ADVERTISEMENT

Budget Session 2021: ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾಷಣದ ಮುಖ್ಯಾಂಶಗಳು

ಏಜೆನ್ಸೀಸ್
Published 29 ಜನವರಿ 2021, 7:33 IST
Last Updated 29 ಜನವರಿ 2021, 7:33 IST
ಸಂಸತ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ರಾಮನಾಥ ಕೋವಿಂದ್ – ಕೃಪೆ: ಡಿಡಿನ್ಯೂಸ್
ಸಂಸತ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ರಾಮನಾಥ ಕೋವಿಂದ್ – ಕೃಪೆ: ಡಿಡಿನ್ಯೂಸ್   

ನವದೆಹಲಿ: ಕೇಂದ್ರ ಸರ್ಕಾರದ ಹೊಸ ಮೂರು ಕೃಷಿ ಕಾಯ್ದೆಗಳನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಶ್ಲಾಘಿಸಿದ್ದಾರೆ.

ಬಜೆಟ್ ಅಧಿವೇಶನದ ಆರಂಭದ ದಿನವಾದ ಇಂದು (ಶುಕ್ರವಾರ) ಸಂಸತ್‌ನ ಜಂಟಿ ಅಧಿವೇಶನದ ಉದ್ದೇಶಿಸಿ ಭಾಷಣ ಮಾಡಿದ ಅವರು, ‘ಕೃಷಿ ಕಾಯ್ದೆಗಳ ಜಾರಿಗೆ ಮುನ್ನ ರೈತರಿಗೆ ನೀಡಲಾಗಿದ್ದ ಹಕ್ಕುಗಳನ್ನು ಕಸಿದುಕೊಳ್ಳಲಾಗುವುದಿಲ್ಲ. ಬದಲಿಗೆ ಹೆಚ್ಚುವರಿ ಸೌಲಭ್ಯ, ಹಕ್ಕುಗಳನ್ನು ಕೃಷಿ ಕಾಯ್ದೆಗಳ ಮೂಲಕ ನೀಡಲಾಗಿದೆ’ ಎಂದು ಹೇಳಿದ್ದಾರೆ.

ಸುಮಾರು 10 ಕೋಟಿ ಸಣ್ಣ ರೈತರಿಗೆ ಮೂರು ಹೊಸ ಕೃಷಿ ಕಾಯ್ದೆಗಳ ಪ್ರಯೋಜನ ದೊರೆಯಲು ಆರಂಭವಾಗಿದೆ. ಅನೇಕ ರಾಜಕೀಯ ಪಕ್ಷಗಳೂ ಈ ಕಾಯ್ದೆಗಳನ್ನು ಬೆಂಬಲಿಸಿವೆ ಎಂದೂ ಅವರು ಹೇಳಿದ್ದಾರೆ.

ರಾಷ್ಟ್ರಪತಿಗಳು ಹೇಳಿದ್ದು...

* ಕೋವಿಡ್ ವಿರುದ್ಧದ ಹೋರಾಟದಲ್ಲಿ ನಾವು ಅನೇಕ ನಾಗರಿಕರನ್ನು ಕಳೆದುಕೊಂಡಿದ್ದೇವೆ. ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರೂ ಕೊರೊನಾ ಸಮಯದಲ್ಲೇ ಇಹಲೋಕ ತ್ಯಜಿಸಿದ್ದಾರೆ. ಆರು ಮಂದಿ ಸಂಸದರು ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ. ಅವರೆಲ್ಲರಿಗೆ ನನ್ನ ಗೌರವ ನಮನಗಳು.

* ಕೊರೊನಾ ವೈರಸ್ ಸಾಂಕ್ರಾಮಿಕಕ್ಕೆ ಸಂಬಂಧಿಸಿ ಸರ್ಕಾರ ಕೈಗೊಂಡ ಸಕಾಲಿಕ ನಿರ್ಧಾರದಿಂದ ಲಕ್ಷಾಂತರ ನಾಗರಿಕರ ಜೀವ ಉಳಿದಿದೆ. ಇಂದು ಕೋವಿಡ್ ಪ್ರಕರಣಗಳ ಸಂಖ್ಯೆ ದೇಶದಲ್ಲಿ ಕಡಿಮೆಯಾಗುತ್ತಿದೆ. ಗುಣಮುಖರಾಗುವವರ ಸಂಖ್ಯೆ ಹೆಚ್ಚಿದೆ.

* ಆತ್ಮ ನಿರ್ಭರ ಭಾರತವು ರೈತರ ಜೀವನ ಮಟ್ಟ ಸುಧಾರಿಸಿದೆ.

* ಕಾನೂನನ್ನು ಕಡ್ಡಾಯವಾಗಿ ಪಾಲಿಸಬೇಕು: ರಾಷ್ಟ್ರಧ್ವಜ ಮತ್ತು ಗಣರಾಜ್ಯೋತ್ಸವದ ಪವಿತ್ರ ದಿನವನ್ನೇ ಅವಮಾನಿಸಲಾಯಿತು. ಸಂವಿಧಾನವು ನಮಗೆ ವಾಕ್ ಸ್ವಾತಂತ್ರ್ಯ ನೀಡುತ್ತದೆ. ಅದೇ ಸಂವಿಧಾನವು ಕಾನೂನು ಮತ್ತು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎನ್ನುತ್ತದೆ.

* ಹೊಸ ಸಂಸತ್‌ ಕಟ್ಟಡ ನಿರ್ಮಾಣಕ್ಕೆ ಹಿಂದಿನ ಸರ್ಕಾರಗಳು ಪ್ರಯತ್ನ ಮಾಡಿದ್ದವು. ಸ್ವಾತಂತ್ರ್ಯೋತ್ಸವದ 75ನೇ ವರ್ಷದತ್ತ ಅಡಿಯಿಡುತ್ತಿರುವಾಗ ಹೊಸ ಸಂಸತ್‌ ಕಟ್ಟಡ ನಿರ್ಮಾಣ ಆರಂಭಿಸಿದ್ದು ಕಾಕತಾಳೀಯ ಮತ್ತು ಸಂತಸದ ವಿಚಾರ

* ದೇಶವು ಕೋವಿಡ್‌ ಕಾಲದ ಹೊಡೆತದಿಂದ ಚೇತರಿಸಿಕೊಳ್ಳುತ್ತಿದೆ. ಕಠಿಣ ಸನ್ನಿವೇಶದ ಹೊರತಾಗಿಯೂ ಜಾಗತಿಕ ಹೂಡಿಕೆದಾರರಿಗೆ ಭಾರತವು ಪ್ರಶಸ್ತ ಸ್ಥಳವಾಗಿ ಹೊರಹೊಮ್ಮಿದೆ.

* ಈಶಾನ್ಯ ರಾಜ್ಯಗಳಲ್ಲಿ ತೀವ್ರವಾದಿ ಚಟುವಟಿಗಳು ಕಡಿಮೆಯಾಗಿವೆ. ಐತಿಹಾಸಿಕ ಬೋಡೊ ಒಪ್ಪಂದವನ್ನು ಶಾಂತಿಯುತವಾಗಿ ಅನುಷ್ಠಾನಗೊಳಿಸಲಾಗಿದೆ.

* ಈಶಾನ್ಯ ರಾಜ್ಯಗಳಲ್ಲಿ ಯುವಕರು ಮುಖ್ಯವಾಹಿನಿಗೆ ಬರುತ್ತಿದ್ದಾರೆ. ದೇಶ ಕಟ್ಟುವ ಕಾಯಕದಲ್ಲಿ ಕೈಜೋಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.