ADVERTISEMENT

ನಿರ್ಮಲ 'ನಿಶೆ' ಅವರ ಕವನ 'ಸಾತತ್ಯ'

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2025, 23:30 IST
Last Updated 1 ಮಾರ್ಚ್ 2025, 23:30 IST
   

ಬುಟ್ಟಿ ತುಂಬಾ ಹೊತ್ತ ಸೊಪ್ಪು 
ತರಕಾರಿಯನಿಳಿಸಿ ಎದುರಿನವರ ಹಸಿವ 
ಹಿಂಗಿಸಲು ಹಾದಿ ಮಾಡಿಕೊಟ್ಟು
ಮತ್ತೆ ಹೊತ್ತು ನಡೆದ ಮೇಲೂ
ಉಳಿಯುತ್ತವೆ ಎಲೆ, ದಂಟು, ಕಟ್ಟಿನ ಕಸ
ನಸು ಕಮನೀಯತೆ ಆಕೆಯ ನೆನಪಿಗೆ

ಬರೆ ಬರೆದು ಅಳಿಸಿ ಮತ್ತೆ ಬರೆವ ಅಕ್ಷರ
ಅಭ್ಯಾಸದ ದಾರಿಯಲಿ ಕರೆದೊಯ್ಯುವರ 
ಮಾತು, ಉಳಿಯ ಮೊನಚಾಗಿ ಕಲ್ಲ ಪಯಣಕೆ 
ಶಿಲ್ಪವ ಕನಸುತ್ತದೆ ಗುರುತು ಮೂಡಿಸಿ 
ಗುರುವಿನ ಗುಲಾಮನಾಗುವರ ನೆನೆದು

ಹನಿ ಹನಿ ಹಳ್ಳ ಕೊಳ್ಳ ನದಿಯ
ಪಯಣಕೆ ತಡೆಯೊಡ್ಡುವ ಕಲ್ಲು
ನೀರುಂಡುಟ್ಟು ತೇಗಿ ಬದಲಾದ ರೂಪುರೇಷೆ
ಕೊರೆತ ಮಾತ್ರವಲ್ಲ ಸಾತತ್ಯತೆಯ ಗುರುತು
ಕಾಲಕಾಲಕೂ ಪಾಠ ಬೋಧನೆ

ADVERTISEMENT

ನೀ ನಿನ್ನ ನೆನಪು ಎಲ್ಲವು ದೂರ 
ದೂರಕ್ಕೆ ಕಳಿಸಿ ಮನಸು ಖಾಲಿ ಪಾತ್ರೆಯ ಕಲೆ 
ಚಿಗಿತು ಬಲಿತು ಕಂಪ ಸೂಸುವ ಎಲೆ 
ಉದುರುವ ಮುನ್ನ ಚಿಗುರಿಗೆ ಹಾದಿ 
ಹಾಸಿ ಮಣ್ಣ ಸೇರಿದಂತೆ ನಿತ್ಯ ನೂತನ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.