ನವದೆಹಲಿ: ವಿಮಾ ಕಂಪನಿಗಳು ನಗದುರಹಿತ ಚಿಕಿತ್ಸೆಗೆ ಕ್ಲೇಮ್ಗಳನ್ನು ನಿರಾಕರಿಸುತ್ತಿವೆ ಎಂಬ ದೂರುಗಳ ಬಗ್ಗೆ ತಕ್ಷಣ ಗಮನಹರಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್ಡಿಎಐ) ಅಧ್ಯಕ್ಷ ಎಸ್.ಸಿ. ಕುಂಠಿಯಾ ಅವರಿಗೆ ಸೂಚಿಸಿದ್ದಾರೆ.
‘ಕೆಲವು ಆಸ್ಪತ್ರೆಗಳು ನಗದು ರಹಿತ ಚಿಕಿತ್ಸೆಗೆ ನಿರಾಕರಿಸುತ್ತಿರುವ ವರದಿಗಳು ಬರುತ್ತಿವೆ. ಅಧ್ಯಕ್ಷ ಕುಂಠಿಯಾ ಜೊತೆ ಮಾತನಾಡಿ, ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. 2020ರ ಮಾರ್ಚ್ನಲ್ಲಿ ಕೋವಿಡ್ ಕಾಯಿಲೆಯನ್ನು ಸಮಗ್ರ ಆರೋಗ್ಯ ವಿಮೆಯ ಭಾಗವನ್ನಾಗಿ ಮಾಡಲಾಗಿದೆ. ನಗದು ರಹಿತ ಚಿಕಿತ್ಸೆಯು ತಾತ್ಕಾಲಿಕ ಆಸ್ಪತ್ರೆಗಳಲ್ಲಿಯೂ ಲಭ್ಯವಿದೆ’ ಎಂದು ನಿರ್ಮಲಾ ಅವರು ಟ್ವೀಟ್ ಮಾಡಿದ್ದಾರೆ.
ಕೋವಿಡ್ಗೆ ಸಂಬಂಧಿಸಿದ ಕ್ಲೇಮ್ಗಳನ್ನು ಆದ್ಯತೆಯ ಮೇರೆಗೆ ವಿಲೇವಾರಿ ಮಾಡಬೇಕು ಎಂದು ಪ್ರಾಧಿಕಾರವು ವಿಮಾ ಕಂಪನಿಗಳಿಗೆ ಸೂಚಿಸಿದೆ ಎಂದೂ ಸಚಿವರು ತಿಳಿಸಿದ್ದಾರೆ. ವಿಮಾ ಕಂಪನಿಗಳು ಯಾವೆಲ್ಲ ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿಕೊಂಡಿವೆಯೋ ಆ ಆಸ್ಪತ್ರೆಗಳು ಕೋವಿಡ್–19ಕ್ಕೆ ನಗದು ರಹಿತ ಚಿಕಿತ್ಸೆ ನೀಡಬೇಕು ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.