ADVERTISEMENT

ರಾಜ್ಯಗಳಿಗೆ ಇಂದು ₹20,000 ಕೋಟಿ ಜಿಎಸ್‌ಟಿ ಪರಿಹಾರ ಮೊತ್ತ ವಿತರಣೆ: ನಿರ್ಮಲಾ

ಏಜೆನ್ಸೀಸ್
Published 5 ಅಕ್ಟೋಬರ್ 2020, 15:18 IST
Last Updated 5 ಅಕ್ಟೋಬರ್ 2020, 15:18 IST
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌    

ನವದೆಹಲಿ: ರಾಜ್ಯಗಳಿಗೆ ಸೋಮವಾರ ರಾತ್ರಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಹಾರದ ಮೊತ್ತ ವಿತರಿಸಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಹೇಳಿದ್ದಾರೆ.

ಇಂದು ನಡೆದ ಜಿಎಸ್‌ಟಿ ಮಂಡಳಿಯ 42ನೇ ಸಭೆಯಲ್ಲಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈ ವರ್ಷ ಸಂಗ್ರಹಿಸಲಾಗಿರುವ ತೆರಿಗೆ ಪರಿಹಾರ ಮೊತ್ತ ₹20,000 ಕೋಟಿ ರಾಜ್ಯಗಳಿಗೆ ವಿತರಿಸಲು ನಿರ್ಧರಿಸಲಾಗಿದೆ.

ದೀರ್ಘ ಕಾಲದಿಂದ ಬಾಕಿ ಉಳಿದಿರುವ ಸಂಯೋಜಿತ ಜಿಎಸ್‌ಟಿಯ ಸಮಸ್ಯೆಗಳನ್ನು ಸಭೆಯಲ್ಲಿ ಚರ್ಚಿಸಲಾಗಿದೆ. ಏಕೀಕೃತ ಜಿಎಸ್‌ಟಿ (ಐಜಿಎಸ್‌ಟಿ) ರಾಜ್ಯಗಳೊಂದಿಗೆ ಹಂಚಿಕೆ ಮಾಡಲು ಸೂಕ್ತ ಸೂತ್ರದ ವ್ಯವಸ್ಥೆ ಇಲ್ಲದ ಕಾರಣ ಹಲವು ವ್ಯತ್ಯಾಸಗಳಿಗೆ ಕಾರಣವಾಗಿತ್ತು ಎಂದಿದ್ದಾರೆ.

ADVERTISEMENT

ಐಜಿಎಸ್‌ಟಿ ಸಮಸ್ಯೆಗಳ ಪರಿಹಾರಕ್ಕೆ ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್‌ ಮೋದಿ ನೇತೃತ್ವದಲ್ಲಿ ಸಮಿತಿ ರೂಪಿಸಲಾಗಿದೆ.

ಬಿಜೆಪಿ ಆಡಳಿತವಿರುವ ಹಾಗೂ ಕೊರತೆ ಭರ್ತಿ ವಿಚಾರವಾಗಿ ಕೇಂದ್ರವನ್ನು ಬೆಂಬಲಿಸಿರುವ ಪಕ್ಷಗಳ ಆಡಳಿತ ಇರುವ 21 ರಾಜ್ಯಗಳು ಕೊರತೆ ಭರ್ತಿಗೆ ಒಟ್ಟು ₹ 97 ಸಾವಿರ ಕೋಟಿಯನ್ನು ಸಾಲವಾಗಿ ಪಡೆಯಲು ತೀರ್ಮಾನಿಸಿವೆ.

ಕೋವಿಡ್‌–19 ಕಾರಣದಿಂದಾಗಿ ಆಗಿರುವ ಕೊರತೆಯು ₹ 1.38 ಲಕ್ಷ ಕೋಟಿ (ಒಟ್ಟು ಕೊರತೆ ₹ 2.35 ಲಕ್ಷ ಕೋಟಿ). ನಷ್ಟದ ಭರ್ತಿಗೆ ರಾಜ್ಯಗಳ ಮುಂದೆ ಎರಡು ಆಯ್ಕೆಗಳನ್ನು ಕೇಂದ್ರ ಇರಿಸಿದೆ. ಮೊದಲನೆಯದು, ರಾಜ್ಯಗಳು ₹ 97 ಸಾವಿರ ಕೋಟಿಯನ್ನು ಆರ್‌ಬಿಐನಿಂದ ಸಾಲವಾಗಿ ಪಡೆಯಬಹುದು. ಈ ಸಾಲವನ್ನು ಮುಂದೆ ಕೇಂದ್ರವೇ ತೀರಿಸಲಿದೆ. ಎರಡನೆಯದು, ರಾಜ್ಯಗಳು ಒಟ್ಟು ₹ 2.35 ಲಕ್ಷ ಕೋಟಿಯನ್ನು ಮಾರುಕಟ್ಟೆಯಿಂದ ಸಾಲವಾಗಿ ಪಡೆಯಬಹುದು. ಈ ಸಾಲದ ಅಸಲನ್ನು ಕೇಂದ್ರವು ತೀರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.