ADVERTISEMENT

ನಿಡಸೋಸಿ ಬಿಲ್ವವನದಲ್ಲೊಂದು ಸುತ್ತು...

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 23:45 IST
Last Updated 14 ಫೆಬ್ರುವರಿ 2026, 23:45 IST
<div class="paragraphs"><p>ವನ ವೀಕ್ಷಣೆಯಲ್ಲಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ</p></div>

ವನ ವೀಕ್ಷಣೆಯಲ್ಲಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ

   

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ನಿಡಸೋಸಿಯಲ್ಲಿ ಮೂರು ಶತಮಾನದ ಇತಿಹಾಸ ಹೊಂದಿರುವ ಗ್ರಾಮದ ದುರದುಂಡೀಶ್ವರ ಸಿದ್ಧಸಂಸ್ಥಾನ ಮಠಕ್ಕೆ ಸೇರಿದ ‘ಬಿಲ್ವಾಶ್ರಮ’ ಅಪರೂಪದ ಬಿಲ್ವಪತ್ರೆಯ ವನವಾಗಿದೆ.

ಬಿಲ್ವಪತ್ರೆ ವನ ಬೆಳೆಸಿದ ಶ್ರೇಯಸ್ಸು ನಿಡಸೋಸಿಯ ಸಿದ್ಧಸಂಸ್ಥಾನ ಮಠದ ದ್ವಿತೀಯ ಶಿವಲಿಂಗೇಶ್ವರ ಸ್ವಾಮೀಜಿಗೆ ಸಲ್ಲುತ್ತದೆ. ಮೂರು ಎಕರೆಯಲ್ಲಿ ಹರಡಿಕೊಂಡಿರುವ ಬಿಲ್ವಾಶ್ರಮದ ಪತ್ರಿಬನದಲ್ಲಿ 250ಕ್ಕೂ ಹೆಚ್ಚು ಬಿಲ್ವಪತ್ರೆ ಮರಗಳು ಇವೆ!

ADVERTISEMENT

ಈ ಜಾಗದಲ್ಲಿ ಸಸಿ ನೆಟ್ಟಿದ್ದು ದ್ವಿತೀಯ ಶಿವಲಿಂಗೇಶ್ವರ ಸ್ವಾಮೀಜಿ. ಆದರೆ ಇವುಗಳನ್ನು ಪೋಷಣೆ ಮಾಡಿ ವನದ ರೂಪ ನೀಡಿದ್ದು, ಮೂರನೇ ನಿಜಲಿಂಗೇಶ್ವರ ಸ್ವಾಮೀಜಿ ಹಾಗೂ ನಾಲ್ಕನೇ ಶಿವಲಿಂಗೇಶ್ವರ ಸ್ವಾಮೀಜಿ. ಇವರಿಗೆ ಮರಗಿಡಗಳೆಂದರೆ ಬಲುಪ್ರೀತಿ. ಧರ್ಮ ಪ್ರಸಾರ ಕಾರ್ಯದೊಂದಿಗೆ ಪರಿಸರ ರಕ್ಷಣೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದವರಾಗಿದ್ದರು. ಹೀಗಾಗಿ ಪತ್ರಿಬನ ಸೇರಿದಂತೆ ಮಠಕ್ಕೆ ಸೇರಿದ ಜಮೀನಿನಲ್ಲಿ ವಿವಿಧ ಜಾತಿಯ ಮರಗಿಡಗಳನ್ನು ಪೋಷಿಸಿ ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ವನದ ಪ್ರವೇಶ ದ್ವಾರ

‘ಇದರ ಬೇರು, ತೊಗಡೆ, ಕಾಂಡ, ಕಾಯಿ, ಹಣ್ಣು, ಬೀಜ, ಎಲೆ ಒಂದಿಲ್ಲವೊಂದು ರೋಗ ನಿವಾರಣೆ ಮಾಡುವ ಔಷಧಿ ಗುಣ ಹೊಂದಿವೆ. ಅದರಲ್ಲೂ ಬಿಲ್ವದ ಎಲೆಗಳು ಪತ್ರೆಯಾಗಿ ಶಿವನ ಪೂಜೆಯಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿವೆ. ಮಠ ಮಂದಿರಗಳಲ್ಲಿ ಪೂಜೆಗೆ ಬಿಲ್ವಪತ್ರೆ ಬೇಕೇಬೇಕು. ಹಾಗೇನೇ ಔಷಧಿಯಾಗಿ ಬಳಕೆ ಮಾಡಲು ಅನುಕೂಲ ಎಂಬ ಉದ್ದೇಶದಿಂದ ಬಿಲ್ವಪತ್ರೆ ವನ ಮಾಡಲಾಗಿದೆ’ ಎಂದು ಬಿಲ್ವಾಶ್ರಮದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಬಸವರಾಜ ಕೋಥಳಿ ಹೇಳುತ್ತಾರೆ.

