುಖ್ಯ ತರಬೇತುದಾರನ ಸ್ಥಾನದಲ್ಲಿ ರವಿಶಾಸ್ತ್ರಿ ಮುಂದುವರಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.