ಅಬುಧಾಬಿ: ‘ಆಟಗಾರರು ಸೋಲಿನಿಂದ ಧೃತಿಗೆಡಬಾರದು. ಮತ್ತೆ ಹೆಚ್ಚಿನ ಹುಮ್ಮಸ್ಸಿನಿಂದ ಮೈದಾನಕ್ಕೆ ಮರಳಬೇಕು’ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಕೆಕೆಆರ್ ವಿರುದ್ಧ ಪಂದ್ಯ ಮುಗಿದ ಬಳಿಕ ತಂಡದ ಡ್ರೆಸ್ಸಿಂಗ್ ರೂಮ್ನಲ್ಲಿ ಸಹ ಆಟಗಾರರನ್ನು ಉದ್ದೇಶಿಸಿ ಕೊಹ್ಲಿ ಮಾತನಾಡಿರುವ ವಿಡಿಯೊವನ್ನು ಆರ್ಸಿಬಿ ತನ್ನ ಟ್ವಿಟರ್ ಖಾತೆಯನ್ನು ಹಂಚಿಕೊಂಡಿದೆ.
ದುಬೈನಲ್ಲಿ ಸೋಮವಾರ ಕೆಕೆಆರ್ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಆರ್ಸಿಬಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರಂತೆ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 19 ಓವರ್ಗಳಲ್ಲಿ ಕೇವಲ 92 ರನ್ ಗಳಿಸಿತ್ತು. ಈ ಸಾಧಾರಣ ಮೊತ್ತ ಬೆನ್ನತಿದ್ದ ಕೆಕೆಆರ್ 10 ಓವರ್ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತ್ತು.
ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ 200 ಪಂದ್ಯಗಳ ಮೈಲಿಗಲ್ಲು ತಲುಪಿದ್ದಾರೆ. ಆದರೆ, ಕೆಕೆಆರ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ ಐದು ರನ್ ಗಳಿಸಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದಾರೆ.
ಕೆಕೆಆರ್ ಪರ ವರುಣ್ ಚಕ್ರವರ್ತಿ 3, ಆ್ಯಂಡ್ರೆ ರಸೆಲ್ 3, ಲಾಕಿ ಫರ್ಗ್ಯುಸನ್ 2, ಪ್ರಸಿದ್ಧ ಕೃಷ್ಣ 1 ವಿಕೆಟ್ ಪಡೆದು ಮಿಂಚಿದ್ದರು.
ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಐಪಿಎಲ್ ಸರಣಿ ಪುನರಾರಂಭಗೊಂಡಿದ್ದು, ದ್ವಿತೀಯಾರ್ಧದ ತಮ್ಮ ಮೊದಲ ಪಂದ್ಯದಲ್ಲೇ ಕೊಹ್ಲಿ ಪಡೆ ಮುಗ್ಗರಿಸಿರುವುದು ಅಭಿಮಾನಿಗಳನ್ನು ನಿರಾಸೆ ಮೂಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.