ಸಾಂದರ್ಭಿಕ ಚಿತ್ರ
ನವದೆಹಲಿ: ಇಂಧನ ಪರಿವರ್ತನೆಯನ್ನು ಸಾಕಾರಗೊಳಿಸುವ ಉದ್ದೇಶದಿಂದ ₹20 ಸಾವಿರ ಕೋಟಿ ವೆಚ್ಚದ ಪರಮಾಣು ಶಕ್ತಿ ಯೋಜನೆಯನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ.
ವಿಕಸಿತ ಭಾರತಕ್ಕಾಗಿ ಪರಮಾಣು ಶಕ್ತಿ ಯೋಜನೆಯನ್ನು ಘೋಷಿಸಿರುವ ನಿರ್ಮಲಾ ಸೀತಾರಾಮನ್, ‘2047ರ ವೇಳೆಗೆ ಕನಿಷ್ಠ 100 ಗಿಗಾ ವಾಟ್ ಪರಮಾಣು ಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲಾಗುವುದು’ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
‘ವಿದ್ಯುತ್ ಪರಿವರ್ತನೆ ಮಾಡುವ ಗುರಿಯನ್ನು ತಲುಪಲು ಇದು ಅಗತ್ಯವಾಗಿದ್ದು, ಖಾಸಗಿ ವಲಯದೊಂದಿಗೂ ಪಾಲುದಾರಿಕೆ ಹೊಂದಲಾಗುವುದು. ಅಣು ಶಕ್ತಿ ಕಾಯ್ದೆ ಮತ್ತು ಪರಮಾಣು ಹಾನಿ ಕಾಯ್ದೆಗೆ ತಿದ್ದುಪಡಿಗಳನ್ನು ಮಾಡಲಾಗುವುದು’ ಎಂದು ಅವರು ಹೇಳಿದ್ದಾರೆ.
‘₹20 ಸಾವಿರ ಕೋಟಿ ವೆಚ್ಚದಲ್ಲಿ ಸಂಶೋಧನೆ ಮತ್ತು ಸಣ್ಣ ಮಾದರಿ ಪರಮಾಣು ಸ್ಥಾವರಗಳನ್ನು (ಎಸ್ಎಂಆರ್) ಅಭಿವೃದ್ಧಿ ಪಡಿಸಲಾಗುವುದು. 2033ರ ವೇಳೆಗೆ ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಕನಿಷ್ಠ ಐದು ಎಸ್ಎಂಆರ್ಗಳು ಕಾರ್ಯಾರಂಭ ಮಾಡಲಿವೆ’ ಎಂದು ಅವರು ತಿಳಿಸಿದ್ದಾರೆ.
ಇಂಧನ ಕ್ಷೇತ್ರದ ಸುಧಾರಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಪ್ರಸ್ತಾಪಿಸಿರುವ ಅವರು, ‘ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ಸುಧಾರಣೆ ತರುವುದಕ್ಕಾಗಿ ಸರ್ಕಾರ ಆರ್ಥಿಕವಾಗಿ ಪ್ರೋತ್ಸಾಹ ನೀಡಲಿದೆ ಮತ್ತು ರಾಜ್ಯಗಳ ಅಂತರರಾಜ್ಯ ಸಾಗಣೆ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು’ ಎಂದು ಹೇಳಿದ್ದಾರೆ.
‘ಇದು ವಿದ್ಯುತ್ ಸರಬರಾಜು ಕಂಪನಿಗಳ ಆರ್ಥಿಕ ಸ್ಥಿತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಜೊತೆಗೆ, ಆಯಾ ರಾಜ್ಯಗಳ ಆಂತರಿಕ ಉತ್ಪನ್ನದ ಶೇ 0.5ರಷ್ಟು ಮೊತ್ತವನ್ನು ಹೆಚ್ಚುವರಿಯಾಗಿ ಪಡೆಯಲು ರಾಜ್ಯಗಳಿಗೆ ಅವಕಾಶ ನೀಡಲಾಗುವುದು’ ಎಂದು ನಿರ್ಮಲಾ ಹೇಳಿದ್ದಾರೆ.
2070ರ ವೇಳೆಗೆ ದೇಶದಲ್ಲಿ ಇಂಗಾಲ/ಹಸಿರು ಮನೆ ಅನಿಲಗಳ ಹೊರಸೂಸುವ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಗುರಿಯನ್ನು ಭಾರತ ಹೊಂದಿದೆ.
ದೇಶದಲ್ಲಿ ಸದ್ಯ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲನ್ನೇ ಬಳಸಲಾಗುತ್ತಿದೆ. ಪರಮಾಣು ಶಕ್ತಿಯು ಕಲ್ಲಿದ್ದಲಿಗೆ ಪರ್ಯಾಯವಾಗಿದ್ದು, ಪರಮಾಣು ಶಕ್ತಿಬಳಸಿ ವಿದ್ಯುತ್ ಉತ್ಪಾದನೆಗೆ ಉತ್ತೇಜನ ನೀಡುವುದು ಈಗಿನ ಅಗತ್ಯ ಎಂದು ಸರ್ಕಾರ ಹೇಳಿದೆ.
Highlights - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.