ಮುಂಬೈ /ಬೆಂಗಳೂರು: ಲಾಕ್ಡೌನ್ ಜಾರಿಯಲ್ಲಿ ಇರುವುದರಿಂದ ಈ ಬಾರಿ ಅಕ್ಷಯ ತೃತೀಯ ಸಂದರ್ಭದಲ್ಲಿನ ಖರೀದಿ ಸಂಭ್ರಮವು ಆನ್ಲೈನ್ನಲ್ಲಿ ಮಾತ್ರವೇ ನಡೆಯಿತು.
ಚಿನ್ನಭರಣ ಮಳಿಗೆಗಳ ಬಾಗಿಲು ತೆಗೆಯಲು ಸಾಧ್ಯವಿಲ್ಲದೇ ಇರುವುದರಿಂದ ರಿಟೇಲ್ ವಹಿವಾಟು ನಡೆದಿಲ್ಲ. ಹೀಗಾಗಿ ಗ್ರಾಹಕರನ್ನು ಆಕರ್ಷಿಸಲು ವರ್ತಕರು ಆನ್ಲೈನ್ ವಹಿವಾಟು ಸೇರಿದಂತೆ ಇನ್ನೂ ಹಲವು ವಿನೂತನ ಪ್ರಯತ್ನಗಳನ್ನು ನಡೆಸಿದ್ದಾರೆ.
‘ಲಾಕ್ಡೌನ್ನಿಂದ ಚಿನ್ನಾಭರಣ ಮಳಿಗೆಗಳು ಮುಚ್ಚಿವೆ. ಹೀಗಾಗಿ ಈ ವರ್ಷದ ಅಕ್ಷಯ ತೃತೀಯದ ಮಾರಾಟ ಏನಾದರೂ ನಡೆದಿದೆ ಎಂದಾದರೆ ಅದು ಡಿಜಿಟಲ್ ವಿಧಾನದಲ್ಲಿ ಮಾತ್ರ’ ಎಂದು ಹರಳು ಮತ್ತು ಚಿನ್ನಾಭರಣ ಸಮಿತಿಯ ಅಧ್ಯಕ್ಷ ಅನಂತ ಪದ್ಮನಾಭನ್ ಅವರು ಹೇಳಿದ್ದಾರೆ.
‘ಲಾಕ್ಡೌನ್ ಮುಗಿದ ಬಳಿಕಭೌತಿಕ ಸ್ವರೂಪದಲ್ಲಿ ಚಿನ್ನ ವಿತರಣೆ ಅಥವಾ ಖರೀದಿ ಸಾಧ್ಯವಾಗಲಿದೆ. ಮೇ ಅಥವಾ ಜೂನ್ ವೇಳೆಗೆ ಉದ್ಯಮವು ಸಹಜ ಸ್ಥಿತಿಗೆ ಬರುವ ಸಾಧ್ಯತೆ ಇದೆ. ದೀಪಾವಳಿ ಹೊತ್ತಿಗೆ ಉತ್ತಮ ಬೇಡಿಕೆ ಬರುವ ನಿರೀಕ್ಷೆಯಲ್ಲಿದ್ದೇವೆ’ ಎಂದು ತಿಳಿಸಿದ್ದಾರೆ.
ಕಲ್ಯಾಣ್ ಜುವೆಲರ್ಸ್ನ ಜಾಲತಾಣಕ್ಕೆ ಭೇಟಿ ನೀಡಿದವರ ಪ್ರಮಾಣ ಮೂರು ಪಟ್ಟು ಏರಿಕೆ ಕಂಡಿದೆ.
ಜಾಲತಾಣಕ್ಕೆ 10 ಲಕ್ಷ ಜನರ ಭೇಟಿ: ತನಿಷ್ಕ್
ಬೆಂಗಳೂರು: ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಗ್ರಾಹಕರಿಂದ ಆನ್ಲೈನ್ನಲ್ಲಿ ಚಿನ್ನಾಭರಣ ಖರೀದಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
‘ಕಳೆದ ವರ್ಷದ ವಹಿವಾಟಿಗೆ ಹೋಲಿಕೆ ಮಾಡುವ ಸಂದರ್ಭ ಇದಲ್ಲ. ಹೀಗಿದ್ದರೂ tanishq.co.inಗೆ ಗ್ರಾಹಕರು ಭೇಟಿ ನೀಡಿರುವ ಪ್ರಮಾಣ ಉತ್ತೇಜನಕಾರಿಯಾಗಿದೆ. 10 ಲಕ್ಷ ಜನರು ಜಾಲತಾಣಕ್ಕೆ ಭೇಟಿ ನೀಡಿದ್ದಾರೆ. ಸಾಮಾನ್ಯವಾಗಿ ಆನ್ಲೈನ್ಗೆ ಭೇಟಿ ನೀಡುವವರ ಸರಾಸರಿಯನ್ನು ಪರಿಗಣಿಸಿದರೆ ಈ ಸಂದರ್ಭದಲ್ಲಿ ಭೇಟಿ ನೀಡಿದವರ ಪ್ರಮಾಣ 2.5 ರಿಂದ 3 ಪಟ್ಟು ಹೆಚ್ಚಾಗಿದೆ’ ಎಂದುಟೈಟನ್ ಕಂಪನಿಯ ಚಿನ್ನಾಭರಣ ವಿಭಾಗದ ಸಿಇಒ ಅಜಯ್ ಚಾವ್ಲಾ ಹೇಳಿದ್ದಾರೆ.
*
ಇದೇ ಮೊದಲ ಬಾರಿಗೆ ಅಕ್ಷಯ ತೃತೀಯವು ಸಂಪೂರ್ಣವಾಗಿ ಆನ್ಲೈನ್ ಮೂಲಕ ನಡೆದಿದೆ.
–ಸೌರಭ್ ಗಾಡ್ಗೀಳ್, ಪಿಎನ್ಜಿ ಜುವೆಲರ್ಸ್ನ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.