ADVERTISEMENT

Yes Bank–DHFL ಹಗರಣ: ಸಿಬಿಐನಿಂದ ಎಬಿಐಎಲ್ ಅಧ್ಯಕ್ಷ ಅವಿನಾಶ್ ಭೋಸ್ಲೆ ಬಂಧನ

ಪಿಟಿಐ
Published 26 ಮೇ 2022, 16:27 IST
Last Updated 26 ಮೇ 2022, 16:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಯೆಸ್ ಬ್ಯಾಂಕ್ ಮತ್ತು ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿಎಚ್‌ಎಫ್‌ಎಲ್) ಹಗರಣದಲ್ಲಿ ಪುಣೆ ಮೂಲದ ರಿಯಲ್‌ ಎಸ್ಟೇಟ್‌ ಸಮೂಹ ಎಬಿಐಎಲ್‌ನ ಅಧ್ಯಕ್ಷ ಅವಿನಾಶ್‌ ಭೋಸ್ಲೆ ಅವರನ್ನು ಸಿಬಿಐ ಗುರುವಾರ ಬಂಧಿಸಿದೆ.

ಯೆಸ್‌ ಬ್ಯಾಂಕ್‌ ಸಂಸ್ಥಾಪಕ ರಾಣಾ ಕಪೂರ್‌ ಮತ್ತು ಡಿಎಚ್‌ಎಫ್‌ಎಲ್‌ ಪ್ರವರ್ತಕ ಕಪಿಲ್‌ ವಾಧವನ್‌ ಅವರನ್ನು ಒಳಗೊಂಡ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಅವಿನಾಶ್ ಅವರನ್ನು ಬಂಧಿಸಿದೆ. ಮಹಾರಾಷ್ಟ್ರದ ಹಲವು ರಿಯಲ್‌ ಎಸ್ಟೇಟ್‌ ಕಂಪನಿಗಳ ಮೂಲಕ ಅಕ್ರಮ ಹಣದ ವಹಿವಾಟು ನಡೆದಿರುವ ಬಗ್ಗೆ ಸಿಬಿಐ ಸಂಶಯ ವ್ಯಕ್ತಪಡಿಸಿದೆ.

ಏಪ್ರಿಲ್‌ 30ರಂದು ಸಿಬಿಐ ಹಲವು ಬಿಲ್ಡರ್‌ಗಳಿಗೆ ಸೇರಿದ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಅದೇ ಕಾರ್ಯಾಚರಣೆಯಲ್ಲಿ ಎಬಿಐಎಲ್‌ ಮತ್ತು ಅವಿನಾಶ್‌ ಅವರಿಗೆ ಸೇರಿದ ಜಾಗಗಳಲ್ಲೂ ಶೋಧನೆ ನಡೆದಿತ್ತು.

ADVERTISEMENT

ಪ್ರಕರಣದ ಸಂಬಂಧ ಇತ್ತೀಚೆಗಷ್ಟೇ ರೇಡಿಯಸ್‌ ಡೆವಲಪರ್ಸ್‌ನ ಸಂಜಯ್‌ ಛಾಬ್ರಿಯಾ ಅವರನ್ನು ಸಿಬಿಐ ಬಂಧಿಸಿತ್ತು.

ಯೆಸ್‌ ಬ್ಯಾಂಕ್‌ ಡಿಎಚ್‌ಎಫ್‌ಎಲ್‌ನ ಅಲ್ಪಾವಧಿ ಡಿಬೆಂಚರ್‌ಗಳಲ್ಲಿ ₹3,700 ಕೋಟಿ ಹೂಡಿಕೆ ಮಾಡಿತ್ತು. ಅದರ ಬೆನ್ನಲ್ಲೇ 2018ರ ಏಪ್ರಿಲ್‌ ಮತ್ತು ಜೂನ್‌ ನಡುವೆ ವಂಚನೆ ನಡೆದಿರುವ ಬಗ್ಗೆ ಸಿಬಿಐ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದೆ.

ಅದರ ಪ್ರತಿಯಾಗಿ ವಾಧವನ್‌ ಯೆಸ್‌ ಬ್ಯಾಂಕ್‌ನ ಕಪೂರ್‌ ಮತ್ತು ಅವರ ಕುಟುಂಬದ ಸದಸ್ಯರ ಹೆಸರಿಗೆ ಸಾಲದ ರೂಪದಲ್ಲಿ ₹600 ಕೋಟಿ ಕಿಕ್‌ಬ್ಯಾಕ್‌ ಪಾವತಿಸಿರುವ ಆರೋಪವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.