ಬೆಂಗಳೂರು: ವೇತನ, ಪಿಂಚಣಿ, ಸಾಲದ ಮೇಲಿನ ಬಡ್ಡಿ ಪಾವತಿ ಸೇರಿದಂತೆ ಮಾಡಲೇಬೇಕಾದ ಬದ್ಧ ವೆಚ್ಚಗಳು ಹೆಚ್ಚುತ್ತಿರುವುದು ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ತೊಡಕಾಗಿದೆ ಎಂದು ಮಧ್ಯಮಾವಧಿ ವಿತ್ತೀಯ ಯೋಜನೆ ಪ್ರತಿಪಾದಿಸಿದೆ.
ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಿದ 2024–28ರ ಅವಧಿಯ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ಈ ಉಲ್ಲೇಖವಿದೆ.
ರಾಜಸ್ವ ಸ್ವೀಕೃತಿಗೆ ಅನುಪಾತವಾಗಿ ಬದ್ಧವೆಚ್ಚಗಳು ಹೆಚ್ಚುತ್ತಲೇ ಇವೆ. 2022–23ರಲ್ಲಿ ಶೇ 79ರಷ್ಟಿದ್ದರೆ, 2023–24ರಲ್ಲಿ ಇದು ಶೇ 98ಕ್ಕೆ ಏರಿಕೆಯಾಯಿತು. 2024–25ರಲ್ಲಿ ಈ ಪ್ರಮಾಣವು ಶೇ 103ಕ್ಕೆ ಏರಿಕೆಯಾಗಲಿದೆ ಎಂದು ಯೋಜನೆ ಅಂದಾಜಿಸಿದೆ.
ಯೋಜನೆಯೇತರ ಬದ್ಧವೆಚ್ಚವು ಹಿಂದಿನ ಸಾಲಿಗೆ ಹೋಲಿಸಿದರೆ ಒಟ್ಟಾರೆ ಶೇ 14ರಷ್ಟು ಹೆಚ್ಚಳವಾಗಿದೆ. ಈ ಪೈಕಿ ಬಡ್ಡಿಪಾವತಿ ಮತ್ತು ಪಿಂಚಣಿಯು ಕಳೆದ ವರ್ಷಕ್ಕೆ ಹೋಲಿಸಿದರೆ ಕ್ರಮವಾಗಿ ಶೇ 19 ಹಾಗೂ ಶೇ 21ರಷ್ಟು ಏರಿಕೆಯಾಗಿದೆ. ಒಟ್ಟು ರಾಜಸ್ವ ವೆಚ್ಚದಲ್ಲಿ ಬದ್ಧತಾ ವೆಚ್ಚವು 2021–22ರಲ್ಲಿ ಶೇ 82ರಷ್ಟಿದ್ದುದು 2022–23ರಲ್ಲಿ ಶೇ 84ಕ್ಕೆ ಏರಿಕೆಯಾಗಿದೆ ಎಂದೂ ಯೋಜನೆಯ ವರದಿ ಹೇಳಿದೆ.
ಹೀಗೆ ಬದ್ಧ ವೆಚ್ಚಳ ಹೆಚ್ಚಳದಿಂದಾಗಿ, ರಾಜ್ಯ ಸರ್ಕಾರಕ್ಕೆ ಲಭ್ಯ ಇರುವ ಹಣಕಾಸು ಅವಕಾಶವು ಸೀಮಿತವಾಗಿದೆ. ಇದರಿಂದಾಗಿ ರಾಜ್ಯದ ಅಭಿವೃದ್ಧಿಯ ಆದ್ಯತೆಗಳಿಗೆ ಅನುಗುಣವಾಗಿ ಸಂಪನ್ಮೂಲಗಳನ್ನು ಒದಗಿಸಲು, ಸುಸ್ಥಿರ ಅಭಿವೃದ್ಧಿ ಮತ್ತು ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನ ಹಂಚಿಕೆ ಮಾಡಲು ಕಷ್ಟಕರವಾಗಿದೆ. ಸರ್ಕಾರಕ್ಕೆ ತನ್ನ ವೆಚ್ಚ ನಿರ್ವಹಣೆಗಿರುವ ವಿತ್ತೀಯ ಅವಕಾಶವು ಕ್ಷೀಣಿಸಲಿದೆ. ಸರ್ಕಾರದ ಸಂಪನ್ಮೂಲ ಹಂಚಿಕೆ ಹಾಗೂ ರಾಜ್ಯದ ಒಟ್ಟಾರೆ ವಿತ್ತೀಯ ಪರಿಸ್ಥಿತಿಯ ಮೇಲೆ ಇದು ನೇರವಾಗಿ ಪರಿಣಾಮ ಬೀರಲಿದೆ ಎಂದೂ ವಿವರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.