ಗ್ರಾಮದಿಂದ ಮೂರು ಕಿಲೋಮೀಟರ್‌ ದೂರದಲ್ಲಿರುವ ಪತ್ರಿಬನದ ಉಸ್ತುವಾರಿಯನ್ನು ಶಿವಲಿಂಗ ಪದ್ಮಣ್ಣವರ, ಪರಪ್ಪ ವಾಣಿ, ಗಂಗಾಧರ ಕುಠೋಳಿ, ಕಲ್ಲಪ್ಪ ಸೂಜಿ, ವೀರಭದ್ರ ಬಾಡ, ರಾಜು ಪಿಂಪಳಗಾವಿ ಸೇರಿದಂತೆ ಹದಿನೈದಕ್ಕೂ ಹೆಚ್ಚು ಸ್ಥಳೀಯರು ತಾವೇ ಸೇರಿಕೊಂಡು ‘ಪತ್ರಿಬನ ನಿರ್ವಹಣಾ ಸಮಿತಿ’ ರಚಿಸಿಕೊಂಡಿದ್ದಾರೆ. ನಿಡಸೋಸಿ ಸಿದ್ಧಸಂಸ್ಥಾನಮಠದ ಹತ್ತನೇ ಪೀಠಾಧಿಪತಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಲಹೆ ಸೂಚನೆಯನ್ವಯ ಸಮಿತಿ ಕಾರ್ಯನಿರ್ವಹಿಸುತ್ತಿದೆ.

ಪತ್ರಿಬನದಲ್ಲಿ ಕಳೆ ತೆಗೆಯುವುದು, ನೀರುಣಿಸುವುದು, ಮರಗಿಡಗಳನ್ನು ನೆಟ್ಟು ಬೆಳೆಸುವುದು ಸೇರಿದಂತೆ ವಿವಿಧ ಹೊಣೆಗಾರಿಕೆಯನ್ನು ಪತ್ರಿಬನ ನಿರ್ವಹಣಾ ಸಮಿತಿ ಯಾವುದೇ ಫಲಾಪೇಕ್ಷೆ ಇಲ್ಲದೇ ಸ್ವಯಂಸ್ಪೂರ್ತಿಯಾಗಿ ಮಾಡುತ್ತಿದೆ. ಸ್ಥಳೀಯ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು, ವಿವಿಧ ಸಂಘ ಸಂಸ್ಥೆಗಳು ಪತ್ರಿಬನದ ಶ್ರೇಯೋಭಿವೃದ್ಧಿಗೆ ಆಗಾಗ ಶ್ರಮದಾನ ಮಾಡುತ್ತಾ ಬಂದಿವೆ. ಸಾರ್ವಜನಿಕರ ಸಹಭಾಗಿತ್ವದಿಂದ 150ಕ್ಕೂ ಹೆಚ್ಚು ವರ್ಷಗಳಿಂದ ವನ ನಳನಳಿಸುತ್ತಿದೆ. ಪತ್ರಿಬನದ ಆವರಣದಲ್ಲಿ ನಾಲ್ಕೈದು ಶತಮಾನ ಕಂಡ ಬೃಹದಾಕಾರದ ಹುಣಸೆಮರವಿದ್ದು, ಇದು ಕೂಡ ಇಲ್ಲಿಗೆ ಬರುವವರ ಆಕರ್ಷಣೆಯ ಕೇಂದ್ರವಾಗಿದೆ.

ಪತ್ರಿಬನ ಮಠಕ್ಕೆ ಸೇರಿದ್ದಾಗಿದ್ದರೂ ಸ್ಥಳೀಯರು ಸ್ವಯಂಸ್ಪೂರ್ತಿಯಿಂದ ಸಂರಕ್ಷಣೆ ಮಾಡುವಲ್ಲಿ ತಮ್ಮದೇ ಆದ ಪಾತ್ರ ಹೊಂದಿದ್ದಾರೆ. ಎರಡು ಕೊಳವೆಬಾವಿಗಳಿದ್ದು, ಆಗಾಗ ಸ್ಥಳೀಯರು ಹೊಂದಾಣಿಕೆಯ ಮೇರೆಗೆ ಮರಗಿಡಗಳಿಗೆ ನೀರುಣಿಸುತ್ತಾರೆ. ಪ್ರಾಣಿ ಪಕ್ಷಿ ಸಂಕುಲಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಪತ್ರಿಬನದ ಆವರಣದಲ್ಲಿಯೇ ನಿಡಸೋಸಿ ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದ ನಾಲ್ಕನೇ ಶಿವಲಿಂಗೇಶ್ವರ ಸ್ವಾಮೀಜಿಯಿಂದ ಒಂಬತ್ತನೇ ನಿಜಲಿಂಗೇಶ್ವರ ಸ್ವಾಮೀಜಿ ಸೇರಿದಂತೆ ಏಳು ಜನ ಲಿಂಗೈಕ್ಯ ಸ್ವಾಮೀಜಿಗಳ ಸಮಾಧಿಗಳು ಇವೆ. ಹೀಗಾಗಿ ಇಲ್ಲಿಗೆ ಬರುವ ಸಹಸ್ರಾರು ಭಕ್ತರಿಗೆ ಪತ್ರಿಬನ ಪೂಜನೀಯ ಸ್ಥಳವಾಗಿದೆ. ಪ್ರತಿವರ್ಷ ಶ್ರಾವಣ ಹಾಗೂ ಭಾದ್ರಪದ ಮಾಸದಲ್ಲಿ ಭಕ್ತರು ಬಂದು ಇಲ್ಲಿ ವಿಶ್ರಮಿಸಿ ಹೋಗುತ್ತಾರೆ. ಸಂಕೇಶ್ವರ-ಜೇವರ್ಗಿ ರಾಜ್ಯ ಹೆದ್ದಾರಿಯಿಂದ ಒಂದು ಕಿಲೋಮೀಟರ್‌ ಅಂತರದಲ್ಲಿರುವುದರಿಂದ ಬೇಸಿಗೆಯಲ್ಲಿ ಸಾಕಷ್ಟು ಜನ ಇಲ್ಲಿಗೆ ವಿಶ್ರಾಂತಿ ಪಡೆದುಕೊಳ್ಳುತ್ತಾರೆ.

