ADVERTISEMENT

ವಿಲೀನಕ್ಕೆ ವಿರೋಧ: 26, 27ಕ್ಕೆ ಬ್ಯಾಂಕ್‌ ಮುಷ್ಕರ

ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟಗಳಿಂದ ಮುಷ್ಕರಕ್ಕೆ ಕರೆ

ಪಿಟಿಐ
Published 12 ಸೆಪ್ಟೆಂಬರ್ 2019, 16:39 IST
Last Updated 12 ಸೆಪ್ಟೆಂಬರ್ 2019, 16:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಂಡೀಗಡ/ಧರ್ಮಶಾಲಾ: 10 ಬ್ಯಾಂಕ್‌ಗಳ ವಿಲೀನದ ನಿರ್ಧಾರವನ್ನು ವಿರೋಧಿಸಿ ಪ್ರತಿಭಟನೆ ತೀವ್ರಗೊಳಿಸಲು ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟಗಳು ನಿರ್ಧರಿಸಿವೆ. ಇದೇ 26 ರಿಂದ ಎರಡು ದಿನಗಳ ಮುಷ್ಕರಕ್ಕೆ ನಾಲ್ಕು ಬ್ಯಾಂಕ್‌ ಸಿಬ್ಬಂದಿ ಒಕ್ಕೂಟಗಳು ಗುರುವಾರ ಕರೆ ಕೊಟ್ಟಿವೆ. ಇದರಿಂದ ಬ್ಯಾಂಕಿಂಗ್‌ ವಹಿವಾಟಿಗೆ ದಕ್ಕೆಯಾಗುವ ಸಾಧ್ಯತೆ ಇದೆ.

ಸರ್ಕಾರ ಸ್ಪಂದಿಸದೇ ಇದ್ದರೆ ನವೆಂಬರ್‌ ತಿಂಗಳ ಎರಡನೇ ವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿಯೂ ಎಚ್ಚರಿಕೆ ನೀಡಿವೆ.

ಬ್ಯಾಂಕ್‌ಗಳ ವಿಲೀನ ಮತ್ತು ಸಿಬ್ಬಂಯ ಬೇಡಿಕೆಗಳನ್ನು ಮುಂದಿಟ್ಟುಕೊಂಡುದೇಶದಾದ್ಯಂತ ರಾಷ್ಟ್ರೀಕೃತ ಬ್ಯಾಂಕ್‌ಗಳು ಮುಷ್ಕರ ನಡೆಸಲಿವೆ ಎಂದುಎಐಬಿಒಸಿನ ಪ್ರಧಾನ ಕಾರ್ಯದರ್ಶಿ ದೀಪಲ್‌ ಕುಮಾರ್‌ ಶರ್ಮಾ ತಿಳಿಸಿದ್ದಾರೆ.

‘ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಸಂಘಟನೆ (ಎಐಬಿಒಸಿ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಎ), ಭಾರತೀಯ ರಾಷ್ಟ್ರೀಯ ಬ್ಯಾಂಕ್‌ ಅಧಿಕಾರಿಗಳ ಕಾಂಗ್ರೆಸ್‌ (ಐಎನ್‌ಬಿಒಸಿ) ಮತ್ತು ಬ್ಯಾಂಕ್‌ ಅಧಿಕಾರಿಗಳ ರಾಷ್ಟ್ರೀಯ ಸಂಘಟನೆ (ಎನ್‌ಒಬಿಒ) ಮುಷ್ಕರಕ್ಕೆ ಕರೆ ನೀಡಿವೆ’ ಎಂದು ಮಾಹಿತಿ ನೀಡಿದ್ದಾರೆ.

ವೇತನ ಪರಿಷ್ಕರಣೆ ಮತ್ತು ವಾರದಲ್ಲಿ ಐದು ದಿನ ಮಾತ್ರವೇ ಕೆಲಸದ ವ್ಯವಸ್ಥೆ ಜಾರಿಗೊಳಿಸುವುದು ಸೇರಿದಂತೆ ಇನ್ನೂ ಕೆಲವು ಬೇಡಿಕೆಗಳನ್ನು ಒಕ್ಕೂಟ ಸರ್ಕಾರದ ಮುಂದಿಟ್ಟಿದೆ.

ದೇನಾ ಬ್ಯಾಂಕ್‌ ಕಟ್ಟಡ ಮಾರಾಟಕ್ಕೆ
ದೇನಾ ಬ್ಯಾಂಕ್‌ನ ಕಾರ್ಪೊರೇಟ್‌ ಕಚೇರಿ ಕಟ್ಟಡವನ್ನು ₹ 530 ಕೋಟಿಗೆ ಮಾರಾಟ ಮಾಡಲು ಬ್ಯಾಂಕ್‌ ಆಫ್‌ ಬರೋಡಾ ಮುಂದಾಗಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ಸೆಂಟ್ರಲ್‌ ಬಿಸಿನೆಸ್‌ ಡಿಸ್ಟ್ರಿಕ್ಟ್‌ನಲ್ಲಿ 2,878.36 ಚದರ ಅಡಿ ಭೂಮಿಯಲ್ಲಿ ಈಕಚೇರಿ ಇದೆ.

ಇ–ಹರಾಜು ಮೂಲಕ ಕಟ್ಟಡವನ್ನು ಸೇಲ್ಸ್‌ ಕಮ್‌ ಆಕ್ಷನ್‌ಗೆ ಇಡಲಾಗಿದೆ. ಅಕ್ಟೋಬರ್‌ 18ರಂದು ಹರಾಜು ನಡೆಯಲಿದೆ. ಕಚೇರಿಯಲ್ಲಿನ ಪೀಠೋಪಕರಣಗಳು ಮತ್ತು ಇನ್ನಿತರೆ ಚರಾಸ್ತಿಗಳು ಹರಾಜಿಗೆ ಇರುವುದಿಲ್ಲ ಎಂದು ಬ್ಯಾಂಕ್‌ ತಿಳಿಸಿದೆ.

ಏಪ್ರಿಲ್‌ನಲ್ಲಿ ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾದಲ್ಲಿ ವಿಲೀನಗೊಂಡಿವೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.