ಬೆಂಗಳೂರು/ಚೆನ್ನೈ: ಬೆಂಗಳೂರು ಮೂಲದ ಓಲಾ ಮತ್ತು ಏಥರ್ ಕಂಪನಿಗಳು ದ್ವಿಚಕ್ರ ವಾಹನ ತಯಾರಿಕಾ ಘಟಕಗಳನ್ನು ತಮಿಳುನಾಡಿನ ಹೊಸೂರಿನಲ್ಲಿ ಆರಂಭಿಸಲಿರುವುದು, ಆ ರಾಜ್ಯ ರೂಪಿಸಿರುವ ವಿದ್ಯುತ್ ಚಾಲಿತ ವಾಹನ ನೀತಿಯತ್ತ ಗಮನ ಹರಿಯುವಂತೆ ಮಾಡಿದೆ. ಈ ಎರಡು ಕಂಪನಿಗಳನ್ನು ತನ್ನತ್ತ ಸೆಳೆಯಲು ತಮಿಳುನಾಡು ಸರ್ಕಾರ, ಕಂಪನಿಗಳ ಅಗತ್ಯಕ್ಕೆ ಸೂಕ್ತವಾದ ಪ್ಯಾಕೇಜ್ಗಳನ್ನು ಕೂಡ ನೀಡಿದೆ.
‘ವಿದ್ಯುತ್ ಚಾಲಿತ (ಇ.ವಿ.) ದ್ವಿಚಕ್ರ ವಾಹನಗಳ ತಯಾರಿಕೆಯಲ್ಲಿ ಕೂಡ ತಮಿಳುನಾಡು ಮುಂಚೂಣಿಗೆ ಬರಬೇಕು ಎಂಬುದು ನಮ್ಮ ಬಯಕೆ. ಆಟೊಮೊಬೈಲ್ ಉದ್ಯಮದಲ್ಲಿ ರಾಜ್ಯವು ಈಗಾಗಲೇ ನಾಯಕತ್ವದ ಸ್ಥಾನದಲ್ಲಿದೆ’ ಎಂದು ಸರ್ಕಾರದ ಮೂಲವೊಂದು ‘ಪ್ರಜಾವಾಣಿ’ಗೆ ತಿಳಿಸಿದೆ.
ಈ ಎರಡು ಕಂಪನಿಗಳು ಕರ್ನಾಟಕ ಸರ್ಕಾರದ ಜೊತೆಯೂ ಮಾತುಕತೆ ನಡೆಸಿದ್ದವು. ಆದರೆ, ಹೊಸೂರು–ಕೃಷ್ಣಗಿರಿ ಪ್ರದೇಶದಲ್ಲಿ ಆಟೊಮೊಬೈಲ್ ಉದ್ಯಮಕ್ಕೆ ಅಗತ್ಯವಿರುವ ಪೂರೈಕೆದಾರರ ನೆಲೆ ಚೆನ್ನಾಗಿರುವುದು, ‘ಭೂಬ್ಯಾಂಕ್’ ನೀತಿಯ ಮೂಲಕ ಜಮೀನು ಲಭ್ಯವಿರುವುದು, ಹಣಕಾಸಿನ ಕೊಡುಗೆಗಳು, ಬೆಂಗಳೂರಿಗೂ ಹತ್ತಿರ ಇರುವುದು ಆ ಕಂಪನಿಗಳು ತಮಿಳುನಾಡನ್ನು ಆಯ್ಕೆ ಮಾಡಿಕೊಳ್ಳಲು ಕಾರಣ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.