ಬಂಧುಲೂನ
ಲೂನ(ನಾ).ಕತ್ತರಿಸಿದುದು; ತುಂಡುಮಾಡಿದ್ದು.
ಕುವೆಂಪು ಅವರು ತನ್ನ ತಂದೆ ತಾಯಿ ತೀರಿಹೋಗಿ, ಇಬ್ಬರು ತಂಗಿಯರು ಮರಣಹೊಂದಿ ತಾವೊಬ್ಬರೆ ಆಗಿ ಉಳಿದಿರುವುದನ್ನು ನೆನೆದು ನೊಂದಾಗ ಬರೆದ ಕವನ ‘ಬಂಧುಲೂನ’. ಅವರು ತಾನು ಏಕಾಂಗಿಯಾಗಿ ದುಃಖದೀನ, ಶೋಕಲೀನ, ಹೃದಯಹೀನ, ಬಂಧುಲೂನ ಆಗಿರುವುದಕ್ಕೆ ವ್ಯಥೆಪಟ್ಟಿದ್ದಾರೆ. ತನ್ನನ್ನು ಕರುಣೆಯಿಂದ ಆಶೀರ್ವದಿಸಿ ಎಂದು ಕ್ರಮವಾಗಿ ತಂದೆ ದಾಶರಥಿ, ತಾಯಿ ಮೈಥಿಲಿ, ವೀರ ಮಾರುತಿ ಮತ್ತು ಧೀರ ಸೌಮಿತ್ರಿಯನ್ನು ಪ್ರಾರ್ಥಿಸಿದ್ದಾರೆ. ಹೀಗೆ ಪ್ರಾರ್ಥಿಸುವಾಗ ವಿಶಿಷ್ಟ ಪದ ‘ಬಂಧುಲೂನ’ ಸೃಷ್ಟಿಸಿ ಬಂಧುಗಳಿಂದ ತುಂಡರಿಸಿದವನು ತಾನು ಎಂದು ವ್ಯಥೆಪಟ್ಟಿದ್ದಾರೆ.
ಶ್ರೀತಂತ್ರ
ಕುವೆಂಪು ಅವರು ದೇಶದ ಗಣರಾಜ್ಯೋತ್ಸವದ ಘೋಷಣೆ (26-01-1950) ಯಂದು ರಚಿಸಿದ ಕವನ –‘ಶ್ರೀಸಾಮಾನ್ಯ’ರ ದೀಕ್ಷಾಗೀತೆ. ಅದರಲ್ಲಿ ಅವರು ಗಣತಂತ್ರ ವ್ಯವಸ್ಥೆಯ ಸರಾಗ ನಡೆಗೆ ಮಹಾತ್ಮಗಾಂಧಿಯವರ ‘ಸರ್ವೋದಯವೇ ಸ್ವಾತಂತ್ರ್ಯದ ಶ್ರೀತಂತ್ರ’ ಎಂದು ಮಂತ್ರದ ರೀತಿ ಘೋಷಿಸಿದ್ದಾರೆ. ಸ್ವತಂತ್ರ ಗಣರಾಜ್ಯದ ಆಳ್ವಿಕೆಯ ಶ್ರೀ ಲಕ್ಷಣವಾದ ಕೀರ್ತಿ, ಪ್ರಭೆ, ಸಂಪದಭಿವೃದ್ಧಿಯನ್ನು ಆಗು ಮಾಡುವ ‘ತಂತ್ರ’ ಅರ್ಥಾತ್ ಪ್ರಯೋಗ ವಿಧಾನ, ಆಡಳಿತ ಸೂಕ್ಷ್ಮತೆ ಎಂಬ ಅರ್ಥವನ್ನು ‘ಶ್ರೀತಂತ್ರ’ ಹೊಂದಿದೆ. ಈ ಎಲ್ಲ ಅರ್ಥ ಒಳಗೊಂಡಂತೆ ಕುವೆಂಪು ಈ ಪದ ಪ್ರಯೋಗಿಸಿದ್ದಾರೆ.
‘ಸರ್ವೋದಯ ಯುಗಮಂತ್ರ!
ಸರ್ವೋದಯವೇ ಸ್ವಾತಂತ್ರ್ಯದ ಶ್ರೀತಂತ್ರ!’
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.