ಬಿಲ್ವ ವನದ ಒಳಗೆ

ಪತ್ರಿಬನದಲ್ಲಿ ನವಿಲು, ಗಿಳಿ, ಗುಬ್ಬಿ, ಮಂಗ ಸೇರಿದಂತೆ ವಿವಿಧ ಪ್ರಾಣಿ ಪಕ್ಷಿಗಳ ವಾಸಸ್ಥಾನವಾಗಿದೆ. ಅದರಲ್ಲೂ ಕಲ್ಲು ಸೇಬು ಎಂದು ಕರೆಯಲ್ಪಡುವ ಬಿಲ್ವಮರದ ಮಾಗಿದ ಹಣ್ಣುಗಳ ತಿರುಳು ಮಂಗಗಳಿಗೆ ಬಹು ಇಷ್ಟ. ಹೀಗಾಗಿ ಈ ಹಣ್ಣಿನ ತಿರುಳು ತೆಗೆದು ತಿನ್ನುವ ಮೂಲಕ ಪತ್ರಿಬನದ ಸುತ್ತಮುತ್ತಲಿನ ಪ್ರದೇಶದಲ್ಲಿ ಮಂಗಗಳು ಬೀಜಪ್ರಸರಣ ಮಾಡುವುದು ಕಂಡು ಬರುತ್ತದೆ.

‘ಪತ್ರಿಮರದ ಎಲೆಯ ತ್ರಿದಳಗಳು ವಾತ, ಪಿತ್ತ ಮತ್ತು ಕಫ ರೋಗದ ಮೂರು ಸಂಕೇತವಾಗಿವೆ. ಹೀಗಾಗಿ ಪ್ರತಿಯೊಂದು ಮನೆ, ಕಚೇರಿ, ಮಠ, ದೇವಾಲಯಗಳಲ್ಲಿ ಇವುಗಳನ್ನು ಬೆಳೆಸುವುದರಿಂದ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣವೂ ಹೆಚ್ಚುತ್ತದೆ’ ಎಂದು ಚಿಕ್ಕೋಡಿಯ ಸಸ್ಯಶಾಸ್ತ್ರಜ್ಞ ರಾಜೇಶ ನಾಯಿಕ ಹೇಳುತ್ತಾರೆ.

‘ಉತ್ತರ ಭಾರತದಲ್ಲಿ ಬಿಲ್ವಪತ್ರೆ ಹಣ್ಣುಗಳಿಂದ ರಸ ತಯಾರಿಸಿ ಸೇವಿಸಲಾಗುತ್ತದೆ. ಬಹುಪಯೋಗಿಯಾಗಿರುವ ಬಿಲ್ವಪತ್ರೆ ಸಸಿಗಳನ್ನು ಮಾಡಿ ವಿತರಿಸುವ ಆಲೋಚನೆ ಹೊಂದಲಾಗಿದೆ. ಇಲ್ಲಿ ಬೆಳೆದ ಬಿಲ್ವಪತ್ರೆ, ಹಣ್ಣು ಮುಂತಾದವುಗಳನ್ನು ಸಾಕಷ್ಟು ಜನರು ತೆಗೆದುಕೊಂಡು ಹೋಗುತ್ತಾರೆ’ ಎಂದು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳುತ್ತಾರೆ.

ಹಸಿರು ಸಿರಿಯಿಂದ ಕಂಗೊಳಿಸುತ್ತಿರುವ ಈ ಸುಂದರ ವನದಲ್ಲಿ ಇನ್ನಷ್ಟು ವನಗಳ ನಿರ್ಮಾಣಕ್ಕೆ ಪ್ರೇರಣೆಯಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.