ನವದೆಹಲಿ: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ನ (ಎಸ್ಎಐಎಲ್) ಭದ್ರಾವತಿ ಉಕ್ಕು ಘಟಕದ ಖಾಸಗೀಕರಣಕ್ಕೆ ಸಂಬಂಧಿಸಿದಂತೆ ಹೂಡಿಕೆದಾರರು ಆಸಕ್ತಿ ತೋರಿಸದೇ ಇರುವುದರಿಂದ ಕೇಂದ್ರ ಸರ್ಕಾರವು ಘಟಕವನ್ನು ಮಾರಾಟ ಮಾಡುವ ನಿರ್ಧಾರ ಕೈಬಿಟ್ಟಿದೆ.
ಭದ್ರಾವತಿಯಲ್ಲಿ ಇರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಘಟಕದಲ್ಲಿ (ವಿಐಎಸ್ಪಿ) ಸರ್ಕಾರವು ಹೊಂದಿರುವ ಶೇಕಡ 100ರಷ್ಟು ಷೇರನ್ನು ಮಾರಾಟ ಮಾಡಲು ನಿರ್ಧರಿಸಲಾಗಿತ್ತು. ಈ ಸಂಬಂಧ ಖರೀದಿ ಆಸಕ್ತಿ ತಿಳಿಸುವಂತೆ (ಇಒಐ) 2019ರ ಜುಲೈನಲ್ಲಿ ಹೂಡಿಕೆದಾರರಿಗೆ ಆಹ್ವಾನ ನೀಡಲಾಗಿತ್ತು.
ಹಲವು ಹೂಡಿಕೆದಾರರು ಖರೀದಿ ಆಸಕ್ತಿ ವ್ಯಕ್ತಪಡಿಸಿದ್ದರು. ಅರ್ಹ ಬಿಡ್ದಾರರ ಪರಿಶೀಲನೆ ನಡೆಸಲಾಗಿತ್ತು. ಆದರೆ, ಖರೀದಿ ಪ್ರಕ್ರಿಯೆ ಮುಂದುವರಿಸುವ ಬಗ್ಗೆ ಬಿಡ್ದಾರರಿಂದ ಹೆಚ್ಚಿನ ಆಸಕ್ತಿ ವ್ಯಕ್ತವಾಗದ ಕಾರಣ ಇಒಐ ಅನ್ನು ರದ್ದುಮಾಡುವ ಮತ್ತು ಸದ್ಯದ ಪ್ರಕ್ರಿಯೆಯನ್ನು ಕೈಬಿಡಲು ನಿರ್ಧರಿಸಲಾಯಿತು ಎಂದು ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆಯು (ಡಿಐಪಿಎಎಂ) ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.