ಬೆಂಗಳೂರು: ಚೀನಾ ಸರಕುಗಳನ್ನು ಬಹಿಷ್ಕರಿಸುವ ಆಂದೋಲನಕ್ಕೆ ಬೆಂಬಲ ನೀಡುವಂತೆ ಕೋರಿ ಅಖಿಲ ಭಾರತ ವರ್ತಕರ ಒಕ್ಕೂಟ (ಸಿಎಐಟಿ) ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಸೇರಿದಂತೆ ಇತರೆ ಉದ್ಯಮಿಗಳಿಗೆ ಬುಧವಾರ ಪತ್ರ ಬರೆದಿದೆ.
ಚೀನಾ ಪ್ರಾಬಲ್ಯ ಕಡಿಮೆ ಮಾಡಿ ಭಾರತ ಜಾಗತಿಕ ಸೂಪರ್ಪವರ್ ರಾಷ್ಟ್ರವಾಗುವ ಹಾದಿಯಲ್ಲಿ ಚೀನಾ ಸರಕು ಬಹಿಷ್ಕರಿಸುವ ಆಂದೋಲನ ನಿರ್ಣಾಯಕವಾಗಲಿದೆ. ಅದಕ್ಕಾಗಿ ಸಿಎಐಟಿ ಮುಕೇಶ್ ಅಂಬಾನಿ ನೇತೃತ್ವ ಇತರೆ 50 ಉದ್ಯಮಿಗಳ ಬೆಂಬಲ ಕೋರಿದೆ. ಸಿಎಐಟಿ ಭಾರತದ ಸುಮಾರು 6 ಕೋಟಿ ವರ್ತಕರ ಪ್ರಾತಿನಿಧಿಕ ಸಂಸ್ಥೆಯಾಗಿದೆ.
ಭಾರತ ಚೀನಾದಿಂದ ನಾಲ್ಕು ರೀತಿಯ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತದೆ. ಸಿದ್ಧ ಸರಕು, ಕಚ್ಚಾ ವಸ್ತುಗಳು, ಭಾರತದಲ್ಲಿ ಜೋಡಿಸಲು ಬಿಡಿಭಾಗಗಳು ಹಾಗೂ ತಂತ್ರಜ್ಞಾನ ಆಧಾರಿತ ವಸ್ತುಗಳು ಆಮದು ಆಗುತ್ತಿವೆ. ಹಂತ ಹಂತವಾಗಿ ಚೀನಾ ಸರಕು ಆಮದು ಪ್ರಕ್ರಿಯೆ ಬಹಿಷ್ಕರಿಸಲು ಸಿಎಐಟಿ ನಿರ್ಧರಿಸಿದೆ. 450 ಬಗೆಯ ಸಿದ್ಧ ವಸ್ತುಗಳನ್ನು ಚೀನಾದಿಂದ ತರಿಸಿಕೊಳ್ಳಲಾಗುತ್ತಿದ್ದು, ಅವುಗಳು ಸುಮಾರು 3,000 ವಸ್ತುಗಳನ್ನು ಒಳಗೊಂಡಿರುತ್ತವೆ. ಭಾರತದಲ್ಲಿ ಈಗಾಗಲೇ ಸಿದ್ಧವಾಗುತ್ತಿರುವ ವಸ್ತುಗಳನ್ನು ಆಧರಿಸಿ ಮೊದಲ ಹಂತದಲ್ಲಿ ಆಮದು ನಿಲ್ಲಿಸಬಹುದಾದ ಪಟ್ಟಿ ಸಿದ್ಧಪಡಿಸಲಾಗಿದೆ.
ಎನ್.ಆರ್.ನಾರಾಯಣ ಮೂರ್ತಿ, ಮುಕೇಶ್ ಅಂಬಾನಿ, ರತನ್ ಟಾಟಾ, ಅಜೀಂ ಪ್ರೇಮ್ಜಿ, ಗೌತಮ್ ಅದಾನಿ, ಆದಿ ಗಾಡ್ರೆಜ್, ಅಜಯ್ ಪರಿಮಾಳ್, ಕುಮಾರ್ ಮಂಗಳಂ ಬಿರ್ಲಾ, ವಿಕ್ರಂ ಕರ್ಲೋಸ್ಕರ್, ಸುನಿಲ್ ಭಾರ್ತಿ ಮಿತ್ತಲ್, ರಾಹುಲ್ ಬಜಾಜ್, ಆನಂದ್ ಮಹೀಂದ್ರ, ಶಿವ ನಾಡರ್, ಉದಯ್ ಕೋಟಕ್, ನಸ್ಲಿ ವಾಡಿಯಾ ಸೇರಿದಂತೆ ದೇಶದ ಹಲವು ಉದ್ಯಮಿಗಳ ಸಹಕಾರ ಕೋರಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.