ADVERTISEMENT

ಗೀತಾ ನಾಗಭೂಷಣ ನಿಧನ: ಮಧ್ಯಾಹ್ನ 12ರವರೆಗೆ ಅಂತಿಮ ದರ್ಶನ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 3:07 IST
Last Updated 29 ಜೂನ್ 2020, 3:07 IST
ಲೇಖಕಿ ಡಾ.ಗೀತಾ ನಾಗಭೂಷಣ
ಲೇಖಕಿ ಡಾ.ಗೀತಾ ನಾಗಭೂಷಣ    

ಕಲಬುರ್ಗಿ: ಭಾನುವಾರ ರಾತ್ರಿ ‌ನಿಧನರಾದ ಹಿರಿಯ ಲೇಖಕಿ ಡಾ.ಗೀತಾ ನಾಗಭೂಷಣ (78) ಅವರ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಮಧ್ಯಾಹ್ನ 12ರವರೆಗೆ ಅವರ ಸ್ವಸ್ತಿಕ್ ನಗರದ‌ ಮನೆಯಲ್ಲಿ ‌ಪಡೆಯಬಹುದು.

ನಂತರ ಕಲಬುರ್ಗಿ ಹೊರವಲಯದ ‌ಸಾವಳಗಿ-ಪಟ್ಟಣ ಕ್ರಾಸ್ ಬಳಿಯ ಅವರ ಹೊಲದಲ್ಲಿ‌ ಅಂತ್ಯಕ್ರಿಯೆ ‌ನೆರವೇರಲಿದೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ, ಗದಗ ನಗರದಲ್ಲಿ ನಡೆದಿದ್ದ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ‌ಸಮ್ಮೇಳನದ ಅಧ್ಯಕ್ಷೆಯಾಗಿದ್ದ ಗೀತಾ ನಾಗಭೂಷಣ ಅವರು ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.

ADVERTISEMENT

1942ರ ಮಾರ್ಚ್ 25ರಂದು ಜನಿಸಿದ ಅವರು ಎಂ.ಎ. ಪದವಿ ಗಳಿಸಿದ ನಂತರ ನಗರದ ಶ್ರೀ ನಗರೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ, ಪ್ರಾಚಾರ್ಯೆಯಾಗಿ 30 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದರು.

‘ಬದುಕು’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಇವರು ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ (2002) ಕರ್ನಾಟಕ ರಾಜ್ಯ ಪ್ರಶಸ್ತಿ (1998), ನಾಡೋಜ ಪ್ರಶಸ್ತಿ (2004), ಗುಲಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಹೆಗ್ಗಳಿಕೆ ಇವರದು.

ಹಸಿಮಾಂಸ ಮತ್ತು ಹದ್ದುಗಳು (ಕಾದಂಬರಿ), ಬದುಕು (ಕಾದಂಬರಿ), ಅವ್ವ ಮತ್ತು ಇತರ ಕಥೆಗಳು (ಕಥಾಸಂಗ್ರಹ), ಸಪ್ತವರ್ಣದ ಹಾಡು, ದುರಗಮುರಗಿಯವರ ಸಂಸ್ಕೃತಿ (ಸಂಶೋಧನೆ), ಜ್ವಲಂತ (ಕಥಾಸಂಗ್ರಹ), ಜೋಗಿಣಿ (ನಾಟಕ), ನನ್ನ ಚೆಲುವು ನಿನ್ನ ಒಲವು ಇತರ ಕೃತಿಗಳನ್ನು ರಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.