ದೀಪಾವಳಿ ಹಬ್ಬದ ಅಂಗವಾಗಿ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ವಿಧ ವಿಧವಾದ ದೀಪಗಳು (ಹಣತೆಗಳು), ಆಕಾಶ ಬುಟ್ಟಿಗಳು ಸೇರಿದಂತೆ ಇತರೆ ಆಲಂಕಾರಿಕ ವಸ್ತುಗಳು ಕಂಗೊಳಿಸುತ್ತಿವೆ.
ಕೋವಿಡ್ ಕಾರಣದಿಂದ ಎರಡು ವರ್ಷಗಳಿಂದ ಮಂಕಾಗಿದ್ದ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಇನ್ನೂ ನಾಲ್ಕು ದಿನಗಳು ಬಾಕಿ ಇರುವಾಗಲೇ ಸಿದ್ಧತೆಗಳು ಜೋರಾಗಿವೆ. ಮನೆಯಲ್ಲಿ ಆಚರಣೆಗೆ ಸಿದ್ಧತೆ ಶುರುವಾಗಿದೆ. ದೀಪಾವಳಿ ಹಬ್ಬಕ್ಕೆ ಹಣತೆಗಳು ಬೇಕೇ ಬೇಕು. ಹಣತೆಗಳ ಬೆಳಕು ಮನೆಯಲ್ಲಿ ಇಲ್ಲದೇ ಇದ್ದಲ್ಲಿ ಹಬ್ಬವೇ ಅಪೂರ್ಣ ಎನ್ನುವ ಭಾವನೆ ಜನರದು.
ದೀಪಗಳ ಹಬ್ಬ ದೀಪಾವಳಿ ಆಚರಣೆಗೆ ನಗರದ ಜನತೆ ಸಿದ್ಧತೆ ನಡೆಸಿದ್ದು, ಇದೇ 24ರಿಂದ 26ರ ವರೆಗೆ ನಡೆಯಲಿರುವ ದೀಪಾವಳಿ ಸಂಭ್ರಮ ನಗರದಲ್ಲಿ ಮನೆ ಮಾಡಲಿದೆ. ಹಣತೆ ವ್ಯಾಪಾರಸ್ಥರು, ಕುಂಬಾರರು ಭಾರಿ ಮಾರಾಟದ ನಿರೀಕ್ಷೆಯಲ್ಲಿದ್ದರು. ಆದರೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಸ್ತುಗಳ ಮಾರಾಟಕ್ಕೆ ಕಡಿವಾಣ ಬಿದ್ದಂತಾಗಿದೆ.
‘ಮಾರುಕಟ್ಟೆಯಲ್ಲಿ ಪರಿಸರಸ್ನೇಹಿ ಹಣತೆಗಳಿಗೆ ಬೇಡಿಕೆಯಿದ್ದು, ತಮಿಳುನಾಡಿನ ಅಚ್ಚು ಹಾಕಿದ ಆಲಂಕಾರಿಕ ವೈವಿಧ್ಯಮಯ ಹಣತೆಗಳು ಗ್ರಾಹಕರನ್ನು ಸೆಳೆಯುತ್ತಿವೆ. ಪ್ರತಿದಿನ 800 ದೀಪಗಳನ್ನು ಸಿದ್ಧಪಡಿಸುತ್ತೇನೆ. ನಿತ್ಯ 5–6 ಜನ ಗ್ರಾಹಕರು ಬರುತ್ತಿದ್ದು, ವಾರಾಂತ್ಯದಲ್ಲಿ ವಹಿವಾಟು ಹೆಚ್ಚಾಗಬಹುದು. ಕೋವಿಡ್ ಕಾರಣದಿಂದ ಮಂಕಾಗಿದ್ದ ಮಾರುಕಟ್ಟೆಗೆ ಈಗ ಗ್ರಾಹಕರು ಉತ್ಸಾಹದಿಂದ ಬರುತ್ತಿದ್ದಾರೆ’ ಎಂದು ಪಾಟರಿಟೌನ್ನ ಕುಂಬಾರ ರಮೇಶ್ ಮಾಹಿತಿ ನೀಡಿದರು.
ದೀಪಾವಳಿ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ತರಹೇವಾರಿ ಬಣ್ಣ ಬಣ್ಣದ ಹಣತೆಗಳು ಗ್ರಾಹಕರ ಕೈಗೆಟುಕುವ ದರದಲ್ಲಿ ಸಿಗುತ್ತಿವೆ. ವಿಶೇಷವಾಗಿ ಮಣ್ಣಿನಿಂದ ಮಾಡಿದ ಪರಿಸರಸ್ನೇಹಿ ಪಣತಿಗಳಿಗೆ ಬೇಡಿಕೆಗೆ ಹೆಚ್ಚಿದೆ. ಗ್ರಾಹಕರು ತಮ್ಮ ಅಗತ್ಯಕ್ಕೆ ಎಷ್ಟು ಬೇಕೊ ಅಷ್ಟು ಹಣತೆಗಳನ್ನು ಖರೀದಿ ಮಾಡಿ ಹಬ್ಬಕ್ಕಾಗಿ ಸಂಗ್ರಹ ಮಾಡುತ್ತಿದ್ದಾರೆ.
ಚಿತ್ರಗಳು: ಎಚ್.ಜಿ.ಪ್ರಶಾಂತ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.