ಕಾಡಿನ ಭಾಗದಲ್ಲಿ ಸಿಗುವ ಗಿಡ, ಬಳ್ಳಿಗಳು ಈ ಹಿಂದೆ ಸುತ್ತಲಿನ ಭಾಗದ ಜನರ ಬದುಕಿನ ಭಾಗವೇ ಆಗಿರುತ್ತಿದ್ದವು. ಒಂದಲ್ಲ ಒಂದು ಕಾರಣಕ್ಕೆ ಅವುಗಳನ್ನು ಉಪಯೋಗಿಸಿಕೊಳ್ಳುತ್ತಿದ್ದರು. ಅವುಗಳಿಂದ ಗೃಹಪಯೋಗಿ ವಸ್ತುಗಳನ್ನು ತಯಾರಿಸುತ್ತಿದ್ದರು. ಈಗ ಇಂಥ ಅನೇಕ ವಸ್ತುಗಳು ಕಣ್ಮರೆಯಾಗಿವೆ. ಅದೇ ಸಾಲಿಗೆ ಸೇರುವ ಉತ್ಪನ್ನ ಕೂಗ್ಲು ಬಳ್ಳಿ ಪೆಟ್ಟಿಗೆಗಳು. ಪ್ಲಾಸ್ಟಿಕ್, ರಬ್ಬರ್ ಬುಟ್ಟಿಗಳು ಬಂದ ಮೇಲೆ ಕಬ್ಬಿಣದ ಕಪಾಟಿನ ಬಳಕೆಯ ಬಳಿಕ ಈ ಬುಟ್ಟಿಗಳು ಕಾಣಸಿಗುವುದು ಅಪರೂಪ.
ಇಂದಿನ ಪೀಳಿಗೆಗೆ ಈ ಪೆಟ್ಟಿಗೆಗಳನ್ನು ತೋರಿಸಲೆಂದು ನೂರು ವರ್ಷ ಹಳೆಯದಾದ ಪೆಟ್ಟಿಗೆಗಳನ್ನು ಕುಮಟಾ ತಾಲ್ಲೂಕಿನ ಕಲ್ಲಬ್ಬೆಯ ಗಜಾನನ ಹೆಗಡೆ ಗಾಳಿಮನೆಯವರು ಸಂಗ್ರಹಿಸಿಟ್ಟಿದ್ದಾರೆ. ‘ನಮ್ಮ ತಾತ ದಿವಂಗತ ಗಣೇಶ ಹೆಗಡೆಯವರು ತಯಾರಿಸಿದ್ದು. ಇಂದು ಕೂಗ್ಲು ಬಳ್ಳಿಯಿಂದ ಪೆಟ್ಟಿಗೆ ಮಾಡುವವರು ಇಲ್ಲ ಹಾಗೂ ಈ ಪೆಟ್ಟಿಗೆಗಳು ಕಾಣಸಿಗುವುದು ಕೂಡ ಕಷ್ಟ’ ಎನ್ನುತ್ತಾರೆ ಗಜಾನನ ಹೆಗಡೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವುದಾದರು ಕಾಡು ಬಳ್ಳಿ ಗುಂಟೆಗಟ್ಟಲೆ ಜಾಗದಲ್ಲಿ ಹಬ್ಬಿಕೊಂಡರೆ ‘ಕೂಗ್ಲು ಬಳ್ಳಿ ಹಬ್ಬ್ಕಂಡಂಗೆ ಹಬ್ಬ್ಕಂಡಿದೆ’ ಎಂದು ಹೇಳುವ ರೂಢಿ ಇದೆ. ಇಲ್ಲಿನ ಕಾಡಿನಲ್ಲಿ ಸಾಮಾನ್ಯವಾಗಿ ಕಾಣಸಿಗುವ ಕೂಗ್ಲು ಬಳ್ಳಿ ಬದುಕಿನಲ್ಲಿಯೂ ಹಾಸುಹೊಕ್ಕಾಗಿತ್ತು. ಒಂದು ಕಾಲದಲ್ಲಿ ಸೊಗೆಮನೆ, ಹುಲ್ಲಿನ ಮನೆ, ತಾಳೆ ಎಲೆ ಮನೆಗಳ ನಿರ್ಮಾಣಕ್ಕೆ ಈ ಬಳ್ಳಿ ಅಗತ್ಯವಾಗಿತ್ತು. ಈ ಬಳ್ಳಿಯಿಂದ ತಯಾರಿಸಿದ ಬುಟ್ಟಿ ಎಲ್ಲರ ಮನೆಯ ಅಡಿಕೆ ತೋಟದಲ್ಲಿಯೂ ಕಾಣಸಿಗುತ್ತಿತ್ತು.
ಹಿಂದಿನ ಕಾಲದಲ್ಲಿ ನೈಪುಣ್ಯತೆ ಪಡೆದ ಕುಶಲ ಕರ್ಮಿಗಳು ಈ ಕೂಗ್ಲು ಬಳ್ಳಿಯಿಂದ ಆಕರ್ಷಕ ಪೆಟ್ಟಿಗೆ ಮಾಡುತ್ತಿದ್ದರು. ತಮ್ಮ ಅನುಕೂಲತೆಗೆ ಹಾಗೂ ಉಪಯೋಗಕ್ಕೆ ತಕ್ಕ ಹಾಗೆ ಪೆಟ್ಟಿಗೆಗಳನ್ನು ತಯಾರಿಸಿ, ಮೌಲ್ಯಯುತವಾದ ಸಾಮಾನುಗಳನ್ನು ಇಡುವ ಪೆಟ್ಟಿಗೆಗೆ ಬೀಗ ಹಾಕುವ ವ್ಯವಸ್ಥೆ ಕೂಡ ಮಾಡಿಡುತ್ತಿದ್ದರು. ದೊಡ್ಡ ಆಕಾರದ ಬೀಗ ಇರುವ ಕೂಗ್ಲು ಬಳ್ಳಿಯ ಪೆಟ್ಟಿಗೆಯನ್ನು ತವರು ಮನೆಯಲ್ಲಿ ಪ್ರಥಮ ಹೆರಿಗೆಯಾಗಿ ಮಗುವನ್ನು ಗಂಡನ ಮನೆಗೆ ಒಯ್ಯುವಾಗ ಉಡುಗೊರೆಯಾಗಿ ನೀಡುವ ಸಂಪ್ರದಾಯ ಕೆಲವು ಸಮಾಜದಲ್ಲಿ ರೂಢಿಯಲ್ಲಿ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.