ADVERTISEMENT

ಶೇ 16ರಷ್ಟು ಉತ್ಪಾದನೆ ಕುಸಿತ: 5 ಲಕ್ಷ ಟನ್‌ ಈರುಳ್ಳಿ ದಾಸ್ತಾನು

ಪಿಟಿಐ
Published 9 ಮಾರ್ಚ್ 2024, 15:34 IST
Last Updated 9 ಮಾರ್ಚ್ 2024, 15:34 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಪ್ರಸಕ್ತ ವರ್ಷದಲ್ಲಿ 5 ಲಕ್ಷ ಟನ್‌ ಈರುಳ್ಳಿ ಕಾಪು ದಾಸ್ತಾನು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಮುಕ್ತ ಮಾರುಕಟ್ಟೆಯಲ್ಲಿ ದರ ಏರಿಕೆ ನಿಯಂತ್ರಿಸಲು ಪ್ರತಿ ವರ್ಷ ಈರುಳ್ಳಿಯನ್ನು ದಾಸ್ತಾನು ಮಾಡಲಾಗುತ್ತದೆ. ಕಳೆದ ವರ್ಷ ಕೇಂದ್ರ ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಸಚಿವಾಲಯವು 5 ಲಕ್ಷ ಟನ್‌ ಈರುಳ್ಳಿ ದಾಸ್ತಾನು ಮಾಡಿತ್ತು. ಈ ಪೈಕಿ ಇನ್ನೂ ಒಂದು ಲಕ್ಷ ಟನ್‌ ದಾಸ್ತಾನು ಉಳಿದಿದೆ. 

ADVERTISEMENT

ಕೇಂದ್ರ ಸರ್ಕಾರದ ಏಜೆನ್ಸಿಗಳಾದ ಎನ್‌ಸಿಸಿಎಫ್‌ ಹಾಗೂ ನಾಫೆಡ್‌ ಮೂಲಕ ರೈತರಿಂದ ನೇರವಾಗಿ ಈರುಳ್ಳಿ ಖರೀದಿಸಿ ದಾಸ್ತಾನು ಮಾಡಲಾಗುತ್ತದೆ. ದರ ಏರಿಕೆಯಾದಾಗ ಸಂಗ್ರಹಿಸಿಟ್ಟಿರುವ ಈರುಳ್ಳಿಯನ್ನು ಖರೀದಿ ಏಜೆನ್ಸಿಗಳ ಮೂಲಕವೇ ಚಿಲ್ಲರೆ ಮಾರುಕಟ್ಟೆಯಲ್ಲಿ ರಿಯಾಯಿತಿ ದರದಡಿ ಮಾರಾಟ ಮಾಡಲಿದೆ. 

ದೇಶದಲ್ಲಿ ಈರುಳ್ಳಿಯ ಬೆಲೆ ನಿಯಂತ್ರಿಸುವ ಉದ್ದೇಶದಿಂದ ಇದೇ 31ರ ವರೆಗೆ ರಫ್ತಿಗೆ ನಿಷೇಧ ಹೇರಲಾಗಿದೆ. ಆದರೆ, ಮಿತ್ರ ರಾಷ್ಟ್ರಗಳನ್ನು ಈ ಪಟ್ಟಿಯಿಂದ ಹೊರಗಿಡಲಾಗಿದೆ.

ಉತ್ಪಾದನೆ ಶೇ 16ರಷ್ಟು ಕುಸಿತ: ಕಳೆದ ವರ್ಷಕ್ಕೆ ಹೋಲಿಸಿದರೆ 2023–24ನೇ ಸಾಲಿನಡಿ ಈರುಳ್ಳಿ ಉತ್ಪಾದನೆಯು ಶೇ 16ರಷ್ಟು ಕಡಿಮೆಯಾಗಲಿದೆ ಎಂದು ಕೇಂದ್ರ ಕೃಷಿ ಸಚಿವಾಲಯವು ಅಂದಾಜಿಸಿದೆ.

ಮಹಾರಾಷ್ಟ್ರದಲ್ಲಿ 34.31 ಲಕ್ಷ ಟನ್‌, ಕರ್ನಾಟಕ 9.95 ಲಕ್ಷ ಟನ್‌, ಆಂಧ್ರಪ್ರದೇಶ 3.54 ಲಕ್ಷ ಟನ್ ಹಾಗೂ ರಾಜಸ್ಥಾನದಲ್ಲಿ 3.12 ಲಕ್ಷ ಟನ್‌ನಷ್ಟು ಉತ್ಪಾದನೆ ಕುಸಿತವಾಗಲಿದೆ ಎಂದು ತಿಳಿಸಿದೆ.

‘ಹಾಗಾಗಿ, ದೇಶದಲ್ಲಿ ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಮುಂಜಾಗ್ರತೆಯಾಗಿ ಈರುಳ್ಳಿ ದಾಸ್ತಾನಿಗೆ ಸರ್ಕಾರ ನಿರ್ಧರಿಸಿದೆ’ ಎಂದು ಮೂಲಗಳು ತಿಳಿಸಿವೆ.

ಆಹಾರ ಪದಾರ್ಥಗಳ ಬೆಲೆ ನಿಯಂತ್ರಣಕ್ಕೆ ಕ್ರಮ: ಗೋಯಲ್

ನವದೆಹಲಿ (ಪಿಟಿಐ): ‘ದೇಶದಲ್ಲಿ ಈರುಳ್ಳಿ ಟೊಮೆಟೊ ಬೇಳೆಕಾಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕ್ರಮಕೈಗೊಂಡಿದೆ’ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ.

‘ಲೋಕಸಭೆಗೆ ಶೀಘ್ರವೇ ಚುನಾವಣೆ ನಡೆಯಲಿದೆ. ಈ ಹೊತ್ತಿನಲ್ಲಿ ಆಹಾರ ಪದಾರ್ಥಗಳ ಬೆಲೆಗಳನ್ನು ನಿಯಂತ್ರಿಸಲು ಕ್ರಮವಹಿಸಲಾಗಿದೆ. ಯಾವುದೇ ಪದಾರ್ಥದ ಬೆಲೆಯು ತಾತ್ಕಾಲಿಕವಾಗಿ ಏರಿಕೆಯಾದ ವೇಳೆ ಕೇಂದ್ರ ಸರ್ಕಾರವು ಕೆಲವೇ ದಿನಗಳಲ್ಲಿ ನಿಯಂತ್ರಿಸಿರುವ ಹಲವು ನಿದರ್ಶನಗಳಿವೆ’ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

ದೇಶದ ಮಹಿಳೆಯರ ಹಿತಕಾಯಲು ಸರ್ಕಾರ ಬದ್ಧವಾಗಿದೆ. ಆಹಾರದ ಹಣದುಬ್ಬರ ನಿಯಂತ್ರಣಕ್ಕೂ ಕ್ರಮವಹಿಸಿದೆ. ಇದಕ್ಕಾಗಿಯೇ ಕಳೆದ ಕೆಲವು ವರ್ಷಗಳಿಂದ ಬೆಲೆ ಸ್ಥಿರೀಕರಣ ನಿಧಿಯಡಿ ₹28 ಸಾವಿರ ಕೋಟಿಯನ್ನು ಖರ್ಚು ಮಾಡಿದೆ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.