ADVERTISEMENT

ಆಯುರ್ವೇದ ಅರ್ಥವ್ಯವಸ್ಥೆ: ಶೇ 90ರಷ್ಟು ಬೆಳವಣಿಗೆ

ಪಿಟಿಐ
Published 19 ಫೆಬ್ರುವರಿ 2021, 16:30 IST
Last Updated 19 ಫೆಬ್ರುವರಿ 2021, 16:30 IST
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್   

ನವದೆಹಲಿ: ಆಯುರ್ವೇದಕ್ಕೆ ಜಾಗತಿಕ ಮಟ್ಟದಲ್ಲಿ ಸ್ವೀಕೃತಿ ಸಿಕ್ಕಿರುವ ಕಾರಣ, ಕೋವಿಡ್–19 ಸಾಂಕ್ರಾಮಿಕದ ನಂತರದಲ್ಲಿ ಆಯುರ್ವೇದ ಆಧಾರಿತ ಅರ್ಥವ್ಯವಸ್ಥೆಯು ಶೇಕಡ 90ರವರೆಗೆ ಬೆಳವಣಿಗೆ ಕಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.

ಆಯುರ್ವೇದ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ಹೂಡಿಕೆ ಆಗುತ್ತಿದೆ, ಈ ಕ್ಷೇತ್ರದ ರಫ್ತಿನ ಪ್ರಮಾಣದಲ್ಲಿ ಹೆಚ್ಚಳ ಆಗಿದೆ ಎಂದೂ ಅವರು ತಿಳಿಸಿದ್ದಾರೆ. ಅಧಿಕೃತ ಅಂಕಿ–ಅಂಶಗಳ ಪ್ರಕಾರ ಆಯುರ್ವೇದವು ದೇಶದಲ್ಲಿ ₹ 30 ಸಾವಿರ ಕೋಟಿ ಮೌಲ್ಯದ ಉದ್ದಿಮೆಯನ್ನು ಪೋಷಿಸುತ್ತಿದೆ. ಈ ಕ್ಷೇತ್ರದ ವಾರ್ಷಿಕ ಬೆಳವಣಿಗೆ ಶೇ 15ರಿಂದ ಶೇ 20ರಷ್ಟು ಇದೆ.

‘ಇದು ಕೋವಿಡ್–19 ಪೂರ್ವದ ಅಂಕಿ–ಅಂಶಗಳು. ಕೋವಿಡ್ ನಂತರದಲ್ಲಿ ಆಯುರ್ವೇದ ಆಧಾರಿತ ಅರ್ಥವ್ಯವಸ್ಥೆಯು ಶೇ 50ರಿಂದ ಶೇ 90ರವರೆಗೆ ಬೆಳವಣಿಗೆ ಕಂಡಿದೆ’ ಎಂದು ಸಚಿವರು ಹೇಳಿದ್ದಾರೆ. ಭಾರತದ ಜನ ಹಾಗೂ ವಿಶ್ವದ ಜನ ಆಯುರ್ವೇದವನ್ನು ಸ್ವೀಕರಿಸಿದ್ದಾರೆ ಎಂಬುದನ್ನು ಈ ಅಂಕಿ–ಅಂಶಗಳೇ ಹೇಳುತ್ತಿವೆ ಎಂದು ಕೂಡ ಅವರು ಹೇಳಿದ್ದಾರೆ.

ADVERTISEMENT

‘ರಫ್ತು ಹಾಗೂ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕೂಡ ಗಮನಾರ್ಹ ಹೆಚ್ಚಳ ಆಗಿದೆ’ ಎಂದು ಅವರು ಪತಂಜಲಿ ಸಂಸ್ಥೆಯ ಸಂಶೋಧನಾ ಪ್ರಬಂಧವೊಂದರ ಬಿಡುಗಡೆ ವೇಳೆ ತಿಳಿಸಿದ್ದಾರೆ. ‘ನಾನು ಆಧುನಿಕ ವೈದ್ಯವಿಜ್ಞಾನ ಅಧ್ಯಯನ ಮಾಡಿ, ವೈದ್ಯನಾಗಿ ಕೆಲಸ ಮಾಡಿದವನು. ಆದರೆ, ಆಯುರ್ವೇದವನ್ನು ಅಧ್ಯಯನ ಮಾಡಿದ ನಂತರ ಇದು ಎಲ್ಲರಿಗೂ ಪ್ರಯೋಜನಕಾರಿ ಎಂಬ ತೀರ್ಮಾನಕ್ಕೆ ಬಂದಿದ್ದೇನೆ’ ಎಂದು ಹರ್ಷವರ್ಧನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.